ತಾಲೂಕಿನಲ್ಲಿ ನಡೆಯುವ ಪ್ರತಿ ಅಭಿವೃದ್ಧಿ ಕಾಮಗಾರಿಗಳು ನನ್ನ ಗಮನಕ್ಕೆ ತರದೆ ಗುದ್ದಲಿ ಪೂಜೆ ಅಥವಾ ಪ್ರಾರಂಭೋತ್ಸವ ಮಾಡಬಾರದೆಂದು ಶಾಸಕ ಕೆ.ವೈ.ನಂಜೇಗೌಡ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

ಮಾಲೂರು (ಜೂ.18): ತಾಲೂಕಿನಲ್ಲಿ ನಡೆಯುವ ಪ್ರತಿ ಅಭಿವೃದ್ಧಿ ಕಾಮಗಾರಿಗಳು ನನ್ನ ಗಮನಕ್ಕೆ ತರದೆ ಗುದ್ದಲಿ ಪೂಜೆ ಅಥವಾ ಪ್ರಾರಂಭೋತ್ಸವ ಮಾಡಬಾರದೆಂದು ಶಾಸಕ ಕೆ.ವೈ.ನಂಜೇಗೌಡ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಪಟ್ಟಣದ ಯೋಜನಾ ಪ್ರಾಧಿಕಾರದ ಕಛೇರಿಯಲ್ಲಿ ತಾಲೂಕು ಅಧಿಕಾರಿಗಳ, ಇಂಜಿನಿಯರ್‌ಗಳ, ಗುತ್ತಿಗೆದಾರರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಹಿಂದೆ ನನ್ನ ಗಮನಕ್ಕೆ ಬಾರದೆ ಕಾಮಗಾರಿಗಳ ಭೂಮಿ ಪೂಜೆ ನಡೆದಿದೆ .ಅಂದು ಬಿಜೆಪಿ ಸರ್ಕಾರ ಇತ್ತು. ಅಧಿಕಾರಿಗಳು ಒತ್ತಡದಲ್ಲಿ ನನ್ನ ಗಮನಕ್ಕೆ ತರದೆ ಕಾಮಗಾರಿಗಳು ಪ್ರಾರಂಭವಾಗುತ್ತಿದ್ದವು ಎಂದು ಅಸಮಾಧಾನ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ಶಾಸಕರ ಗಮನಕ್ಕೆ ತರಬೇಕು: ಈಗ ಈ ಹಿಂದೆ ಏನಾಯ್ತು ಅಂತ ಬೇಡ ಮುಂದೆ ತಾಲೂಕಿನ ಅಭಿವೃದ್ಧಿಗೆ ಏನಾಗಬೇಕು ಎಂದು ಚರ್ಚೆ ಮಾಡೋಣ. ತಾಲೂಕಿನಲ್ಲಿ ಯಾವುದೇ ಅನುದಾನ ಬಂದಲ್ಲಿ ಒಂದು ಲಕ್ಷ ರುಪಾಯಿಗೂ ಮೇಲ್ಪಟ್ಟ ಯಾವುದೇ ಕಾಮಗಾರಿ ಭೂಮಿ ಪೂಜೆ ಅಥವಾ ಪ್ರಾರಂಭೋತ್ಸವ ನನ್ನ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

