ಮುಂಬೈನಲ್ಲಿದ್ದ ‘ಅತೃಪ್ತ’ ಶಾಸಕ 10 ದಿನಗಳ ಬಳಿಕ ಸ್ವಕ್ಷೇತ್ರಕ್ಕೆ..!
ಸಚಿವ ಸ್ಥಾನದ ವಿಚಾರವಾಗಿ ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡಿರುವ ಕಾಂಗ್ರೆಸ್ ಶಾಸಕರು ಮುಂಬೈ ಖಾಸಗಿ ಹೋಟೆಲ್ನಲ್ಲಿ ಬೀಡು ಬಿಟ್ಟಿದ್ದಾರೆ. ಮುಂಬೈನಲ್ಲಿದ್ದ ‘ಅತೃಪ್ತ’ ಶಾಸಕರ ಪೈಕಿ ಒಬ್ಬರು 10 ದಿನಗಳ ಬಳಿಕ ಸ್ವಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.
ಬೆಂಗಳೂರು, [ಜ.23]: ಕಳೆದ 10 ದಿನಗಳಿಂದ ಮುಂಬೈನಲ್ಲೇ ಬೀಡುಬಿಟ್ಟಿದ್ದ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಅತೃಪ್ತ ಶಾಸಕ ಡಾ. ಉಮೇಶ್ ಜಾಧವ್ ನಾಳೆ [ಗುರುವಾರ] ಸ್ವಕ್ಷೇತ್ರಕ್ಕೆ ಆಗಮಿಸಲಿದ್ದಾರೆ.
ಬೆಡಸೂರು ಗ್ರಾಮದಲ್ಲಿ ಅವರ ತಂದೆಯವರ ಪುಣ್ಯತಿಥಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಶಾಸಕ ಉಮೇಶ್ ಜಾಧವ್ ಭಾಗವಹಿಸಲಿದ್ದು, ಬಳಿಕ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.
‘ಕೈ’ ಕೊಟ್ಟ ಶಾಸಕ; ಖರ್ಗೆ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ?
ರಾಜ್ಯ ರಾಜಕೀಯದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆದು ಕೆಲವು ಅತೃಪ್ತ ಕಾಂಗ್ರೆಸ್ ಶಾಸಕರು ಮುಂಬೈನಲ್ಲಿ ಠಿಕಾಣಿ ಹೂಡಿ ಮೈತ್ರಿ ಸರ್ಕಾರವನ್ನು ಶೇಕ್ ಮಾಡಿದ್ದರು. ಅವರೊಂದಿಗೆ ಉಮೇಶ್ ಜಾಧವ್ ಕೂಡ ಕಾಣಿಸಿಕೊಂಡಿದ್ದರು.
ಅಷ್ಟೇ ಅಲ್ಲದೇ ಕುಂಟು ನೆಪ ಹೇಳಿ ಕಾಂಗ್ರೆಸ್ ಶಾಸಕಾಂಗ ಸಭೆಗೂ ಆಗಮಿಸಿದ ತಮ್ಮ ಅತೃಪ್ತಿಯನ್ನು ಹೊರಹಾಕಿದ್ದರು. ಇದ್ರಿಂದ ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಬಲವಾಗಿ ಕೇಳಿಬರುತ್ತಿದೆ.
ಕಾಂಗ್ರೆಸ್ ಬಿಡಲು ಶಾಸಕನಿಗೆ ಕಾಂಗ್ರೆಸ್ ಮುಖಂಡರಿಂದಲೇ ಪ್ರಚೋದನೆ?
ಮುಂಬೈನಲ್ಲಿ ಇದ್ದುಕೊಂಡು ಗುಪ್ತವಾಗಿ ತಮಗೆ ಬೇಕಾದವರ ಜತೆ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆಗಳನ್ನು ನಡೆಸಿದ್ದು, ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದಾರೆ.
ಒಂದು ವೇಳೆ ಜಾಧವ್ ಕೈ ತೊರೆದು ಕಮಲ ಹಿಡಿದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಮಲ್ಲಿಕಾಜರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿಯುವುದಂತೂ ಸತ್ಯ.
ಒಟ್ಟಿನಲ್ಲಿ ಕಳೆದ 10 ದಿನಗಳಿಂದ ಕಾಂಗ್ರೆಸ್ ಪಕ್ಷದಿಂದ ಹೊರಹೋಗಿರುವ ಉಮೇಶ್ ಜಾಧವ್ ಅವರ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ.