ಕನ​ಕ​ಪುರ ವಿಧಾ​ನ​ಸಭಾ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಅಭ್ಯ​ರ್ಥಿ​ಯಾಗಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ನಾಮ​ಪತ್ರ ಸಲ್ಲಿ​ಸಿರುವ ನಡುವೆಯೇ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸಂಸದ ಡಿ.ಕೆ.​ಸು​ರೇಶ್‌ ಕೂಡ ಕಾಂಗ್ರೆಸ್‌ ಅಭ್ಯ​ರ್ಥಿ​ಯಾಗಿ ಗುರುವಾರ ಉಮೇ​ದು​ವಾ​ರಿಕೆ ಸಲ್ಲಿ​ಸಿ​ದ್ದಾರೆ. 

ಕನಕಪುರ (ಏ.21): ಕನ​ಕ​ಪುರ ವಿಧಾ​ನ​ಸಭಾ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಅಭ್ಯ​ರ್ಥಿ​ಯಾಗಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ನಾಮ​ಪತ್ರ ಸಲ್ಲಿ​ಸಿರುವ ನಡುವೆಯೇ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸಂಸದ ಡಿ.ಕೆ.​ಸು​ರೇಶ್‌ ಕೂಡ ಕಾಂಗ್ರೆಸ್‌ ಅಭ್ಯ​ರ್ಥಿ​ಯಾಗಿ ಗುರುವಾರ ಉಮೇ​ದು​ವಾ​ರಿಕೆ ಸಲ್ಲಿ​ಸಿ​ದ್ದಾರೆ. ಬೆಳಗ್ಗೆ ಚನ್ನ​ಪ​ಟ್ಟಣ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗಂಗಾ​ಧರ್‌ ಅವರ ನಾಮ​ಪತ್ರ ಸಲ್ಲಿಕೆಯಲ್ಲಿ ಭಾಗಿ​ಯಾ​ಗಿದ್ದ ಡಿ.ಕೆ.ಶಿವಕುಮಾರ್‌ ಅವರ ಸೋದರನೂ ಆಗಿರುವ ಡಿ.ಕೆ.​ಸು​ರೇಶ್‌ ಮಧ್ಯಾ​ಹ್ನದ ವೇಳೆಗೆ ದಿಢೀರ್‌ ಕನ​ಕ​ಪುರ ತಾಲೂಕು ಕಚೇ​ರಿಗೆ ಆಗ​ಮಿಸಿ ಮೂರು ಸೆಟ್‌ ನಾಮಪತ್ರ ಸಲ್ಲಿಸಿದರು.

Add Asianetnews Kannada as a Preferred SourcegooglePreferred

ಈ ಹಿಂದೆ ರಾಮನಗರದಲ್ಲಿ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಡಿ.ಕೆ.ಸುರೇಶ್‌ ಸ್ಪರ್ಧಿಸಲಿದ್ದಾರೆಂಬ ಸುದ್ದಿ ಹರಿದಾಡಿತ್ತು. ಆದರೆ, ನಂತರ ಅವರು ಅಂಥ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ಇದೀಗ ದಿಢೀರ್‌ ಬೆಳವಣಿಗೆಯಲ್ಲಿ ಡಿ.ಕೆ.ಸುರೇಶ್‌ ಅವರು ಕನಕಪುರದಿಂದಲೇ ನಾಮಪತ್ರ ಸಲ್ಲಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಡಿ.ಕೆ.ಶಿವಕುಮಾರ್‌ ಅವರು ಇನ್ನೂ ಐಟಿ, ಇ.ಡಿ (ಜಾರಿ ನಿರ್ದೇಶನಾಲಯ) ಉರುಳಿನಿಂದ ಪಾರಾಗಿಲ್ಲ. ಬಿಜೆಪಿ ತಮ್ಮ ಸ್ಪರ್ಧೆಯನ್ನು ತಡೆಯಬಹುದು, ನಾಮಪತ್ರ ಅನೂರ್ಜಿತಗೊಳ್ಳಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಸೋದರನಿಂದಲೂ ನಾಮಪತ್ರ ಸಲ್ಲಿಸಿದ್ದಾರೆ. ಒಂದು ವೇಳೆ ಡಿ.ಕೆ.ಶಿವಕುಮಾರ್‌ ಅವರ ಉಮೇದುವಾರಿಕೆ ಮಾನ್ಯಗೊಂಡಲ್ಲಿ ಡಿ.ಕೆ.ಸುರೇಶ್‌ ಅವರು ತಮ್ಮ ನಾಮಪತ್ರ ಹಿಂಪಡೆಯಲಿದ್ದಾರೆ ಎನ್ನಲಾಗಿದೆ.

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತ್ಯ: ಒಟ್ಟು 3632 ಮಂದಿ ಕಣಕ್ಕೆ

ಡಿ.ಕೆ.ಶಿವಕುಮಾರ್‌ ವಿರುದ್ಧ 2013ರಿಂದ 2018ರ ವರೆಗೆ ಅಕ್ರಮ ಆಸ್ತಿ ಗಳಿಕೆ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದ ರಾಜ್ಯ ಸರ್ಕಾರದ ಆದೇಶ ರದ್ದು ಕೋರಿ ಡಿ.ಕೆ.ಶಿವಕುಮಾರ್‌ ಸಲ್ಲಿಸಿದ್ದ ತಕರಾರು ಅರ್ಜಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಆದರೆ ಇದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಇದೇ ವೇಳೆ, 2019ರಲ್ಲಿ ರಾಜ್ಯ ಸರ್ಕಾರ ಈ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಅನುಮತಿ ನೀಡಿದ್ದ ಕ್ರಮವನ್ನೂ ಡಿ.ಕೆ.ಶಿವಕುಮಾರ್‌ ಹೈಕೋರ್ಟಲ್ಲಿ ಪ್ರಶ್ನಿಸಿದ್ದು, ಅದು ಗುರುವಾರ ವಜಾಗೊಂಡಿದೆ. ಇದರಿಂದ ಡಿ.ಕೆ.ಶಿವಕುಮಾರ್‌ಗೆ ತೀವ್ರ ಹಿನ್ನಡೆಯಾದಂತಾಗಿದ್ದರೂ ಮೇ 30ರ ವರೆಗೆ ಅವರಿಗೆ ಸಿಬಿಐ ತನಿಖೆ ಆತಂಕ ಇಲ್ಲ. ಆದರೆ ಎರಡು ವರ್ಷಗಳಿಂದ ನಡೆಸಿರುವ ಸಿಬಿಐ ತನಿಖೆ ಬಹುತೇಕ ಪೂರ್ಣಗೊಂಡಿದೆ.

ಈ ಮಧ್ಯೆ, ಡಿ.ಕೆ.ಶಿವಕುಮಾರ್‌ ಅವರು ನಾಮಪತ್ರ ಸಲ್ಲಿಸುವ ಹಿಂದಿನ ದಿನ ಚೆನ್ನೈನಲ್ಲಿರುವ ಆದಾಯ ತೆರಿಗೆ ಇಲಾಖೆಯಿಂದ ಖುದ್ದು ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯು ಡಿ.ಕೆ.ಶಿವಕುಮಾರ್‌ ಅವರ ಸ್ಪರ್ಧೆಯನ್ನು ತಡೆಯಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಬಹುದು ಎಂಬ ಆತಂಕ ಕಾಂಗ್ರೆಸ್‌ಗೆ ಮೂಡಿದೆ. ಕನಕಪುರದಿಂದ 2008ರಿಂದ 18ರ ವರೆಗೆ ಮೂರು ಚುನಾವಣೆಗಳಲ್ಲಿ ಡಿ.ಕೆ.ಶಿವಕುಮಾರ್‌ ಅವರು ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ.

ಡಿಕೆಶಿ ವಿರುದ್ಧ 19 ಕ್ರಿಮಿ​ನಲ್‌ ಮೊಕ​ದ್ದ​ಮೆ​!: ಕನ​ಕ​ಪುರ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಅಭ್ಯ​ರ್ಥಿ​ಯಾಗಿ ಕಣ​ಕ್ಕಿ​ಳಿ​ದಿ​ರುವ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ವಿರುದ್ಧ ಒಂದಲ್ಲ, ಎರ​ಡಲ್ಲ ಬರೊ​ಬ್ಬರಿ 19 ಕ್ರಿಮಿ​ನಲ್‌ ಮೊಕ​ದ್ದ​ಮೆ​ಗಳು ದಾಖ​ಲಾ​ಗಿವೆ. ಚುನಾ​ವಣಾ ಆಯೋ​ಗಕ್ಕೆ ಸಲ್ಲಿ​ಸಿ​ರುವ ತಮ್ಮ 108 ಪುಟ​ಗಳ ಅಫಿ​ಡವಿಟ್‌ನಲ್ಲಿ ಡಿ.ಕೆ.​ಶಿ​ವ​ಕು​ಮಾರ್‌ ಅವರು ತಮ್ಮ ಮೇಲೆ 19 ಕ್ರಿಮಿ​ನಲ್‌ ಮೊಕ​ದ್ದ​ಮೆ​ಗಳಿವೆ. ಆದರೆ, ಯಾವ ಮೊಕ​ದ್ದ​ಮೆ​ಗ​ಳಲ್ಲೂ ದೋಷಾರೋಪ ಪಟ್ಟಿಸಲ್ಲಿಕೆ ಆಗಿಲ್ಲ ಎಂದು ಉಲ್ಲೇಖಿ​ಸಿ​ದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಕನ​ಕ​ಪು​ರ​ದ ಜನರಿಗೆ ಸ್ವಾತಂತ್ರ್ಯ ಸಿಗಬೇಕಿದೆ: ಸಚಿವ ಅಶ್ವತ್ಥ ನಾರಾ​ಯಣ

ನಾಮಪತ್ರ ತಿರಸ್ಕರಿಸೋ ಕೆಲಸ ಬಿಜೆಪಿಯದಲ್ಲ, ಚುನಾವಣಾ ಆಯೋಗದ್ದು. ಡಿ.ಕೆ.ಶಿವಕುಮಾರ್‌ ಮಾಡಿರೋ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರ ನಾಮಪತ್ರ ಕಾನೂನುಬದ್ಧವಾಗಿದ್ದರೆ ಯಾಕೆ ಭಯಪಡಬೇಕು? ಆಂತರಿಕ ಭಯದ ಹಿನ್ನೆಲೆಯಲ್ಲಿ ಸಂಸದ ಡಿ.ಕೆ.ಸುರೇಶ್‌ ನಾಮಪತ್ರ ಹಾಕಿದ್ದಾರೆ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