ಕಾಂಗ್ರೆಸ್‌ಗೆ ನೈಜ ಕಾಳಜಿ ಇದ್ದರೆ ತಮಿಳುನಾಡಿನ ಕಾಂಗ್ರೆಸ್‌ ಮುಖಂಡರ ಜೊತೆ ಮಾತುಕತೆ ನಡೆಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸವಾಲು ಹಾಕಿದ್ದಾರೆ 

ಮಂಗಳೂರು (ಜ. 10): ರಾಜ್ಯದಲ್ಲಿ ಕೊರೋನಾ ಸೋಂಕು (Covid 19) ಏರಿಕೆಯಾಗುತ್ತಿರುವುದರಿಂದ ಸರ್ಕಾರ ಜನರ ಆರೋಗ್ಯ ದೃಷ್ಟಿಯಿಂದ ಕೈಕೊಂಡಿರುವ ಕಾನೂನುಗಳಿಗೆ ಕಾಂಗ್ರೆಸ್‌ (Congress) ಗೌರವ ನೀಡದೆ, ಕೇವಲ ನಾಯಕತ್ವಕ್ಕಾಗಿ ಡಿ.ಕೆ.ಶಿವಕುಮಾರ್‌ (D K Shivakumar) ಅವರು ಮೇಕೆದಾಟು ಪಾದಯಾತ್ರೆ (Mekedatu Padayatre) ಎಂಬ ಡ್ರಾಮಾ ನಡೆಸುತ್ತಿದ್ದಾರೆ. ರಾಜ್ಯದ ನಾಗರಿಕರು ಎಲ್ಲವನ್ನು ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ಉತ್ತರವನ್ನು ಕಾಂಗ್ರೆಸ್‌ ಪಕ್ಷಕ್ಕೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalin Kumar Kateel) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಭಾನುವಾರ ಹೇಳಿಕೆ ನೀಡಿರುವ ಅವರು, ಮೇಕೆದಾಟು ಯೋಜನೆಯ ವಿರುದ್ಧ ಕೋರ್ಟ್‌ನಲ್ಲಿರುವ ದಾವೆ ಇತ್ಯರ್ಥವಾದ ತಕ್ಷಣ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಆದರೆ ಕಾಂಗ್ರೆಸ್‌ ಪಕ್ಷಕ್ಕೆ ಜನರ ಬಗ್ಗೆ ನೈಜ ಕಾಳಜಿ ಇದ್ದರೆ ತಮಿಳುನಾಡಿನಲ್ಲಿರುವ ತಮ್ಮವರ ಜೊತೆ ಮಾತುಕತೆ ನಡೆಸಿ ವಿವಾದ ಇತ್ಯರ್ಥಪಡಿಸಬಹುದಿತ್ತು. ವಿವಾದ ಕೋರ್ಟ್‌ನಲ್ಲಿರುವ ವಿಷಯ ಗೊತ್ತಿದ್ದರೂ, ಜನತೆಗೆ ತಪ್ಪು ಸಂದೇಶ ನೀಡಲು ಪ್ರಯತ್ನಿಸುವ ಕಾಂಗ್ರೆಸ್‌ನ ರಾಜಕೀಯ ಉದ್ದೇಶದ ಅರಿವು ಜನತೆಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಇದ್ದ ಸಂದರ್ಭ 2014ರಿಂದ 2018ರ ವರೆಗೆ ಯೋಜನೆಯ ಡಿಪಿಆರ್‌ನ್ನು ಸುಮ್ಮನೆ ಇಟ್ಟುಕೊಂಡಿದ್ದು ಯಾಕೆ ಎಂಬುದನ್ನು ಡಿಕೆಶಿ ರಾಜ್ಯದ ಜನತೆಗೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.

ನೆಲದ ಕಾನೂನಿನ ಬಗ್ಗೆ ಗೌರವವಿಲ್ಲ :

ಕೊರೋನಾ ಸೋಂಕು ವ್ಯಾಪಕವಾಗಿ ಹರಡದಂತೆ ಹಾಗೂ ಜನರು ಇನ್ನಷ್ಟುಸಂಕಷ್ಟಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ನಾನಾ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಈ ಹಿಂದೆ ರಾಜ್ಯವನ್ನು ಆಡಳಿತ ನಡೆಸಿದ ನಾಯಕರೇ ಈ ನೆಲದ ಕಾನೂನನ್ನು ಉಲ್ಲಂಘಿಸಿ ಕಾನೂನಿಗೆ ಗೌರವ ನೀಡದೆ, ಗೂಂಡಾಗಿರಿ, ದರ್ಪ ಪ್ರದರ್ಶಿಸುತ್ತಿರುವುದು ಕಾಂಗ್ರೆಸ್‌ ಸಂಸ್ಕೃತಿಯನ್ನು ತೋರಿಸುತ್ತದೆ. ಜನರ ಆರೋಗ್ಯದ ಬಗ್ಗೆ, ಹಿತಾಸಕ್ತಿಯ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲದ ಕಾಂಗ್ರೆಸ್‌ ಮುಂದೆ ರಾಜ್ಯದಲ್ಲಿ ನಿರ್ನಾಮವಾಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿMekedatu padayatra ಪಾದಯಾತ್ರೆ ಮಾಡದಂತೆ ಸಿದ್ದರಾಮಯ್ಯಗೆ ಹೇಳಿದ್ಯಾಕೆ? ಸ್ಪಷ್ಟನೆ ಕೊಟ್ಟ ಡಿಕೆಶಿ

