ಕಲಬುರಗಿ ಜಿಲ್ಲೆಯ ನೀರಿನ ಸಮಸ್ಯೆ ನೀಗಿಸಲು ಸೊಲ್ಲಾಪುರದ ಉಜ್ಜನಿ ಜಲಾಶಯದಿಂದ ಭೀಮಾನದಿಗೆ ಹೆಚ್ಚುವರಿಯಾಗಿ 1 ಟಿಎಂಸಿ ನೀರು ಬಿಡುಗಡೆಗೆ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು. 

ವಿಧಾನಸಭೆ (ಫೆ.14): ಕಲಬುರಗಿ ಜಿಲ್ಲೆಯ ನೀರಿನ ಸಮಸ್ಯೆ ನೀಗಿಸಲು ಸೊಲ್ಲಾಪುರದ ಉಜ್ಜನಿ ಜಲಾಶಯದಿಂದ ಭೀಮಾನದಿಗೆ ಹೆಚ್ಚುವರಿಯಾಗಿ 1 ಟಿಎಂಸಿ ನೀರು ಬಿಡುಗಡೆಗೆ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಕಾಂಗ್ರೆಸ್‌ನ ಅಲ್ಲಮಪ್ರಭು ಪಾಟೀಲ್‌ ಅವರು ಕಲಬುರಗಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾತನಾಡಿ, ಭೀಮಾ ನದಿಯಲ್ಲಿ ನೀರಿಲ್ಲದ ಕಾರಣ ಕಲಬುರಗಿಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ನೀರು ತರಲಾಗುತ್ತಿದೆಯಾದರೂ, ಅದು ಬಳಕೆಗೆ ಯೋಗ್ಯವಾಗಿಲ್ಲ. ಹೀಗಾಗಿ ಕುಡಿಯುವ ನೀರಿಗಾಗಿ ಸೊಲ್ಲಾಪುರದಿಂದ ಭೀಮಾ ನದಿಗೆ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಟ್ರಾಮಾ ಕೇರ್ ಸೆಂಟರ್‌ಗೆ ಅಡಿಗಲ್ಲು ಹಾಕಿದ್ದೇ ಕಾಂಗ್ರೆಸ್ ಸರ್ಕಾರ: ಸಚಿವ ಪ್ರಿಯಾಂಕ್‌ ಖರ್ಗೆ

ಇದಕ್ಕೆ ಉತ್ತರಿಸಿದ ಪ್ರಿಯಾಂಕ್‌ ಖರ್ಗೆ, ಕಲಬುರಗಿ ಜಿಲ್ಲೆಯಾದ್ಯಂತ ನೀರಿನ ಸಮಸ್ಯೆಯಿದೆ. ಅದನ್ನು ನಿವಾರಿಸಲು ಸೊಲ್ಲಾಪುರದ ಉಜ್ಜನಿ ಜಲಾಶಯದಿಂದ ಭೀಮಾನದಿಗೆ 1 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಈಗಾಗಲೇ ಮಹಾರಾಷ್ಟ್ರ ಸರ್ಕಾರದ ಪ್ರತಿನಿಧಿಗಳೊಂದಿಗೆ ಎರಡ್ಮೂರು ಬಾರಿ ಮಾತುಕತೆ ನಡೆಸಲಾಗಿದೆ. ಆದರೆ, ಮಹಾರಾಷ್ಟ್ರದಲ್ಲೂ ಬರವಿರುವ ಕಾರಣ ನೀರು ಬಿಡಲು ಒಪ್ಪುತ್ತಿಲ್ಲ. ಆದರೂ, ಕಲಬುರಗಿ ಜಿಲ್ಲೆಯ ಎಲ್ಲ ಶಾಸಕರನ್ನು ಕರೆದುಕೊಂಡು ಹೋಗಿ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.

ಕಿಯೋನಿಕ್ಸ್‌ ಅಕ್ರಮದ ಬಗ್ಗೆ ಬಿಜೆಪಿ ತುಟಿ ಬಿಚ್ಚುತ್ತಿಲ್ಲ ಏಕೆ: ಕಿಯೋನಿಕ್ಸ್‌ ಪಾವತಿಗಳ ಬಗ್ಗೆ ದೂರು ಬಂದಿದ್ದರಿಂದ ಕಳೆದ ನಾಲ್ಕೂವರೆ ವರ್ಷದ ಲೆಕ್ಕ ಪರಿಶೋಧನೆ ನಡೆಸಿದ್ದು, ಈ ವೇಳೆ 400 ಕೋಟಿ ರು. ಅವ್ಯವಹಾರ ಬಯಲಾಗಿದೆ. ಹೀಗಾಗಿ ಸಮಗ್ರ ತನಿಖೆಗೆ ಆದೇಶ ನೀಡಲಾಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. 2-3 ತಿಂಗಳಿಂದ ಕಿಯೋನಿಕ್ಸ್‌ನಿಂದ ಪಾವತಿಗಳು ಆಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಾಗ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ ನನ್ನ ರಾಜೀನಾಮೆಗೆ ಆಗ್ರಹಿಸಿದ್ದರು. ಇದೀಗ ಅವರ ಅವಧಿಯಲ್ಲೇ ಅಕ್ರಮ ಆಗಿರುವುದು ಬಯಲಾಗಿದೆ. 

ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ: ಸಚಿವ ಪ್ರಿಯಾಂಕ್‌ ಖರ್ಗೆ

ಈಗ ತುಟಿ ಬಿಚ್ಚುತ್ತಿಲ್ಲ ಯಾಕೆ ಎಂದೂ ಅವರು ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2-3 ತಿಂಗಳಿಂದ ಕಿಯೋನಿಕ್ಸ್‌ಗೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಪೂರೈಸಿದವರು ಸೇರಿ ಹಲವರು ಸೂಕ್ತ ಬಿಲ್ಲುಗಳನ್ನು ನೀಡಿದ್ದರೂ ಹಣ ಪಾವತಿಸಿಲ್ಲ ಎಂದು ದೂರಿದ್ದರು. ಈ ಬಗ್ಗೆ ಕಳೆದ ನಾಲ್ಕೂವರೆ ವರ್ಷದ ಖರೀದಿ ಲೆಕ್ಕಾಚಾರ ಆಂತರಿಕ ಪರಿಶೋಧನೆಗೆ ಒಳಪಡಿಸಿದಾಗ 400 ಕೋಟಿ ರು.ಗಳಿಗಿಂತ ಹೆಚ್ಚಿನ ಅವ್ಯವಹಾರ ಕಂಡು ಬಂದಿದೆ ಎಂದರು.