ಮೂಲ ಬಿಜೆಪಿಗರು, ವಲಸೆ ಬಿಜೆಪಿಗರೆಂಬುದು ಪಕ್ಷದೊಳಗೇ ಚರ್ಚಿಸಬೇಕಾದ ವಿಷಯ: ಜಿಲ್ಲಾಧ್ಯಕ್ಷ ಮೇಘರಾಜ್‌ ಹೇಳಿಕೆ

ಶಿವಮೊಗ್ಗ(ಸೆ.23): ಸೊರಬ ತಾಲೂಕಿನಲ್ಲಿ ಮೂಲ ಬಿಜೆಪಿಗರು ಹಾಗೂ ವಲಸೆ ಬಿಜೆಪಿಗರು ಎಂದು ಅಪಸ್ವರ ಭುಗಿಲೆದ್ದಿದ್ದು, ಘಟನೆ ಸಂಬಂಧ ವರದಿ ತರಿಸಿಕೊಂಡು ಹೈಕಮಾಂಡ್‌ಗೆ ನೀಡಲಾಗಿದೆ. ಶಿಸ್ತು ಕ್ರಮದ ಬಗ್ಗೆ ಮಾರ್ಗಸೂಚಿಯನ್ನು ಕೇಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳು ನಿಷ್ಕಿ್ರಯಗೊಂಡಾಗ ಆಡಳಿತ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿದೊಡ್ಡದಾಗಿ ಬೆಳೆಯುವುದು ಸಹಜ. ಅದರಂತೆ ಸೊರಬದಲ್ಲಿ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗುತ್ತಿದೆ. ತಾನೂ ಆಕಾಂಕ್ಷಿ ಎಂದು ಹೇಳಿಕೊಳ್ಳಲು ಪಕ್ಷದ ವೇದಿಕೆ ಇದೆ. ಅಲ್ಲಿ ಅದನ್ನು ವ್ಯಕ್ತಪಡಿಸಬೇಕು. ಇದನ್ನು ಬಿಟ್ಟು ಬಹಿರಂಗವಾಗಿ ಇದನ್ನು ವ್ಯಕ್ತಪಡಿಸುವ ವ್ಯವಸ್ಥೆ ಬಿಜೆಪಿಯದ್ದಲ್ಲ ಎಂದು ತಾಕೀತು ಮಾಡಿದರು.

Add Asianetnews Kannada as a Preferred SourcegooglePreferred

ಚುನಾವಣೆಗೆ ಇನ್ನೂ ಯಾವ ಅಭ್ಯರ್ಥಿಯ ಆಯ್ಕೆಯೂ ಆಗಿಲ್ಲ. ಆಗಲೇ ಇಲ್ಲಿ ಇದೇ ಅಭ್ಯರ್ಥಿ ಬೇಕು, ಅವರು ಬೇಡ ಎನ್ನುವ ಅಭಿಪ್ರಾಯಗಳು ಹುಟ್ಟಿಕೊಂಡಿವೆ. ಪಕ್ಷದೊಳಗೆ ಚರ್ಚೆ ಮಾಡಬೇಕಾದ ವಿಷಯವನ್ನು ಬಹಿರಂಗವಾಗಿ ರಗಳೆ ಮಾಡಿಕೊಳ್ಳುವ ಘಟನೆಗಳು ಸೊರಬದಲ್ಲಿ ನಡೆಯುತ್ತಿವೆ. ಸೊರಬದಲ್ಲಿ ಈಚೇಗೆ ನಡೆದ ನಮೋ ಕಾರ್ಯಕ್ರಮದಲ್ಲಿ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಬೀದಿಗೆ ಬಂದಿದೆ. ಇದನ್ನೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ್ದು, ಸೊರಬದಲ್ಲಿ ನಡೆದ ಘಟನೆ ವಿವರವನ್ನು ತರಿಸಿಕೊಂಡು ಹೈಕಮಾಂಡ್‌ಗೆ ವರದಿ ನೀಡಲಾಗಿದೆ ಎಂದು ತಿಳಿಸಿದರು.

PAYCM: ಬಿಜೆಪಿ ಭ್ರಷ್ಟಾಚಾರ ಬಿಟ್ಹಾಕಿ, ಕ್ರಿಯೇಟಿವಿಟಿಗೆ ಮಾತ್ರ ನೆಟ್ಟಿಗರು ಫುಲ್ ಫಿದಾ

ದೇಶದ ಆರ್ಥಿಕ ಅಭಿವೃದ್ಧಿಗೆ ಸರ್ಕಾರ ದೃಢ ಹೆಜ್ಜೆ ಇಟ್ಟಿದ್ದು, ರಾಜ್ಯದಲ್ಲಿಯೂ ಅಭಿವೃದ್ಧಿ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿಯೂ ಸಾಕಷ್ಟುಕೆಲಸಗಳಾಗಿವೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಜಿಲ್ಲೆಯಲ್ಲಿಯೂ 7ಕ್ಕೆ 7 ಸ್ಥಾನಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ ಎಂದರು.

