Asianet Suvarna News Asianet Suvarna News

ಸ್ವಸಹಾಯ ಸಂಘಗಳಿಂದ ಮಹಿಳೆಯರ ಅಭಿವೃದ್ಧಿ: ಸಚಿವೆ ಶೋಭಾ ಕರಂದ್ಲಾಜೆ

ದೇಶ ಭದ್ರವಾಗಿರಲು ನರೇಂದ್ರ ಮೋದಿಯವರಿಗೆ ನಿಮ್ಮ ಬೆಂಬಲ, ಆಶೀರ್ವಾದ ಬೇಕು. ಹಾಗೇ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಚಿವ ಹಾಲಪ್ಪ ಆಚಾರ್ ಅವರಿಗೆ ನಿಮ್ಮ ಆಶೀರ್ವಾದವಿದ್ದರೆ ಇನ್ನಷ್ಟು ಬಲ ಬರುತ್ತದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಬೆಂಬಲಿಸುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದರು.

Development of Women through Self Help Societies says Minister Shobha Karandlaje at kukanuru rav
Author
First Published Feb 22, 2023, 3:39 PM IST

ಕುಕನೂರು (ಫೆ.22) : ಹೆಣ್ಣು ಮಕ್ಕಳಿಗೆ ಧ್ವನಿ ಇದೆ. ಅದಕ್ಕೆ ಬಲ ಬರೋದು ಶಿಕ್ಷಣದಿಂದ, ಆರ್ಥಿಕ ಸದೃಡತೆಯಿಂದ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ  ಅಭಿವೃದ್ಧಿ ಇಲಾಖೆ(Department of Women and Child Welfare Development) ಸಚಿವ ಹಾಲಪ್ಪ ಆಚಾರ್ ಅವರ ಸ್ವ ಕ್ಷೇತ್ರ ಯಲಬುರ್ಗಾ ವಿಧಾನಸಭಾ ಸಭಾ ಕ್ಷೇತ್ರದ ಕುಕನೂರಲ್ಲಿ ಜರುಗುತ್ತಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ(International women day) ಅಂಗವಾಗಿ ಬೃಹತ್ ಕೌಶಲ್ಯ ಅಭಿವೃದ್ಧಿ ಹಾಗು ಮಾರಾಟ ಮಳಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು.

ಜನರಿಗೆ ಕೇಂದ್ರ,ರಾಜ್ಯ ಸರ್ಕಾರದ ಸಾಧನೆ ತಿಳಿಸಲು ಶೋಭಾ ಕರಂದ್ಲಾಜೆ ಕರೆ

ಇಂದು ಎರಡು ವಿಷಯ ನನಗೆ ಇಲ್ಲಿ ಖುಷಿ ನೀಡಿವೆ. ಮೊದಲನೆಯದು, ಈ ಕಾರ್ಯಕ್ರಮದಲ್ಲಿ ಮೊದಲ ಬಾರಿ ಪುರುಷರನ್ನು ನಿಲ್ಲಿಸಿ ಮಹಿಳೆಯರು ಕುಳಿತಿದ್ದಾರೆ. ಇನ್ನೊಂದು, ಸಾಮಾನ್ಯ ಹೆಣ್ಣು ಮಗಳು  ಕೂಡ ವೇದಿಕೆಯಲ್ಲಿ ಮಾತನಾಡಬಹುದು ಎಂಬುದು ಸ್ವಸಹಾಯ ಸಂಘಗಳ ಮಹಿಳೆಯರು ತೋರಿಸಿಕೊಟ್ಟಿದ್ದಾರೆ.

