*  ರಾಜ್ಯದಿಂದ ರಾಜ್ಯಸಭೆಗೆ ಇಬ್ಬರು ಸದಸ್ಯರ ಆಯ್ಕೆಯಂತೂ ಖಚಿತ*  ಮೂರೂ ಸ್ಥಾನ ಉಳಿಸಿಕೊಳ್ಳಲು ಚಿಂತನೆ*  ವಾಡಿಕೆಗಿಂತ ಹೆಚ್ಚಿನ ಮಳೆಯಿಂದ ಸಮಸ್ಯೆ  

ಶಿವಮೊಗ್ಗ(ಮೇ.22):  ರಾಜ್ಯಸಭೆಗೆ ರಾಜ್ಯದಿಂದ ಮೂರನೇ ಸದಸ್ಯರ ಆಯ್ಕೆ ಸಂಬಂಧ ಜೆಡಿಎಸ್‌ ಬೆಂಬಲ ಪಡೆಯುವ ಕುರಿತು ಪಕ್ಷದ ವರಿಷ್ಠರು ಜೆಡಿಎಸ್‌ ಮುಖಂಡರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ರಾಜ್ಯಸಭೆಗೆ ಇಬ್ಬರು ಸದಸ್ಯರ ಆಯ್ಕೆಯಂತೂ ಖಚಿತವಾಗಿದೆ. ರಾಜ್ಯಸಭೆಯ 3 ಸ್ಥಾನಗಳನ್ನೂ ಉಳಿಸಿಕೊಳ್ಳುವ ಕುರಿತು ಬಿಜೆಪಿಯಲ್ಲಿ ಚಿಂತನೆ ನಡೆದಿದೆ ಎಂದರು.

ವಾಡಿಕೆಗಿಂತ ಹೆಚ್ಚಿನ ಮಳೆಯಿಂದ ಸಮಸ್ಯೆ:

ವಾಡಿಕೆ ಮಳೆಗಿಂತ ನಾಲ್ಕು ಪಟ್ಟು ಅಧಿಕ ಮಳೆ ಒಂದೇ ದಿನದಲ್ಲಿ ಬಿದ್ದ ಪರಿಣಾಮ ಸಮಸ್ಯೆ ಉಂಟಾಗಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಸಂತ್ರಸ್ಥರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ. ಕಾಳಜಿ ಕೇಂದ್ರ ತೆರೆಯಲಾಗಿದೆ. ಭಾಗಶಃ ಹಾನಿಯಾದ ಮನೆಗಳು ಬೀಳುವ ಸಂಭವವಿರುವುದರಿಂದ ಎರಡು ದಿನ ಬಿಟ್ಟು ಸಂಪೂರ್ಣ ನಷ್ಟದ ಅಂದಾಜನ್ನು ಅಧಿಕಾರಿಗಳು ಸಲ್ಲಿಸಲಿದ್ದಾರೆ. ಬಳಿಕವಷ್ಟೇ ಹಾನಿಯ ಪ್ರಮಾಣ ತಿಳಿದುಬರಲಿದೆ ಎಂದರು.

Karnataka Politics: ಬೆಂಕಿ ಹಚ್ಚೋ ಕೆಲಸದಿಂದ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್‌: ಕಡಾಡಿ

ಸ್ಮಾರ್ಟ್‌ ಸಿಟಿ ಕಾಮಗಾರಿ ಸಂದರ್ಭದಲ್ಲಿ ಕೆಲವು ಕಡೆ ನೀರು ಹರಿದು ಹೋಗುವ ಪೈಪ್‌ ಗಳಲ್ಲಿ ಕಸ ತುಂಬಿದ್ದರಿಂದ ಸರಾಗವಾಗಿ ನೀರು ಹರಿಯದೇ ಕೆಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಇನ್ನೊಂದು ವಾರದಲ್ಲಿ ಎಲ್ಲಾ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.

ಕುಡಿಯುವ ನೀರಿಗೆ ತೊಂದರೆ ಉಂಟಾಗಿರುವ ವಾರ್ಡ್‌ಗಳಲ್ಲಿ ಸಮರ್ಪವಾಗಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯಾನಗರ, ಶಾಂತಮ್ಮ ಲೇಔಟ್‌, ಬಾಪೂಜಿ ನಗರ ಮೊದಲಾದ ಕಡೆಗಳಲ್ಲಿ ಮಳೆಯಿಂದಾದ ಹಾನಿ ಪರಿಶೀಲನೆ ನಡೆಸಿದ್ದು, ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಎಸ್‌. ರುದ್ರೇಗೌಡ, ಜಿಲ್ಲಾಧಿಕಾರಿ ಡಾ. ಆರ್‌. ಸೆಲ್ವಮಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೇ ಪ್ರಸಾದ್‌, ತಹಶೀಲ್ದಾರ್‌ ನಾಗರಾಜ್‌, ಮೇಯರ್‌ ಸುನೀತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ನಾಗರಾಜ್‌, ಪಾಲಿಕೆ ಸದಸ್ಯ ಎಸ್‌.ಎನ್‌. ಚನ್ನಬಸಪ್ಪ, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಠಾರೆ, ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮೊದಲಾದವರಿದ್ದರು.