ರಾಜ್ಯದಲ್ಲಿ 3ನೇ ಸಿಎಂ: ಬಿಜೆಪಿ ಮುಖಂಡರೇ ಹೇಳಿಕೆ ಕೊಟ್ಟಿದ್ದು, ಡಿಕೆಶಿ
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ 136 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ: ಡಿ.ಕೆ. ಶಿವಕುಮಾರ್
ಮದ್ದೂರು(ಆ.12): ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆಂದು ನಾವು ಹೇಳಿದ್ದಲ್ಲ. ಬಿಜೆಪಿಯ ಹಲವು ಮುಖಂಡರೇ ಆ ಬಗ್ಗೆ ಹೇಳಿಕೆ ಕೊಟ್ಟಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯ ಹಲವು ಮುಖಂಡರ ಹೇಳಿಕೆಯನ್ನಾಧರಿಸಿ ಮೂರನೇ ಸಿಎಂ ಬರುತ್ತಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಇಂತಹ ಗೊಂದಲ ನಮ್ಮಲ್ಲಿ ಇಲ್ಲ. ಎಲ್ಲ ಗೊಂದಲಗಳೂ ಮುಗಿದಿವೆ ಎಂದು ತಿಳಿಸಿದರು.
136 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು:
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ 136 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲಿ ಸರ್ವೆ ಮಾಡಿಸಿದ್ದೇನೆ. ಮದ್ದೂರು, ಮಳವಳ್ಳಿ, ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರ ಚರ್ಚೆ ಮಾಡುತ್ತಿದ್ದೇವೆ ಎಂದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ: ಮೋದಿಗೆ ಸಂಸಾರದ ನಿರ್ವಹಣೆ ಗೊತ್ತಿಲ್ಲ, ರಮೇಶ್ ಕುಮಾರ್
ಹಣ ಪಡೆದು ಧ್ವಜ ಹಂಚಿಕೆ:
ಕಾಂಗ್ರೆಸ್ಸಿಗರು ಅಮೃತ ಮಹೋತ್ಸವದ ಪಾದಯಾತ್ರೆ ಘೋಷಣೆ ಮಾಡಿದ ನಂತರ ಬಿಜೆಪಿ ನೇತೃತ್ವದ ಸರ್ಕಾರ ಹರ್ ಘರ್ ತಿರಂಗ ಅಭಿಯಾನ ಘೋಷಣೆ ಮಾಡಿದೆ. ಪ್ರತಿ ಮನೆ ಮೇಲೂ ರಾಷ್ಟ್ರ ಧ್ವಜವನ್ನು ಹಾರಿಸುವಂತೆ ಸೂಚಿಸಿದೆ. ಆದರೆ, ಅಂಗಡಿಗಳು ಮತ್ತು ಸೊಸೈಟಿಗಳಲ್ಲಿ 20 ರು. ಹಣ ಕೊಟ್ಟು ಧ್ವಜ ಖರೀದಿ ಮಾಡುವಂತೆ ತಿಳಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಉಚಿತವಾಗಿ ಪಡಿತರ ಅಕ್ಕಿ ಕೊಟ್ಟಿದ್ದೆವು. ಒಂದು ಕೆಜಿ ಅಕ್ಕಿ 22 ರಿಂದ 23 ರು. ಆಗಿತ್ತು. ಒಂದು ಕೆಜಿ ಅಕ್ಕಿ ದರದಷ್ಟು ಬೆಲೆ ರಾಷ್ಟ್ರ ಧ್ವಜಕ್ಕೆ. ಇದನ್ನು ಉಚಿತವಾಗಿಯೇ ಕೊಡಬಹುದಿತ್ತು. ಧ್ವಜವನ್ನೂ ಮಾರಾಟ ಮಾಡುವ ಮೂಲಕ ಹಣ ಮಾಡಿಕೊಳ್ಳುವ ದಂಧೆಗೆ ಬಿಜೆಪಿ ಇಳಿದಿದೆ ಎಂದು ಟೀಕಿಸಿದರು. ನಾನು ಈಗಾಗಲೇ ಒಂದೂವರೆ ಲಕ್ಷ ಧ್ವಜಕ್ಕೆ ಆರ್ಡರ್ ಕೊಟ್ಟಿದ್ದೇನೆ. ಖಾದಿ ಮಂಡಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಧ್ವಜ ಖರೀದಿಗೆ ಮುಂದಾಗಿದ್ದು, ಶೀಘ್ರ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಸ್ವಾತಂತ್ರ್ಯದ ಮೇಲೆ ನಮ್ಮ ಹಕ್ಕು ಹೆಚ್ಚು: ಡಿಕೆಶಿ