ನಾನು 1996 ರಲ್ಲಿ ರಾಜಕೀಯಕ್ಕೆ ಬಂದೆ. ಮೊದಲು ಪಕ್ಷದ ಉಸ್ತುವಾರಿ ಕೆಲಸ ಮಾಡುತ್ತಿದ್ದೆ. ಆ ಕಾಲಕ್ಕೆ ಬಿಜಾಪುರದಲ್ಲಿ ಮಹಿಳೆಯರು ಮನೆಯಿಂದ ಹೋರ ಬರುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ ಆರ್ಥಿಕವಾಗಿ ಸದೃಢ ಆಗಲು ಆರ್ಥಿಕ ಚಿಂತನೆ ಮಹಿಳೆಯರಿಂದ ಆಗುತ್ತಿದೆ ಎಂದರು.

ಅಟಲ್ ಬಿಹಾರಿ ವಾಜಪೇಯಿ(Atal bihari vajpeyee) ಅವರು ಪ್ರಧಾನಿ ಆಗಿದ್ದಾಗ ಮನೆಯಿಂದ ಮಹಿಳೆ ಹೊರ ಬರುತ್ತಿರಲಿಲ್ಲ. ಮಹಿಳೆಯರಲ್ಲಿದ್ದ ಈ ಭಯ, ಆತಂಕವನ್ನು ಹೋಗಲಾಡಿಸಲು ವಾಜಪೇಯಿ ಅಂದು ಮಹಿಳೆಯರಿಗೆ ಶಕ್ತಿ ತುಂಬಲು ಸ್ರ್ತೀ ಶಕ್ತಿ ಸಂಘ ನೀಡಿದರು. ಜೀವನದಲ್ಲಿ ಅವರು  ಮದುವೆ ಆಗದಿದ್ದರೂ ಅವರು ಮಹಿಳೆಯರ ಕಷ್ಟ ಅರಿತು ಮಹಿಳೆಯರಿಗಾಗಿ ಸ್ತ್ರೀ ಶಕ್ತಿ ಸಂಘ ಸ್ಥಾಪಿಸಿದರು ಎಂದರು.

ಎಸ್ ಎಂ ಕೃಷ್ಣ(SM Krishna) ಅವರು ಸಹ ರಾಜ್ಯದಲ್ಲಿ ಮಹಿಳಾ ಸಂಘ ಸ್ಥಾಪಿಸಿದರು. ಅವರು ಮಹಿಳಾ ಸಂಘಗಳಿಗೆ
ಆರ್ಥಿಕ ಬಲ ತುಂಬಿದರು. ಹೆಣ್ಣು ಮಕ್ಕಳ ಹೆಸರಿನಲ್ಲಿ ಕೃಷಿ ಉತ್ಪನ್ನ ಸಂಸ್ಥೆ ಸ್ಥಾಪನೆಗೆ ಸಹಾಯ ಮಾಡಿದರು. ಅಲ್ಲದೆ ಮಹಿಳೆಯರ ಉತ್ಪನ್ನ ಮಾರಾಟಕ್ಕೆ ಸಹಾಯ ಮಾಡಿದರು.

ಹೆಣ್ಣು ಮಕ್ಕಳಿಗೆ ಧ್ವನಿ ಇದೆ. ಅದಕ್ಕೆ ಬಲ ಬರೋದು ಶಿಕ್ಷಣದಿಂದ, ಆರ್ಥಿಕ ಸದೃಡತೆಯಿಂದ ಮಾತ್ರ. ಬಿಎಸ್‌ವೈ(BS Yadiyurappa) ಸಿಎಂ ಆಗಿದ್ದಾಗ ಮಹಿಳಾ ಇನ್ ಬ್ಯಾಲೇನ್ಸ್ ಇತ್ತು. ಆಗ ಅವರು ಭಾಗ್ಯಲಕ್ಷ್ಮಿ ಯೋಜನೆ(Bhagyalakshmi scheme)ಜಾರಿಗೆ ತಂದರು. ಆದರೆ ಈ ಹಿಂದೆ ಆಡಳಿತ ನಡೆಸಿದವರು ಮಹಿಳೆಯರ ಬಗ್ಗೆ ಇಂಥ ಯೋಜನೆ ಜಾರಿಗೆ ತರಲು ಯೋಚಿಸಲಿಲ್ಲ ಎಂದರು.

