ಪಕ್ಷ ಹೇಳಿದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ ಹೇಳಿದರೆ ನಾನು ಸ್ಪರ್ಧೆ ಮಾಡುತ್ತೇನೆ.

ತುಮಕೂರು (ಆ.05): ಪಕ್ಷ ಹೇಳಿದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ ಹೇಳಿದರೆ ನಾನು ಸ್ಪರ್ಧೆ ಮಾಡುತ್ತೇನೆ. ಪಕ್ಷ ಟಿಕೆಟ್‌ ಕೊಟ್ಟು ಶಾಸಕನಾಗಿ ಮಾಡಿದೆ. ಲೋಕಸಭೆಗೆ ನಿಲ್ಲಲ್ಲು ಸೂಚನೆ ಬಂದರೆ ನಿಲ್ಲುತ್ತೇನೆ ಎಂದ ಅವರು ಆ ರೀತಿಯ ಸೂಚನೆ ಇನ್ನೂ ಬಂದಿಲ್ಲ ಎಂದರು. ನಿನ್ನೆ ನಡೆದ ಸಭೆಯಲ್ಲಿ ಲೋಕಸಭೆಯಲ್ಲಿ ಎಷ್ಟು ಸ್ಥಾನ ಗೆಲ್ಲಿಸಿ ಕೊಡುತ್ತೀರಾ ಎಂದು ಕೇಳಿದರು. ನಾವು 28 ಸ್ಥಾನ ಗೆಲ್ಲಿಸಿ ಕೊಡುವ ಬಗ್ಗೆ ಹೇಳಿದ್ದೇವೆ. ಒಬ್ಬೊಬ್ಬ ಸಚಿವರಿಗೆ ಒಂದೊಂದು ಲೋಕಸಭಾ ಕ್ಷೇತ್ರದ ಜವಾಬ್ದಾರಿ ನೀಡಲಾಗುತ್ತದೆ. 

ಯಾವ ಯಾವ ಸಚಿವರು ನಿಲ್ಲಬೇಕು ಎಂದು ಹೈಕಮಾಂಡ್‌ ನಿರ್ಧರಿಸುತ್ತದೆ. ಸಚಿವರಿಗೆ ಗುತ್ತಿಗೆದಾರರು ಕಮಿಷನ್‌ ಕೊಡಬೇಕು ಎಂದು ಕುಮಾರಸ್ವಾಮಿ ಹೇಳಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಕುಮಾರಸ್ವಾಮಿ ಅವರು ಕಮಿಷನ್‌ ಪಡೆದಿರಬೇಕು. ಅದಕ್ಕೆ ಅವರು ಹಾಗೆ ಮಾತನಾಡುತ್ತಾರೆ ಎಂದರು. ವರ್ಗಾವಣೆ ದಂಧೆ ನಮ್ಮಲ್ಲಿ ನಡೆಯುತ್ತಿಲ್ಲ. ಆಯಾ ಕ್ಷೇತ್ರದ ಶಾಸಕರ ಮನವಿಗೆ ಸ್ಪಂದಿಸಿ ವರ್ಗಾವಣೆ ಮಾಡಲಾಗಿದೆ. ಹಾಲಿನಲ್ಲಿ ಕಲಬೆರಕೆ ಮಾಡುವುದು ನನಗೆ ತೀವ್ರ ನೋವು ತಂದಿದೆ. ಈ ಬಗ್ಗೆ ಕಮಿಷನರ್‌ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು. ಕಲಬೆರಕೆ ಕುರಿತು ರಾರ‍ಯಂಡಮ್ ಚೆಕ್‌ ಮಾಡಬೇಕು. 

ದೇವೀರಮ್ಮನ ದೇಗುಲಕ್ಕೆ ಡ್ರೆಸ್ ಕೋಡ್: ದೇವಾಲಯಕ್ಕೆ ಸ್ಕರ್ಟ್, ಮಿಡಿ, ಪ್ಯಾಂಟ್ ಹಾಕ್ಕೊಂಡು ಬರುವಂತಿಲ್ಲ!

