ಡಿಕೆಶಿ ಹುಟ್ಟುಹಬ್ಬ: ರಕ್ತದಲ್ಲಿ ಚಿತ್ರ ಬಿಡಿಸಿ ಉಡುಗೊರೆಯಾಗಿ ನೀಡಿದ 'ಕೈ' ಕಾರ್ಯಕರ್ತೆ ಬಿಂದುಗೌಡ
ಡಿ.ಕೆ ಶಿವಕುಮಾರ್ ಹುಟ್ಟುಹಬ್ಬ ಹಿನ್ನಲೆ, ಮೈಸೂರಿನಲ್ಲಿರುವ ಸುತ್ತೂರಿನ ಮಠದ ಶ್ರೀಗಳ ಶಿಷ್ಯಂದಿರು ಫಲಾಹಾರದೊಂದಿಗೆ ಅವರ ಮನೆಗೆ ಹೋಗಿದ್ದಾರೆ. ಹಾಗೂ, ಸುತ್ತೂರು ಶ್ರೀಗಳು ಈ ವೇಳೆ ಡಿಕೆಶಿಗೆ ಸಂದೇಶ ರವಾನಿಸಿದ್ದಾರೆ ಎಂದೂ ತಿಳಿದುಬಂದಿದೆ.
ಬೆಂಗಳೂರು (ಮೇ 15, 2023): ಡಿ.ಕೆ. ಶಿವಕುಮಾರ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ತನ್ನ ರಕ್ತದಲ್ಲಿ ಡಿಕೆಶಿ ಚಿತ್ರ ಬಿಡಿಸಿ ಕಾಂಗ್ರೆಸ್ ಕಾರ್ಯಕರ್ತೆ ಬಿಂದು ಗೌಡ ಊಡುಗರೆಯಾಗಿ ನೀಡಿದ್ದಾರೆ. ಡಿಕೆಶಿ ಪುತ್ರಿ ಐಶ್ವರ್ಯ ಶುಭ ಕೋರಿದ್ದಾರೆ. ಇನ್ನು, ಕರ್ನಾಟಕದ ನಾನಾ ಮಠಗಳ ಸ್ವಾಮೀಜಿಗಳು ಸಂಸದ ಡಿ.ಕೆ. ಸುರೇಶ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲು ತಮ್ಮ ಸಮುದಾಯಗಳ ಬೆಂಬಲ ಇದೆ ಎಂದು ತಿಳಿಸಿದ್ದಾರೆ.
ಡಿಕೆಶಿ ಪುತ್ರಿ ಐಶ್ವರ್ಯ ತನ್ನ ತಂದೆಯ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ವಿಶೇಷ ವಿಡಿಯೋ ಮೂಲಕ ಹುಟ್ಟುಹಬ್ಬದ ಶುಭಾಶಯಗಳು ಅಪ್ಪ ಎಂದು ಅಪ್ಲೋಡ್ ಮಾಡಿದ್ದಾರೆ. ಇನ್ನೊಂದೆಡೆ, ಡಿಕೆ ಭೇಟಿಗಾಗಿ ಸದಾಶಿವನಗರ ನಿವಾಸಕ್ಕೆ ಮಾಜಿ ಮೇಯರ್ ಪದ್ಮಾವತಿ ತೆರಳಿದ್ದಾರೆ. ಹುಟ್ಟುಹಬ್ಬಕ್ಕೆ ಶುಭಕೋರಲು ಡಿಕೆ ನಿವಾಸಕ್ಕೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಬಿಜೆಪಿ ಸರ್ಕಾರ ನನಗೆ ನೋವು ನೀಡಿದೆ; ಹೈಕಮಾಂಡ್ ಪರಿಗಣಿಸಬೇಕು: ಸಿಎಂ ಸ್ಥಾನಕ್ಕೆ ಮತ್ತೆ ಬೇಡಿಕೆ ಇಟ್ಟ ಡಿಕೆಶಿ!
ಇನ್ನು, ಡಿಕೆಗಾಗಿ ಅಭಿಮಾನಿಯೊಬ್ಬ ತಿರುಪತಿಯಿಂದ ಲಾಡು ತಂದಿದ್ದಾರೆ. ವಿಜಯನಗರದಿಂದ ಬಂದಿರುವ ನಾರಾಯಣಮೂರ್ತಿ ಒಟ್ಟು 45 ಲಾಡು ತಂದಿದ್ದು,
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಹರಕೆ ಕಟ್ಟಿಕೊಂಡಿದ್ದಾರೆ ಎಂದೂ ವರದಿಯಾಗಿದೆ.