2008 ರಲ್ಲಿ ವಿಧವಾ ವೇತನ 200ರೂ. ಇತ್ತು. ವಿಧವಾ ವೇತನ ಹೆಚ್ಚಳ ಮಾಡಲಾಯಿತು. ಹಾಗೆ  ಸಂಧ್ಯಾ ಸುರಕ್ಷಾ ಯೋಜನೆ ತಂದರು. ಅಂಗವಿಕಲರ ವೇತನ ಕೂಡ ಈಗ ನಮ್ಮ ಸರ್ಕಾರದಲ್ಲಿ ಹೆಚ್ಚಳವಾಗಿದೆ ಎಂದರು.

ನಮ್ಮ ಸರ್ಕಾರ ಹಾಲಿಗೆ ಪ್ರೋತ್ಸಾಹ ಧನ ನೀಡಿ ಅದನ್ನು ಮಹಿಳೆಯರ ಖಾತೆಗೆ ನೇರವಾಗಿ ಬರುವಂತೆ ಮಾಡಿದರು. ಮಹಿಳೆಯರ ಸಮಸ್ಯೆಗಳಿಗೆ ಯಾರು ಸ್ಪಂದಿಸುತ್ತಿದ್ದಾರೆ ಎಂದು ಯೋಚಿಸಿ ನೋಡಿ ಎಂದರು.

ಮಹಿಳೆಯರ ಆರೋಗ್ಯ, ಗರ್ಭಕೋಶ, ಮುಟ್ಟಿನ ಸಮಸ್ಯೆ ಬಗ್ಗೆ ಮನೆಯಲ್ಲೇ ಮಹಿಳೆಯರು ಹೇಳಿಕೊಳ್ಳುತ್ತಿರಲಿಲ್ಲ. ಆಸ್ಪತ್ರೆಯಲ್ಲೂ ಸಾಕಷ್ಟು ಸೌಲಭ್ಯಗಳಿರಲಿಲ್ಲ. ಆದರೆ ಈಗ ಪ್ರಧಾನಿ ಮೋದಿಯವರು ಮಹಿಳೆಯರಿಗಾಗಿ ಆರೋಗ್ಯ ಕೇಂದ್ರ ಸ್ಥಾಪಸಿದ್ದಲ್ಲದೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನಮ್ಮ ಸರ್ಕಾರ ಮಹಿಳೆಯರ ಪರವಾಗಿದೆ ಎಂದರು.

ಹಿಂದೆಲ್ಲ ದೊಡ್ಡ ಕಾಯಿಲೆ ಬಂದಾಗ ಅದರ ಚಿಕಿತ್ಸೆಗೆ ಕುಟುಂಬ ಆಸ್ತಿ ಮಾರುವ ಪರಿಸ್ಥಿತಿಯ ಕಾಲ ಇತ್ತು. ಆದರೆ ಇದೀಗ ಆ ಪರಿಸ್ಥಿತಿಯಿಲ್ಲ. ಏಕೆಂದರೆ ಕೇಂದ್ರ ಸರ್ಕಾರ ಪ್ರತಿ ಪ್ರಜೆಗೆ ಆಯುಷ್ಮಾನ್ ಕಾರ್ಡ್ ನೀಡಿದೆ. ಯಾವುದೇ ಕಾಯಿಲೆ ಇದ್ದರೂ ಚಿಕಿತ್ಸೆ ಕೊಡಿಸಬಹುದು ಎಂದರು.

ಹಿಂದೆ ಮಹಿಳೆಯರು ಶೌಚಕ್ಕೆ ಹೋಗಲು ತುಂಬಾ ಹಿಂಸೆ ಅನುಭವಿಸುತ್ತಿದ್ದರು. ಮನೆಯಲ್ಲಿ ಶೌಚಾಲಯ ಇರಲಿಲ್ಲ. ರಸ್ತೆ ಬದಿ ಶೌಚ ಮಾಡುವ ಸ್ಥಿತಿಯಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಪ್ರತಿಮನೆಗೆ ಶೌಚಾಲಯ ನೀಡಿದ್ದಾರೆ.