ರಾಜ್ಯದ ಹಿತದೃಷ್ಟಿ, ಇಲ್ಲಿನ ನಾಗರಿಕರ ಬಗ್ಗೆ ಕಾಳಜಿ ಇದ್ದರೆ ಕೊರೋನಾ ನಿಯಂತ್ರಣಕ್ಕೆ ಪೂರಕವಾಗಿ ವರ್ತಿಸಲಿ. ಬದಲಾಗಿ ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಹೆಸರಿನಲ್ಲಿ ಜನಸೇರಿಸಿ ಕೊರೋನಾ ವ್ಯಾಪಕವಾಗಿ ಹರಡುವಂತೆ ಮಾಡಿದರೆ, ಅದಕ್ಕೆ ಕಾಂಗ್ರೆಸ್‌ ಪಕ್ಷ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನನ್ನನ್ನು ಮತ್ತೆ ಜೈಲಿಗೆ ಹಾಕಿಸಲು ಷಡ್ಯಂತ್ರ: ಡಿಕೆಶಿ

ನನ್ನನ್ನು ಮತ್ತೆ ಜೈಲಿಗೆ ಹಾಕಿಸಬೇಕೆಂದು ಷಡ್ಯಂತ್ರ ಮಾಡ್ತಿದ್ದಾರೆ. ಆದ್ರೆ ನಾನು ಷಡ್ಯಂತ್ರಕ್ಕೆ ಹೆದರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತೆ ಗುಡುಗಿದ್ದಾರೆ. ಸ್ವಗ್ರಾಮ ದೊಡ್ಡಆಲಹಳ್ಳಿಯಲ್ಲಿ ಭಾವನಾತ್ಮಕ ಭಾಷಣ ಮಾಡಿದ ಡಿ.ಕೆ. ಶಿವಕುಮಾರ್ ಇಡೀ ಊರಿನಲ್ಲಿ ಇಂಥ ಸಂಭ್ರಮ ನಾನು ನೋಡಿರಲಿಲ್ಲ. ನಿಮ್ಮಲ್ಲೆರಿಗೂ ನನ್ನ ಧನ್ಯವಾದಗಳು. ನಾನು ಜೈಲಿಗೆ ಹೋದಾಗ ನಿಮ್ಮ ಅಭಿಮಾನ ಬೆಂಬಲ ಮರೆಯೋಕೆ ಆಗಲ್ಲ. ಡಿ.ಕೆ. ಶಿವಕುಮಾರ್ ದೊಡ್ಡಆಲಹಳ್ಳಿಯ ಕನಕಪುರದವನು ಅಂತಾರೆ ಎಂದರು.

ಇದನ್ನೂ ಓದಿMekedatu Padayatre ಪಾದಯಾತ್ರೆಯಲ್ಲಿದ್ದ ಸಿದ್ದರಾಮಯ್ಯಗೆ ಜ್ವರ, ಕಳವಳ ವ್ಯಕ್ತಪಡಿಸಿದ ಸಚಿವ

ತಿಹಾರ ಜೈಲಿಗೆ ಹೋಗಿದ್ದಕ್ಕೆ ಈ ಗಡ್ಡ ಬಿಟ್ಟಿದ್ದೇನೆ. ನೀವೆ ಇದಕ್ಕೆ ಮುಕ್ತಿ ಕೊಡಬೇಕು. ನಾನು ನಿಮ್ಮ ಮಗ. ನೀವೇ ಡಿ.ಕೆ. ಶಿವಕುಮಾರ್. ಕೇಂದ್ರ ಸರ್ಕಾರ ಮತ್ತೊಮ್ಮೆ ದಬ್ಬಾಳಿಕೆ ಮಾಡ್ತಿದ್ದಾರೆ. ಮತ್ತೊಮ್ಮೆ ಜೈಲಿಗೆ ಹಾಕಿಸಬೇಕು ಅಂತಾ ಷಡ್ಯಂತ್ರ ಮಾಡ್ತಿದ್ದಾರೆ. ಆದ್ರೆ ನಾನು ಈ ಷಡ್ಯಂತ್ರಕ್ಕೆ ಹೆದರೋದಿಲ್ಲ ಎಂದು ಹೇಳಿದರು.