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ಹಾಗಾಗಿ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಗೀತೆ ಮೇಲೆ ನಮಗೆ ಹಕ್ಕು ಜಾಸ್ತಿ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಪಟ್ಟಣದ ಶಿವಪುರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಪಾದಯಾತ್ರೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನಮ್ಮ ನಾಯಕರುಗಳ ತ್ಯಾಗ, ಹೋರಾಟ, ಬಲಿದಾನದಿಂದ ಸ್ವಾತಂತ್ರ್ಯ ಬಂದಿದೆ. 75ನೇ ಅಮೃತ ಮಹೋತ್ಸವವನ್ನು ನಾವೆಲ್ಲರೂ ಸಂಭ್ರಮಿಸಿಬೇಕು. ಪಾದಯಾತ್ರೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಧ್ವಜ ಹಿಡಿಯಲಿದ್ದಾರೆ ಎಂದು ಹೇಳಿದರು.
ಪಕ್ಷ ಸಂಘಟನೆ, ರಾಷ್ಟ್ರಪ್ರೇಮಕ್ಕಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ. 75ನೇ ವರ್ಷದ ಸಂಭ್ರಮವನ್ನು ಕಳೆದುಕೊಳ್ಳಬೇಡಿ. ನೂರನೇ ವರ್ಷಾಚರಣೆ ವೇಳೆಗೆ ನಾವು ಬದುಕಿರುತ್ತೇವೋ ಇಲ್ಲವೋ ಗೊತ್ತಿಲ್ಲ. ಈ ಸ್ವಾತಂತ್ರ್ಯದ ನಡಿಗೆ ಇತಿಹಾಸದ ನಡಿಗೆ ಎಂದರು.
ರಾಜ್ಯ ರಾಜಕಾರಣಕ್ಕೆ ಸಿ.ಟಿ.ರವಿ ವಾಪಸ್?: ರಾಜ್ಯಾಧ್ಯಕ್ಷರಾಗಿ ನೇಮಕವಾಗುತ್ತಾರಾ?
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರಗಳು ಜನವಿರೋಧಿಯಾಗಿವೆ. ರೈತರ ಗೊಬ್ಬರ ಪರಿಸ್ಥಿತಿ ಗೊತ್ತಿದೆ. ರೈತರ ಹಾಲಿನ ದರ 28 ರು.ಗಿಂತ ಹೆಚ್ಚು ಕೊಡುತ್ತಿಲ್ಲ. ಅದಕ್ಕೂ ಜಿಎಸ್ಟಿ ಹಾಕಿದ್ದಾರೆ. ಅಡುಗೆ ಅನಿಲ, ಪೆಟ್ರೊಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ರೈತರ ಉತ್ಪನ್ನಗಳ ಯಾವುದೇ ಬೆಲೆಗಳು ಹೆಚ್ಚಳವಾಗಿಲ್ಲ ಎಂದು ಕಿಡಿಕಾರಿದರು.
ಶಾಸಕ ಮಧು ಮಾದೇಗೌಡ, ಕೆಪಿಸಿಸಿ ಉಪಾಧ್ಯಕ್ಷರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಕೆಪಿಸಿಸಿ ಸದಸ್ಯ ಎಸ್. ಗುರುಚರಣ್, ಮುಖಂಡ ಡಾ.ಹೆಚ್.ಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಮುಖಂಡರಾದ ಸುರೇಶ್ ಕಂಠಿ, ಚಂದೂಪುರ ಪಾಪಣ್ಣ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಕಾರ್ಯದರ್ಶಿ ಅಜ್ಜಹಳ್ಳಿ ರಾಮಕೃಷ್ಣ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಮಮತಾ ಶಂಕರೇಗೌಡ ಇತರರರಿದ್ದರು.