ದೇಶದ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಸ್ವತಃ ಪ್ರಧಾನಿಯೇ ಕಸಬರಿಗೆ ಹಿಡಿದು ಕಸಗೂಡಿಸಿದರು. ಸ್ವಚ್ಛ ಭಾರತಕ್ಕೆ ಕರೆ ನೀಡಿದರು. ಪ್ರಧಾನಿ ಮೋದಿಯವರ ಪ್ರೇರಣೆಯಿಂದ  ದೇಶಾದ್ಯಂತ ದೊಡ್ಡ ದೊಡ್ಡ ಜನರು ಕಸಬರಿಗೆ ಹಿಡಿದು ಸ್ವಚ್ಛಗೊಳಿಸಿದರು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ರೈತಪರ ಚಿಂತನೆಯುಳ್ಳ ನಾಯಕರಾಗಿದ್ದಾರೆ. ರೈತರಿಗೆ ಉಚಿತ ವಿದ್ಯುತ್, ಪಂಪ್‌ಸೆಟ್ ಉಚಿತವಾಗಿ ನೀಡಿದ್ದಾರೆ ಕೃಷಿ ಸಲಕರಣೆಗಳು, ಕೃಷಿಸಾಲ, ರೈತರನ್ನು ಸದೃಢಗೊಳಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಐಎಎಸ್‌ನಿಂದ ಗ್ರಾಪಂ ಮಹಿಳಾ ಅಧಿಕಾರಿಗಳವರೆಗೆ 24 ವಾರ ಬಾಣಂತಿಯರಿಗೆ ರಜೆ ಘೋಷಣೆ ಮಾಡಲಾಗಿದೆ. ಕೊರೊನಾ ಬಂದಾಗ ಹಲವಾರು ಜನ ಸತ್ತರು. ವಿದೇಶದಲ್ಲಿ ಹೆಣಗಳ ರಾಶಿ ಉರುಳಿದವು, ಆದರೆ ಭಾರತದಲ್ಲಿ ಪ್ರಧಾನಿ  ಮೋದಿಯವರು ಇಲ್ಲೇ ಔಷಧಿ ತಯಾರಿಕೆ ಎಲ್ಲ ವ್ಯವಸ್ಥೆ ಮಾಡಿ. ದೇಶದ ಜನರಿಗೆ ಸುಮಾರು 200 ಕೋಟಿಗೂ ಅಧಿಕ ಎರಡು ಡೋಸ್ ಉಚಿತ ಲಸಿಕೆ ನೀಡುವ ಮೂಲಕ ಕೊರೊನಾ ಅಪಾಯದಿಂದ ದೇಶದ ಜನರನ್ನು ಪಾರು ಮಾಡಿದರು. 

