ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿತಾ ಬಿಜೆಪಿ? ಕುತೂಹಲ ಮೂಡಿಸಿದೆ 'ಈ' ಬ್ಯಾನರ್!
ದೆಹಲಿ ಚುನಾವಣಾ ಫಲಿತಾಂಶದಲ್ಲಿ ಮುನ್ನಡೆ ಸಾಧಿಸಿದ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ| ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡಿತಾ ಬಿಜೆಪಿ| ಕುತೂಹಲ ಮೂಡಿಸಿದೆ ದೆಹಲಿ ಕಚೇರಿಯಲ್ಲಿರುವ ಬ್ಯಾನರ್
ನವದೆಹಲಿ[ಫೆ.11]: ರಾಷ್ಟ್ರ ರಾಜಧಾನಿ ದೆಹಲಿ ಚುನಾವಣೆಯ ಆರಂಭಿಕ ಫಲಿತಾಂಶ ಹೊರ ಬಿದ್ದಿದ್ದು, ಆಡಳಿತರೂಢ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮುನ್ನಡೆ ಸಾಧಿಸಿದೆ. ಇನ್ನು ಬಿಜೆಪಿ 15 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಎರಡನೇ ಸ್ಥಾನದಲ್ಲಿದ್ದು, ಕಾಂಗ್ರೆಸ್ ಕೇವಲ 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಹೀಗಿರುವಾಗ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಗೃಹ ಸಚಿವ ಅಮಿತ್ ಶಾ ಫೋಟೋ ಇರುವ ಬ್ಯಾನರ್ ಒಂದು ಭಾರೀ ಸದ್ದು ಮಾಡಿದೆ. ಅಲ್ಲದೇ ಈ ಬ್ಯಾನರ್ ನಲ್ಲಿ ಬರೆದಿರುವ ಸಂದೇಶ ಅಚ್ಚರಿ ಹಾಗೂ ಕುತೂಹಲ ಹುಟ್ಟಿಸಿದೆ.
ಬದಲಾಗುತ್ತಿರುವ ಸಮೀಕರಣ: ಮುನ್ನಡೆ ಜಿದ್ದಾಜಿದ್ದಿಯಲ್ಲಿ ಬಿಜೆಪಿ ಸಂಖ್ಯೆ ಏರಿಕೆ!
ಹೌದು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ಬಿಜೆಪಿ ನಾಯಕ ಹಾಗೂ ಗೃಹ ಸಚಿವ ಅಮಿತ್ ಶಾ ಭಾವಚಿತ್ರವಿರುವ ಬ್ಯಾನರ್ ಲಗತ್ತಿಸಲಾಗಿದೆ. ಈ ಬ್ಯಾನರ್ ಗಮನಿಸಿದರೆ,ಫಲಿತಾಂಶ ಪ್ರಕಟವಾಗುವುದಕ್ಕೂ ಮೊದಲೇ ಬಿಜೆಪಿ ಸೋಲೊಪ್ಪಿಕೊಂಡಿತ್ತಾ ಎಂಬ ಅನುಮಾನ ಮೂಡಿಸಿದೆ. ಈ ಬ್ಯಾನರ್ನಲ್ಲಿ 'ಗೆದ್ದಾಗ ನಾವು ಅಹಂಕಾರ ತೋರಿಸುವುದಿಲ್ಲ ಹಾಗೂ ಸೋತಾಗ ನಿರಾಸೆಗೊಳ್ಳುವುದಿಲ್ಲ' ಎಂದು ಬರೆಯಲಾಗಿದೆ.
ಚುನಾವಣಾ ಸಮೀಕ್ಷೆಯಲ್ಲಿ ಆಪ್ ಗೆಲ್ಲುತ್ತದೆ ಎಂದು ಹೇಳಲಾದರೂ, ಫಲಿತಾಂಶ ಹೊರ ಬೀಳುವುದಕ್ಕೂ ಮೊದಲು ಬಿಜೆಪಿ ನಾಯಕರು ಗೆಲ್ಲುವ ಮಾತುಗಳನ್ನಾಡಿದ್ದರು. ಆದರೀಗ ಕಚೇರಿಯಲ್ಲಿರುವ ಬ್ಯಾನರ್ ಬೇರೆಯೇ ಕತೆ ಹೇಳಿದೆ. ಆರಂಭಿಕ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಕಮಲ ಪಾಳಯ ಸೋಲೊಪ್ಪಿಕೊಳ್ಳಲು ಸಜ್ಜಾಗಿದೆ. ಇದೇ ನಿಟ್ಟಿನಲ್ಲಿ ಈ ಬ್ಯಾನರ್ ಕೂಡಾ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ.
ಮನೆಗೆ ಬಂದ ಜ್ಯೂನಿಯರ್ ಕೇಜ್ರಿ: ಕಂದನ ನೋಡಿ ಅರವಿಂದ್ ಗಾನ್ ಕ್ರೇಜಿ!