* ಕರ್ನಾಟಕದಲ್ಲಿ ಮಳೆ ಅವಾಂತರ* ಬಿಬಿಎಂಪಿ ಅಧಿಕಾರಿಗಳ ಜತೆ ಸಿಎಂ ಬೊಮ್ಮಾಯಿ ಸರಣಿ ಸಭೆ* ಸಿಎಂ ಉತ್ಸವಕ್ಕೆ ಧನ್ಯವಾದಗಳೊಂದಿಗೆ ವ್ಯಂಗ್ಯವಾಡಿದ ಡಿಕೆಶಿ

ಬೆಂಗಳೂರು, (ನ.24): ನಗರದಲ್ಲಿ ಮಳೆಹಾನಿ ಪ್ರದೇಶಗಳಿಗೆ (Rain Damage Area) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಅಲ್ಲದೇ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಇಂದು(ನ.24) ಬಿಬಿಎಂಪಿ (BBMP) ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯಿಸಿದ್ದು, ಸಿಎಂ ಉತ್ಸವಕ್ಕೆ ಧನ್ಯವಾದ ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.

Karnataka Rain| ಮನೆಗಳಿಗೆ ನೀರು ನುಗ್ಗಿದ್ದರೆ ತಕ್ಷಣ 10 ಸಾವಿರ ಪರಿಹಾರ

ಈಗ ಮತ್ತೆ ದೊಡ್ಡ ಮಟ್ಟದ ಪ್ರವಾಹ ಎದುರಾಗಿದೆ. ರೈತ (farmers) ಬೆಳೆದ ಬೆಳೆ ಕೊಳೆತು ಹೋಗಿದೆ. ಭತ್ತ, ತೊಗರಿ, ತರಕಾರಿ, ಹಣ್ಣು ಎಲ್ಲ ಕೊಳೆತು ಹೋಗಿದೆ, ಲಕ್ಷ ಹೆಕ್ಟೇರ್ ಗಟ್ಟಲೇ ಬೆಳೆ ನಾಶ ಆಗಿದೆ. ನಿಮ್ಮ ಸರ್ಕಾರ ಯಾರ ಪರವಾಗಿದೆ ಎಂದು ಉತ್ತರಿಸಿ. ಸಿಎಂ ಬೆಂಗಳೂರು ನಗರ ವೀಕ್ಷಣೆ ಮಾಡುತ್ತಿದ್ದಾರೆ. 10 ಸಾವಿರ ಪರಿಹಾರ ನೀಡುವುದಾಗಿ‌ ಸಿಎಂ ಹೇಳಿದ್ದಾರೆ. ಮುಖ್ಯಮಂತ್ರಿಗಳೇ ನಿಮ್ಮ ಉತ್ಸಾಹಕ್ಕೆ ಧನ್ಯವಾದ ಎಂದು ಸಿಎಂ ಬಗ್ಗೆ‌ ಡಿಕೆಶಿ ವ್ಯಂಗ್ಯವಾಡಿದರು.

ಮಳೆ ಹಾನಿ ಸಂಬಂಧ ಸಿಎಂ ಸಭೆಗಳ ಮೇಲೆ ಸಭೆ ಮಾಡುತ್ತಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ವ್ಯಂಗ್ಯವಾಡಿದರು. ಕೋವಿಡ್ ಸಂದರ್ಭದಲ್ಲೂ ಪರಿಹಾರ ನೀಡಲಿಲ್ಲ, ರೈತರಿಗೆ ಬೆಂಬಲ ಬೆಲೆ ಕೂಡ ಸಿಗಲಿಲ್ಲ. ನಡುನೀರಿನಲ್ಲಿ ರೈತರನ್ನು ಬಿಟ್ಟು ಹೋದರು. ಈಗಲೂ ಬಾಯಿ ಮಾತಿನಲ್ಲಿ ಪರಿಹಾರ ಘೋಷಣೆ ಮಾಡಿದ್ದಾರೆ, ಸಿಎಂಗೆ ಈಗಲೂ ನಾನು ಒತ್ತಾಯಿಸುತ್ತೇನೆ. ರೈತರಿಗೆ ಎಷ್ಟು ಪರಿಹಾರ ನೀಡಿದ್ದೀರಿ, ಈ ಬಗ್ಗೆ ಜಾಹೀರಾತು ಕೊಡಿ ಬೇಕಾದರೆ. ಯಾರ್ಯಾರಿಗೆ ಪರಿಹಾರ ಕೊಟ್ಟಿದ್ದೀರಿ ಬಹಿರಂಗಪಡಿಸಿ ಎಂದು ಸವಾಲೆಸೆದರು. ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.