ಕೊರೊನಾ ಸಂದರ್ಭದಲ್ಲಿ ದೇಶದ ಜನರಿಗೆ ಉಚಿತವಾಗಿ ಬೆಳೆ, ಅಕ್ಕಿ ಎಲ್ಲವೂ ಉಚಿತವಾಗಿ ರೇಷನ್ ಸಿಗುವಂತೆ ಮಾಡಿದರು. ಅಷ್ಟು ಅಲ್ಲದೇ ಕೆಲಸವಿಲ್ಲದೆ ಕುಳಿತಿದ್ದ ಕಾರ್ಮಿಕರು, ಆಟೋ ಚಾಲಕರು ಸೇರಿದಂತೆ ಎಲ್ಲರಿಗೂ ಪರಿಹಾರ ಧನ ನೀಡಿದರು. ಇಷ್ಟು ದೊಡ್ಡ ದೇಶದಲ್ಲಿ ಇದು ಸಾಧಿಸುವುದು ಸುಲಭದ ಮಾತಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಸಾಧಿಸಿ ತೋರಿಸಿದರು. ಅದೇ ರೀತಿ ರಾಜ್ಯದಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಹಲವು ಜನಪರ ಯೋಜನೆಗಳಿಗೆ ಜಾರಿಗೆ ತಂದಿದ್ದಾರೆ ಎಂದರು.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ತಾಯಿಯನ್ನು ಕಳೆದುಕೊಂಡರು. ಅವರು ಈ ಘಟನೆಯಿಂದ ತುಂಬಾ ದುಃಖದಲ್ಲಿದ್ದರೂ, ದೇಶಕ್ಕಾಗಿ ಹಗಲಿರುಳು ದುಡ್ಡಿಯುತ್ತಿದ್ದಾರೆ. ಇಂಥ ಸಮಯದಲ್ಲಿ ಪ್ರಧಾನಿಯವರ ಕಷ್ಟ ಕೇಳುವವರಿಲ್ಲದಂತಾಗಿದೆ. ಪ್ರಧಾನಿ ಮೋದಿಯವರಿಗೆ ನಿಮ್ಮ ಅಶೀರ್ವಾದ ಬೇಕು ಎಂದು ಮನವಿ ಮಾಡಿಕೊಂಡರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಹಿಳೆಯರು, ಸೈನಿಕರು ಮತ್ತು ರಾಷ್ಟ್ರದ ಬಗ್ಗೆ ಚಿಂತನೆ ನಡೆಸುತ್ತದೆ ಅವರ ರಕ್ಷಣೆ, ಏಳ್ಗೆಗೆ ಸದಾ ಶ್ರಮಿಸುತ್ತಿದೆ ಎಂದ ಅವರು ಮುಂದುವರಿದು ಎಲ್ಲರೂ ಗಡಿ ಕಾಯಲು ಆಗುವುದಿಲ್ಲ. ಆದರೆ ನಾವು ಸೈನಿಕರಿಗೆ ಬಲ ತುಂಬುವ ಕೆಲಸ ಮಾಡಬೇಕು ಎಂದರು.

ಕುರುಬರಿಗೂ ಮೋಸ ಮಾಡಿದ್ದ ಸಿದ್ದರಾಮಯ್ಯ: ಶೋಭಾ ಕರಂದ್ಲಾಜೆ

ಹಿಂದಿನ ಸರ್ಕಾರದಲ್ಲಿ ಕುಡಿಯಲು ನೀರು ಕೂಡ ಸಿಗುತ್ತಿರಲಿಲ್ಲ. ಅದೆಷ್ಟೋ ರಾಜ್ಯಗಳಲ್ಲಿ ಈಗಲೂ ಕುಡಿಯುವ ನೀರಿಗಾಗಿ ಐದಾರು ಕಿಮೀ ನಡೆದು ಹೋಗಬೇಕಾಗಿತ್ತು. ಆದರೆ ಈಗ ಪ್ರಧಾನಿ ಮೋದಿ ಮನೆಮನೆಗೆ ಶುದ್ಧ ಕುಡಿಯುವ ನೀರು ತಲುಪಿಸುವ ಕನಸು ಕಂಡು ಅದರಲ್ಲೂ ಯಶಸ್ವಿಯಾಗಿದ್ದಾರೆ. ದೇಶ ಭದ್ರವಾಗಿರಲು ನರೇಂದ್ರ ಮೋದಿಯವರಿಗೆ ನಿಮ್ಮ ಬೆಂಬಲ, ಆಶೀರ್ವಾದ ಬೇಕು. ಹಾಗೇ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಚಿವ ಹಾಲಪ್ಪ ಆಚಾರ್ ಅವರಿಗೆ ನಿಮ್ಮ ಆಶೀರ್ವಾದವಿದ್ದರೆ ಇನ್ನಷ್ಟು ಬಲ ಬರುತ್ತದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಬೆಂಬಲಿಸುವಂತೆ ಮನವಿ ಮಾಡಿದರು.

Follow Us:
Download App:
  • android
  • ios