ಸೇವೆ ಕಾಯಂ ಮಹತ್ವದ ನಿರ್ಧಾರ:

ಪ್ರಧಾನಿ ಮೋದಿ ಪೌರಕಾರ್ಮಿಕರ ಪಾದಪೂಜೆ ಮಾಡಿ ಜಗತ್ತಿಗೆ ಒಂದು ಉತ್ತಮ ಸಂದೇಶ ನೀಡಿದ್ದಾರೆ. ಅವರ ಮಹತ್ವವನ್ನು ಸಾರಿದ್ದಾರೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಸುಮಾರು 45 ಸಾವಿರ ಪೌರ ಕಾರ್ಮಿಕರನ್ನು ಹಂತ ಹಂತವಾಗಿ ಕಾಯಂಗೊಳಿಸುವುದಾಗಿ ರಾಜ್ಯ ಸರ್ಕಾರ ಈಗಾಗಲೇ ತಿಳಿಸಿದೆ. ಮೊದಲ ಹಂತವಾಗಿ 11 ಸಾವಿರಕ್ಕೂ ಅಧಿಕ ಜನರನ್ನು ಕಾಯಂಗೊಳಿಸಲಾಗುವುದು. ಅನಂತರ ಎಲ್ಲ ರೀತಿಯ ಪೌರ ಕಾರ್ಮಿಕರನ್ನು ಕಾಯಂಗೊಳಿಸಲಾಗುವುದು. ಇದೊಂದು ಮಹತ್ವದ ನಿರ್ಧಾರವಾಗಿದೆ ರಾಷ್ಟ್ರದಲ್ಲಿಯೇ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಡಳಿತ ಸುಧಾರಣೆಯಾಗಿದೆ ಎಂದರು.

ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಸೋಲಿಸುವುದು ಶತಸಿದ್ಧ: ಆಪ್‌ ಮುಖಂಡ ಅರವಿಂದ

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್‌.ಕೆ. ಸಿದ್ಧರಾಮಣ್ಣ, ಗಿರೀಶ್‌ ಪಟೇಲ…, ಬಿ.ಕೆ. ಶ್ರೀನಾಥ್‌, ಶಿವರಾಜ್‌, ಬಿ.ಆರ್‌. ಮಧುಸೂದನ್‌, ಗೀತಾ, ಜ್ಞಾನೇಶ್ವರ್‌, ಹೃಷಿಕೇಶ್‌ ಪೈ, ರಾಮು, ಕೆ.ವಿ. ಅಣ್ಣಪ್ಪ ಇದ್ದರು.

ದೇಶವಿರೋಧಿ ಚಟುವಟಿಕೆ ವಿರುದ್ಧ ಬಿಜೆಪಿ

ಜಿಲ್ಲೆಯಲ್ಲಿ ಮತ್ತು ಜಿಲ್ಲಾ ಕೇಂದ್ರದಲ್ಲಿ ರಾಷ್ಟ್ರವಿರೋಧಿ ಶಕ್ತಿಗಳು ತಲೆ ಎತ್ತಿವೆ ಎನ್ನುವುದಕ್ಕೆ ಈಗ ಸಾಕ್ಷಿ ಸಿಕ್ಕಿದೆ. ಬಿಜೆಪಿ ಪದೇಪದೇ ಜಿಲ್ಲೆಯಲ್ಲಿ ರಾಷ್ಟ್ರವಿರೋಧಿ ಶಕ್ತಿಗಳು ತಲೆ ಎತ್ತುತ್ತಿವೆ ಎಂದು ಆರೋಪ ಮಾಡುತ್ತಲೇ ಬಂದಿತ್ತು. ಹಾಗೆಯೇ ಜಿಲ್ಲಾ ಕೇಂದ್ರದಲ್ಲಿ ಕೋಮುಗಲಭೆ, ಹಿಂಸಾತ್ಮಕ ಕೃತ್ಯಗಳು, ಶಾಂತಿಗೆ ಭಂಗ ತರುವಂತಹ ಘಟನೆಗಳು ನಡೆಯುತ್ತಲೇ ಇದ್ದವು. ಇದೀಗ ಐಸಿಸ್‌ ಜೊತೆ ಶಿವಮೊಗ್ಗದ ರಾಷ್ಟ್ರವಿರೋಧಿ ಶಕ್ತಿಗಳು ಕೈಗೂಡಿಸಿರುವುದು ನಿಜವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌ ಹೇಳಿದರು.

ರಾಷ್ಟ್ರೀಯ ತನಿಖಾ ದಳ ಈಗಾಗಲೇ ಮೂವರನ್ನು ಬಂಧಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ಪುರಾವೆಗಳು ಸಿಕ್ಕಿವೆ. ಘಟನೆ ನಡೆದ ಮೇಲೆ ಪೊಲೀಸರು ಅತ್ಯಂತ ದಕ್ಷತೆಯಿಂದ ಕೆಲಸ ನಿರ್ವಹಿಸಿದ್ದಾರೆ. ಪೊಲೀಸರಿಗೆ, ರಾಜ್ಯ ಸರ್ಕಾರಕ್ಕೆ ಹಾಗೂ ಗೃಹ ಮಂತ್ರಿಗೆ ಜಿಲ್ಲಾ ಬಿಜೆಪಿಯಿಂದ ಅಭಿನಂದನೆಗಳು ಎಂದರು.