ಇನ್ನು ಬಿಬಿಎಂಪಿ ಅಧಿಕಾರಿಗಳ ಜತೆಗಿನ ಸಭೆ ಬಳಿಕ ಮಾತನಾಡಿದ ಸಿಎಂ, ಕಳೆದ ಎರಡು ತಿಂಗಳಿನಿಂದ ಮಳೆ ಆಗ್ತಿದೆ. ಕಳೆದ ವಾರ ಮಳೆ ಆಗಿದ್ದರಿಂದ ಕೆರೆ ತುಂಬಿವೆ. ಹೀಗಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಕೆರೆ ಭಾಗದಲ್ಲಿ ಇರುವ ರಾಜಕಾಲುವೆಗಳನ್ನ ದುರಸ್ಥಿ ಮಾಡಬೇಕು. ನಗರ ಒಳಪ್ರದೇಶಗಳಲ್ಲಿ ರಾಜಕಾಲುವೆ ದುರಸ್ತಿ ಅಗತ್ಯವಿದೆ. 110 ಹಳ್ಳಿಗಳಲ್ಲಿ ರಾಜಕಾಲುವೆಗಳ ಅಗಲೀಕರಣ ಮಾಡಬೇಕು. ಕಾಂಕ್ರೀಟ್ ಹಾಕಿ ರಾಜಕಾಲುವೆ ಅಗಲೀಕರಣ ಮಾಡಬೇಕಿದೆ. ಬೃಹತ್ ನೀರುಗಾಲುವೆ ಕುರಿತಂತೆ ಚರ್ಚೆ ನಡೆದಿದೆ, ಹಿರಿಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದರು.

ರಾಜಕಾಲುವೆ ಶಿಲ್ಟ್ ತೆಗೆಯುವ ಕೆಲ್ಸ ತಕ್ಷಣಕ್ಕೆ ಆಗ್ಬೇಕಿದೆ. ವಿಶೇಷ ಮಾನಿಟರ್ ಮಾಡುವ ಕೆಲ್ಸ ನಾನೇ ಮಾಡ್ತೀನಿ. ಕೆರೆಗಳಿಂದ ನದಿಗಳು ಸೇರುವ ವರೆಗೂ ಯಾವುದೇ ಸಮಸ್ಯೆ ಆಗದ ರೀತಿ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಇವತ್ತಿನ ಸ್ಥಿತಿಗತಿಗೆ ತಕ್ಕಂತೆ ಮಾಸ್ಟರ್ ಪ್ಲಾನ್ ಅಗತ್ಯವಿದೆ. ಜಠಿಲವಾದ ಪರಿಸ್ಥಿತಿಯಲ್ಲಿ ಶಾಶ್ವತ ಪರಿಹಾರ ಸಿದ್ದ, ಸಚಿವರೂ ಕೂಡ ಕೆಲ ಸಲಹೆ ಕೊಟ್ಟಿದ್ದಾರೆ. ನಾಲ್ಕೂ ವ್ಯಾಲಿಗಳ ಕುರಿತು ಮಾಹಿತಿ ನೀಡಿದ್ದಾರೆ. ರಾಜಕಲುವೆ ದುರಸ್ತಿಗೆ 1060 ಕೋಟಿ ಬಿಡುಗಡೆಯಾಗಿದೆ. ಉಳಿದ ದುರಸ್ತಿ ಕಾರ್ಯ ಇನ್ನೆರಡು ತಿಂಗಳಲ್ಲಿ ಪೂರ್ಣ. ರಾಜಕಾಲುವೆ ಒತ್ತುವರಿ ಮಾಡಿಕೊಂಡು 718 ಕಟ್ಟೆಗಳಿವೆ ಶೀಘ್ರದಲ್ಲೇ ತೆರವು ಮಾಡಲಾಗುವುದು. ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಳೆ ನಿಂತ ಬಳಿಕ ರಸ್ತೆ ಗುಂಡಿ ಮುಚ್ಚಲಾಗುವುದು ಎಂದರು.

ವೃಷಭಾವತಿ, ಹೆಬ್ಬಾಳ, ಛಲಗಟ್ಟ, ಕೋರಮಂಗಲ ವ್ಯಾಲಿ ಸ್ವಚ್ಛಗೊಳಿಸೋಕೆ ಸೂಚನೆ ನೀಡಿದ್ದೇನೆ. ಈಗಾಗಲೇ 400 ಕಿಲೋ ಮೀಟರ್ ರಾಜಕಾಲುವೆ ದುರಸ್ತಿಯಾಗಿದೆ. 94 ಕ್ರಿಟಿಕಲ್ ಪಾಯಿಂಟ್ಸ್ ಗುರುತಿಸಲಾಗಿದೆ, ಎರಡು ತಿಂಗಳಲ್ಲಿ ದುರಸ್ತಿಗೆ ಸೂಚನೆ ನೀಡಿದ್ದೇನೆ. 51 ಕಿಲೋ ಪ್ರೈಮರಿ ಬೃಹತ್ ಕಾಲುವೆ ಶೀಘ್ರದಲ್ಲೇ ಆಗಬೇಕಿದೆ. ಉಳಿದ 38 ಕಿಲೋ ಮೀಟರ್ ಸೆಕೆಂಡರಿ ಡ್ರೈನ್ ಆಗ್ಬೇಕಿದೆ. 900 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಕೂಡಲೇ ಡಿಪಿಆರ್ ಸಿದ್ದಮಾಡುವಂತೆ ಸೂಚನೆ ನೀಡಿದ್ದೇನೆ, ತಕ್ಷಣವೇ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಹಲವಾರು ಲೇಔಟ್ ನಲ್ಲಿ ಜಲಮಂಡಳಿ ಕಾರ್ಯ ನಡಿಬೇಕಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ, ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.