ರಾಜ್ಯದ ಕೆಲವೆಡೆ ಕೇಸರಿ ಬಟ್ಟೆ ಹಾಕಿಕೊಂಡು ಕರ್ತವ್ಯಕ್ಕೆ ಹಾಜರಾಗುವ ಮೂಲಕ ಇಲಾಖೆಗೆ ಅವಮಾನ ಮಾಡಿದ್ದೀರಿ. ಕೆಳಹಂತದ ಅಧಿಕಾರಿಗಳು ಏನೇ ಮಾಡಿದರೂ ಸುಮ್ಮನೆ ನೋಡುತ್ತಿದ್ದೀರಿ. ಪೊಲೀಸ್‌ ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟಿದ್ದೀರಾ?

ಬೆಂಗಳೂರು (ಮೇ.24): ರಾಜ್ಯದ ಕೆಲವೆಡೆ ಕೇಸರಿ ಬಟ್ಟೆ ಹಾಕಿಕೊಂಡು ಕರ್ತವ್ಯಕ್ಕೆ ಹಾಜರಾಗುವ ಮೂಲಕ ಇಲಾಖೆಗೆ ಅವಮಾನ ಮಾಡಿದ್ದೀರಿ. ಕೆಳಹಂತದ ಅಧಿಕಾರಿಗಳು ಏನೇ ಮಾಡಿದರೂ ಸುಮ್ಮನೆ ನೋಡುತ್ತಿದ್ದೀರಿ. ಪೊಲೀಸ್‌ ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟಿದ್ದೀರಾ? ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ನಡೆಸಿದ ಮೊದಲ ಸಭೆಯಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಹಿಂದಿನ ಸರ್ಕಾರದಲ್ಲಿ ನಿಮ್ಮ ಕೆಲಸ ಸರಿ ಇರಲಿಲ್ಲ: ರಾಜ್ಯದಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಆದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ನಿಮ್ಮ ಕಾರ್ಯವೈಖರಿ ಸರಿ ಇರಲಿಲ್ಲ. ಪ್ರವಾಹ ಪರಿಸ್ಥಿತಿ ಉಂಟಾಗಿ ನೂರಾರು ಮಂದಿಯ ಜೀವ ಹಾನಿಯಾಯಿತು. ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡರು. ಈವರೆಗೂ ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರ ನೀಡಲಾಗಿಲ್ಲ. ಈ ಸರ್ಕಾರದಲ್ಲಿ ಜನಪರವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಜಟಾಪಟಿ!

ಎಲ್ಲರೊಂದಿಗೆ ಡಿಕೆಶಿ ಉಭಯಕುಶಲೋಪರಿ: ಹದಿನಾರನೇ ವಿಧಾನಸಭೆಯ ಮೊದಲ ಅಧಿವೇಶನದ ಮೊದಲ ದಿನ ಪೂರ್ತಿ ಕ್ರಿಯಾಶೀಲವಾಗಿ ಓಡಾಡುತ್ತಿದ್ದ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಪಕ್ಷಭೇಧ ಮರೆತು ಪ್ರತಿಯೊಬ್ಬ ಪ್ರತಿಪಕ್ಷದ ಸದಸ್ಯರನ್ನೂ ಖುದ್ದು ಭೇಟಿಯಾಗಿ ಕೈಕುಲುಕಿದರು. ಜತೆಗೆ ಬಿಜೆಪಿಯ ಹಿರಿಯ ನಾಯಕ ಎಸ್ಸೆಂ ಕೃಷ್ಣ, ಮಾಜಿ ಪ್ರಧಾನಿ,ಜೆಡಿಎಸ್‌ ವರಿಷ್ಠ ದೇವೇಗೌಡರ ನಿವಾಸಕ್ಕೂ ಭೇಟಿ ನೀಡಿ ಆಶೀರ್ವಾದ ಪಡೆದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಉಪ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸೋಮವಾರ ಅಧಿವೇಶನಕ್ಕೆ ಆಗಮಿಸಿದ್ದು, ವಿಧಾನಸಭೆ ಪ್ರವೇಶ ದ್ವಾರದಲ್ಲಿರುವ ಮೆಟ್ಟಿಲಿಗೆ ತಲೆ ಬಾಗಿ ಸಾಷ್ಟಾಂಗ ನಮಸ್ಕಾರ ಮಾಡಿದರು. ಈ ವೇಳೆ ರಮೇಶ್‌ ಜಾರಕಿಹೊಳಿ ಅವರಿಗೂ ಕೈ ಕುಲುಕಿ ವಿಶೇಷ ನಗೆ ಬೀರಿದರು. ಬಳಿಕ ಮೊಗಸಾಲೆಯಲ್ಲಿ ಕನಕಪುರದಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಿ ಠೇವಣಿ ಕಳೆದುಕೊಂಡ ಮಾಜಿ ಸಚಿವ ಆರ್‌. ಅಶೋಕ್‌ ಅವರನ್ನು ಕರೆದು ಹೆಗಲ ಮೇಲೆ ಕೈ ಹಾಕಿ ಫೋಟೋ ಶೂಟ್‌ ನಡೆಸಿಕೊಂಡರು.

ಪ್ರಕೃತಿ ಯಾರ ಕೈಯಲ್ಲೂ ಇಲ್ಲ, ಎಚ್ಚರಿಕೆ ಇರಬೇಕು: ಡಿ.ಕೆ.ಶಿವಕುಮಾರ್‌

ಮೊದಲಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಬಿಜೆಪಿಯ ಸದಸ್ಯರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಈ ವೇಳೆ ಹೋಗುತ್ತಿದ್ದ ಆರ್‌. ಅಶೋಕ್‌ ಅವರನ್ನು ಕರೆದು ಪಕ್ಕದಲ್ಲಿ ನಿಲ್ಲುವಂತೆ ಡಿ.ಕೆ. ಶಿವಕುಮಾರ್‌ ಹೇಳಿದಾಗ ಒಪ್ಪದ ಆರ್‌. ಅಶೋಕ್‌, ‘ನಾನ್ಯಾಕಪ್ಪ ಬೇಡ, ಬೇಡ’ ಎಂದರು. ಬಲವಂತವಾಗಿ ಕೈ ಹಿಡಿದು ಎಳೆದುಕೊಂಡ ಶಿವಕುಮಾರ್‌, ‘ಸುಮ್ಮನೆ ಫೋಟೋ ತೆಗೆಸಿಕೊಳ್ಳೋಕೆ’ ಎಂದು ಹೆಗಲ ಮೆಲೆ ಕೈ ಹಾಕಿ ಫೋಟೋ ತೆಗಿರಿ ಎಂದು ತೆಗೆಸಿಕೊಂಡರು. ನಂತರ ವಿಧಾನಸಭೆ ಮುಂಭಾಗದಲ್ಲಿದ್ದ ಹಾಪ್‌ಕಾಮ್ಸ್‌ ಮಳಿಗೆಗೆ ತೆರಳಿದ ಅವರು ಅಲ್ಲಿದ್ದ ಹಣ್ಣು ಹಾಗೂ ಜ್ಯೂಸ್‌ ಸೇವಿಸಿದರು. ಇದೇ ವೇಳೆ ಹಾಪ್‌ಕಾಮ್ಸ್‌ ಸಿಬ್ಬಂದಿ ಜತೆ ಹಾಪ್‌ಕಾಮ್ಸ್‌ ಬಗ್ಗೆ ವಿಚಾರಿಸಿದರು.