25 ಕೋಟಿ ವೆಚ್ಚದಲ್ಲಿ ಮಾಲೂರು ಅಭಿವೃದ್ಧಿಗೆ ನೀಲಿನಕ್ಷೆ: ಶಾಸಕ ನಂಜೇಗೌಡ

ಇದೇ ಸಭೆಯಲ್ಲಿ ತಾಲೂಕಿನಲ್ಲಿ ಸರ್ಕಾರದಿಂದ ಬಂದಿರುವ ಅನುದಾನದಲ್ಲಿ ರಸ್ತೆ ಸಮುದಾಯ ಭವನ, ಶಾಲಾ ಕಟ್ಟಡ, ಕಾಮಗಾರಿಗಳ ಸ್ಥಿತಿ ಗತಿಗಳ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಪರಿಶೀಲನೆ ನಡೆಸಿದ ಶಾಸಕ ನಂಜೇಗೌಡರು ತಾಲೂಕಿನಲ್ಲಿ ಶಿಕ್ಷಣ ಇಲಾಖೆಯ ಶಾಲೆಗಳು ದುಸ್ಥಿತಿಯಲ್ಲಿರುವ 22 ಶಾಲೆಗಳು ನೂತನ ಕಟ್ಟಡ ನಿರ್ಮಾಣ ಮಾಡಲು ಸಿದ್ಧವಾಗಿದ್ದು ಹಲವು ಕಡೆ ನಿವೇಶನ ಸಮಸ್ಯೆ ಇರುವ ಬಗ್ಗೆ ನನ್ನ ಗಮನಕ್ಕೆ ಯಾಕೆ ತಂದಿಲ್ಲ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ಸಬ್‌ ಸ್ಟೇಷನ್‌ಗೆ ಜಾಗ ಗುರ್ತಿಸಿ: ಕೋಲಾರ ರಸ್ತೆ ಕಾಮಗಾರಿ ಚಾಲನೆಯಲ್ಲಿ ಇದ್ದು ಮರ ತೆಗೆಯಲು ವಿದ್ಯುತ್‌ ಕಡಿತ ಗೋಳಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಆದೇಶಿಸಿದ ಶಾಸಕರು ಕುಡಿಯನೂರು, ವಪ್ಪಚಹಲ್ಲಿ ಗ್ರಾಮದ ಬಳಿ ಸಬ್‌ ಸ್ಟೇಷನ್‌ ಮಂಜೂರಾಗಿದ್ದು, ಸ್ಥಳ ಸಮಸ್ಯೆ ಇದ್ದು ಸರ್ಕಾರಿ ಭೂಮಿಗೆ ಗುರ್ತಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದರು. 

ಬಿಜೆಪಿ ಮುಖಂಡರಿಂದಲೇ ಪಕ್ಷಕ್ಕೆ ಸೋಲು: ಸಂಸದ ಮುನಿಸ್ವಾಮಿ ಬೇಸರ

ತಾಲೂಕು ಕಚೇರಿಗಳಲ್ಲಿರುವ ಇಂಜಿನೀಯರ್‌ಗಳು ಕಾಮಗಾರಿಗಳನ್ನು ಬೇಕಾದವರ ಗುತ್ತಿಗೆದಾರರಿಗೆ ಕೆಲಸ ನೀಡುವುದು, ಮತ್ತು ಬೇಕಾದವರ ಕೈಯಲ್ಲಿ ಕೆಲಸ ಮಾಡುವುದು ಇನ್ನೂ ಮುಂದೆ ನಡೆಯುವುದಿಲ್ಲ. ಏಕೆಂದರೆ ಹಲವಾರು ಇಂಜಿನಿಯರ್‌ಗಳು ಬೇಕಾದವರಿಗೆ ಲೈಸೆನ್ಸ್‌ ಮಾಡಿಸಿ ಜೊತೆಗೆ ಇಟ್ಟುಕೊಂಡು ಅವರಿಗೆ ಕೆಲಸ ಹಾಕಿಸಿ ಮಾಡಿಸುತ್ತಿರುವುದು ನನಗೆ ಗೊತ್ತು ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್‌ ಕೆ.ರಮೇಶ್‌, ಲೋಕೋಪಯೋಗಿ ಸಹಾಯಕ ಇಂಜಿಯರ್‌ ವೆಂಕಟೇಶ್‌, ಅಭಿಯಂತರರಾದ ಜಭಿ ಉಲ್ಲಾ, ಜಿ.ನಾರಾಯಣಸ್ವಾಮಿ, ಬಿಇಒ ಚಂದ್ರಕಲಾ, ಎಇಇ ಅನ್ಸ್‌ರ್‌ ಭಾಷ, ಪೂರ್ಣಿಮ, ಇನ್ನಿತರರು ಹಾಜರಿದ್ದರು.