ಗುಣಮಟ್ಟದ ಪರೀಕ್ಷೆ ಮಾಡಬೇಕು ಎಂದ ಅವರು ಕಲಬೆರಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಹಾಲು ಉತ್ಪಾದಕ ರೈತರಿಗೆ 3 ರು. ಹೆಚ್ಚಳ ಮಾಡಲಾಗಿದೆ. ಇದರಿಂದ ಹಾಲಿನ ಉತ್ಪಾದನೆ ಹೆಚ್ಚಾಗಲಿದೆ. ಹಾಗಾಗಿ ತುಪ್ಪವೂ ಹೆಚ್ಚಾಗಬಹುದು. ಪ್ರಸ್ತುತ ಸಂದರ್ಭದಲ್ಲಿ ತುಪ್ಪದ ಶೇಖರಣೆ ಕಡಿಮೆ ಇದೆ ಎಂದರು. ತುಪ್ಪ ಹೆಚ್ಚಾದರೆ, ತಿರುಪತಿಗೆ ಬೇಕಾದರೂ ಕೊಡಬಹುದು. ಇಲ್ಲ ಅಂದರೆ ಎಲ್ಲಿಂದ ಕೊಡುವುದು. ಕ್ಷೀರ ಭಾಗ್ಯ ಯೋಜನೆ ಅಡಿ ಉತ್ತರ ಕರ್ನಾಟಕದಲ್ಲಿ ಹಾಲಿನ ಪುಡಿ ಪೂರೈಕೆ ಆಗುತ್ತಿಲ್ಲ. ಗುಲ್ಬರ್ಗಾ ಜಿಲ್ಲೆಯಲ್ಲಿ ಕ್ಷೀರ ಭಾಗ್ಯ ನಮ್ಮ ನಿರೀಕ್ಷಿಯಂತೆ ಯಶಸ್ವಿಯಾಗಿಲ್ಲ ಎಂದರು.

ಸರ್ಕಾರಿ ಆಸ್ಪತ್ರೆಗೆ ಸಚಿವ ರಾಜಣ್ಣ ದಿಡೀರ್‌ ಭೇಟಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಿದ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಆಡಳಿತ ವೈದ್ಯಾಧಿಕಾರಿ ಮಹೇಶ್‌ ಸಿಂಗ್‌ ಕಾರ್ಯ ವೈಖರಿ ಬಗ್ಗೆ ಅಸಮಾಧಾನಗೊಂಡು ತರಾಟೆಗೆ ತೆಗೆದುಕೊಂಡರು. ನಂತರ ಡಯಾಲಿಸೀಸ್‌ ಕೇಂದ್ರ, ವಾರ್ಡ್‌ಗಳು ಸೇರಿದಂತೆ ವಿವಿಧ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿ ವಿರುದ್ಧ ಕಿಡಿಕಾರಿದರು. ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಬರುವ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ದೊರಕಬೇಕು. 

ಕುಸಿದ ಒಣದ್ರಾಕ್ಷಿ ದರ: ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ದ್ರಾಕ್ಷಿ ಬೆಳೆಗಾರರು!

ಆ ನಿಟ್ಟಿನಲ್ಲಿ ನೋಡಿಕೊಳ್ಳುವಂತೆ ಸೂಕ್ತ ಸಲಹೆ ನೀಡಿ, ಸ್ವಚ್ಛತೆ ಕಾಪಾಡದೇ ಬೇಜವಾಬ್ದಾರಿಯಿಂದ ನಡೆದುಕೊಂಡಿರುವುದು ಸರಿಯಲ್ಲ ಎಂದರು. ರಾತ್ರಿ ವೇಳೆ ಆಸ್ಪತ್ರೆ ಮುಂಭಾಗ ಮತ್ತು ಕಾಂಪೌಂಡ್‌ ಒಳ ಭಾಗದ ಆಸ್ಪತ್ರೆ ಸುತ್ತ ವಿದ್ಯುತ್‌ ದೀಪಗಳು ಉರಿಯುವುದಿಲ್ಲ. ಕೆಲ ವೈದ್ಯರು ಬೇಕಾಬಿಟ್ಟಿವರ್ತಿಸುತ್ತಾರೆ ಎಂದು ನಾಗರಿಕರು ಸಚಿವರ ಗಮನಕ್ಕೆ ತಂದಾಗ, ಆಸ್ಪತ್ರೆಯಲ್ಲಿ ಬೆಳೆದು ನಿಂತಿರುವ ಗಿಡಮರಗಳಿಂದ ಉದುರುವ ಕಸ ಕಡ್ಡಿಯನ್ನು ಎತ್ತಿ ಸ್ವಚ್ಛಮಾಡಬೇಕು. ಪೆಟ್ಟಿಗೆ ಅಂಗಡಿಗಳನ್ನು ಎತ್ತಿಸಿ, ಆಸ್ಪತ್ರೆ ಕಾಂಪೌಂಡ್‌ ಹೊರಗೆ ಮತ್ತು ಒಳಾಂಗಣದಲ್ಲಿ ಸಂಜೆ ಆದರೆ ವಿದ್ಯುತ್‌ ದೀಪಗಳು ಉರಿಯಬೇಕು. ಬರುವ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಪ್ರೀತಿಯಿಂದ ಕಂಡು ಉಪಚರಿಸಬೇಕು ಎಂದು ವೈದ್ಯಾಧಿಕಾರಿಗೆ ತಾಕೀತು ಮಾಡಿದರು.