ಅಲ್ಲದೆ, ಡಿ.ಕೆ ನಿವಾಸದ ಬಳಿ ನೂರಾರು ಮಂದಿ ಡಿಕೆ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಹೀಗಾಗಿ ಡಿಕೆ ನಿವಾಸದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಭದ್ರತೆಗಾಗಿ 100 ಕ್ಕೂ ಅಧಿಕ ಪೊಲೀಸರು ಹಾಗೂ ಎಸಿಪಿ ನೇತೃತ್ವದಲ್ಲಿ ಭದ್ರತೆ ಹಾಕಲಾಗಿದೆ. 20 ಮಂದಿ ಸ್ಥಳೀಯ ಪೊಲೀಸರು ಎರಡು ಕೆ ಎಸ್ ಆರ್ ಪಿ ತುಕಡಿ ಸೇರಿ ನೂರಕ್ಕೂ ಅಧಿಕ ಮಂದಿ ಪೊಲೀಸರ ನಿಯೋಜನೆಯಾಗಿದೆ.
ಇದನ್ನೂ ಓದಿ: ‘ಕೈ’ ಹೈಕಮಾಂಡ್ ಮುಂದೆ ಸಿಎಂ ಆಯ್ಕೆ ಸವಾಲು: ಮೂವರು ವೀಕ್ಷಕರನ್ನು ನೇಮಿಸಿದ ಎಐಸಿಸಿ
ಸ್ವಾಮೀಜಿಗಳ ಭೇಟಿ
ಕರ್ನಾಟಕದ ನಾನಾ ಮಠಗಳ ಸ್ವಾಮೀಜಿಗಳು ಸಂಸದ ಡಿ.ಕೆ. ಸುರೇಶ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲು ತಮ್ಮ ಸಮುದಾಯಗಳ ಬೆಂಬಲ ಇದೆ ಎಂದು ತಿಳಿಸಿದ್ದಾರೆ. ಈ ಮಧ್ಯೆ, ಸಿಎಂ ಆಯ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಣವಾನಂದ ಸ್ವಾಮಿ, ಸಿದ್ದರಾಮಯ್ಯ ಸಿಎಲ್ಪಿ ನಾಯಕ. ಯಾರು ಸಿಎಂ ಆಗಬೇಕು ಎಂದು ನಾನು ಹೇಳೋದಿಲ್ಲ. ನಾವು ಡಿಕೆ ಮತ್ತು ಸಿದ್ದರಾಮಯ್ಯರನ್ನು ಒಂದೇ ರೀತಿ ನೋಡ್ತೇವೆ, ಅದನ್ನು ಹೈಕಮಾಂಡ್ ಮಾಡಲಿದೆ ಎಂದೂ ಹೇಳಿದ್ದಾರೆ. ಹಾಗೆ, ನಮ್ಮ ಈಡಿಗ ಸಮುದಾಯಕ್ಕೆ ಏಳು ಟಿಕೆಟ್ ನೀಡಿದ್ದರು. ಈ ಪೈಕಿ ನಾಲ್ವರು ಗೆದ್ದಿದ್ದಾರೆ. ಬಿ.ಕೆ ಹರಿಪ್ರಸಾದ್ ಕೂಡ ದೊಡ್ಡ ನಾಯಕ, ಈ ಹಿನ್ನೆಲೆ ನಮ್ಮ ಸಮುದಾಯದವರಿಗೆ ಉನ್ನತ ಸಚಿವ ಸ್ಥಾನ ನೀಡಬೇಕು ಎಂದೂ ಹೇಳಿದ್ದಾರೆ.
ಅಲ್ಲದೆ, ಡಿ.ಕೆ ಶಿವಕುಮಾರ್ ಹುಟ್ಟುಹಬ್ಬ ಹಿನ್ನಲೆ, ಮೈಸೂರಿನಲ್ಲಿರುವ ಸುತ್ತೂರಿನ ಮಠದ ಶ್ರೀಗಳ ಶಿಷ್ಯಂದಿರು ಫಲಾಹಾರದೊಂದಿಗೆ ಅವರ ಮನೆಗೆ ಹೋಗಿದ್ದಾರೆ. ಹಾಗೂ, ಸುತ್ತೂರು ಶ್ರೀಗಳು ಈ ವೇಳೆ ಡಿಕೆಶಿಗೆ ಸಂದೇಶ ರವಾನಿಸಿದ್ದಾರೆ ಎಂದೂ ತಿಳಿದುಬಂದಿದೆ. ಅವರಿಗೆ ಉಚ್ಚ ಸ್ಥಾನ ಸಿಗಲಿ ಎಂದು ಹಾರೈಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ಇಂದು ಕಾಂಗ್ರೆಸ್ ಶಾಸಕಾಂಗ ಸಭೆ: ಸಿಎಂ ಆಗಲು ಡಿಕೆಶಿ - ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್ ಹೀಗಿದೆ..