ಮಾಜಿ ಶಾಸಕರಿಬ್ಬರನ್ನು ಹೈಕಮಾಂಡ್‌ ಹಂತದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡ ನಂತರ ಹೈಕಮಾಂಡ್‌ ವಿರುದ್ಧ ತಿರುಗಿ ಬಿದ್ದ ಮುನಿಯಪ್ಪ ಅಂಡ್‌ ಟೀಂ 

ಕೋಲಾರ(ಜು.15):  ಇತ್ತೀಚೆಗೆ ಕೋಲಾರ ಜಿಲ್ಲೆಯ ರಾಜಕಾರಣದಲ್ಲಿ ದಿನಕ್ಕೊಂದು ವಿದ್ಯಾಮಾನಗಳು ನಡೆಯುತ್ತಿದ್ದು, ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಬಹಿರಂಗವಾಗಿಯೇ ಎರಡು ಗುಂಪುಗಳಾಗಿದ್ದು ಒಂದು ಗುಂಪು ಕೋಲಾರ ಕ್ಷೇತ್ರಕ್ಕೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರನ್ನು ಕರೆತರಲು ಕಸರತ್ತು ನಡೆಸುತ್ತಿದ್ದರೆ ಮತ್ತೊಂದು ಗುಂಪು ಮೌನಕ್ಕೆ ಶರಣಾಗಿದೆ. ಮಾಜಿ ಕೇಂದ್ರ ಸಚಿವ ಕೆ.ಎಚ್‌ ಮುನಿಯಪ್ಪನವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾಜಿ ಶಾಸಕರಿಬ್ಬರನ್ನು ಹೈಕಮಾಂಡ್‌ ಹಂತದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡ ನಂತರ ಕೆ.ಎಚ್‌ ಮುನಿಯಪ್ಪ ಮತ್ತು ಅವರ ಗುಂಪು ಹೈಕಮಾಂಡ್‌ ವಿರುದ್ಧ ತಿರುಗಿ ಬಿದ್ದಿದೆ. ಈ ಇಬ್ಬರೂ ಮಾಜಿ ಶಾಸಕರುಗಳನ್ನು ಸೇರ್ಪಡೆ ಮಾಡಿಕೊಂಡಿರುವ ವಿಷಯಕ್ಕೆ ಉತ್ತರ ನೀಡಬೇಕೆಂದು ಕೆ.ಹೆಚ್‌ ಮುನಿಯಪ್ಪ ಹೈಕಮಾಂಡ್‌ ಗೆ ಒತ್ತಡ ಹೇರಿ ಜಿಲ್ಲೆಯ ಹಿರಿಯ ರಾಜಕಾರಣಿ ರಮೇಶ್‌ ಕುಮಾರ್‌ ವಿರುದ್ಧ ಬಹಿರಂಗವಾಗಿ ಸಮರ ಸಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಎಚ್ಚೆಂ- ವೆಂಕಟಶಿವಾರೆಡ್ಡಿ ಭೇಟಿ

ಈ ಮಧ್ಯೆ ಕೆ.ಎಚ್‌ ಮುನಿಯಪ್ಪ ಹೈಕಮಾಂಡ್‌ ವಿರುದ್ಧ ತಿರುಗಿ ಬಿದ್ದ ನಂತರ ಕೋಲಾರ ರಾಜಕಾರಣದಲ್ಲಿ ಊಹಾ ಪೋಹಗಳು ದಟ್ಟವಾಗಿ ಹಬ್ಬಿದ್ದು ಕೆ.ಹೆಚ್‌ ಮುನಿಯಪ್ಪ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆ ಅಥವಾ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಪರೋಕ್ಷವಾಗಿ ಬೆಂಬಲ ನೀಡುತ್ತಾರೆ ಎಂಬ ವದಂತಿಗಳು ದಟ್ಟವಾಗಿ ಹಬ್ಬಿರುವಾಗಲೇ ಬುಧವಾರ ಕೋಲಾರ ನಗರದಲ್ಲಿ ಗುರುಪೌರ್ಣಮಿ ಅಂಗವಾಗಿ ಸಾಯಿ ಬಾಬಾ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಕೆ.ಎಚ್‌ ಮುನಿಯಪ್ಪ ಹಾಗು ಜೆಡಿಎಸ್‌ ಮಾಜಿ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಪರಸ್ಪರ ಭೇಟಿಯಾಗಿ ಚರ್ಚಿಸಿರುವುದು ಜಿಲ್ಲೆಯ ಕಾಂಗ್ರೆಸ್‌ ಮುಖಂಡರಲ್ಲಿ ಸಂಚಲನ ಉಂಟುಮಾಡಿದೆ.

ಜೆಡಿಎಸ್ ಸೇರಿದ ಮುನಿಯಪ್ಪ ಆಪ್ತ, ಹೈಕಮಾಂಡ್‌ಗೆ ಟ್ರೈಲರ್ ತೋರಿಸಿದ್ರಾ ಕೈ ಹಿರಿಯ ನಾಯಕ?

ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ವಿರುದ್ಧ ನಿನ್ನೆ ಮೊನ್ನೆಯ ತನಕ ತಿರುಗಿ ಬಿದ್ದಿದ್ದ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಯವರು ಸಹ ಇತ್ತೀಚೆಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡರ ಬಗ್ಗೆ ಸಾಫ್‌್ಟ ಆಗಿದ್ದಾರೆ. ಗುರುಪೌರ್ಣಿಮೆ ಅಂಗವಾಗಿ ಗೋವಿಂದಗೌಡರು ಭಕ್ತಾದಿಗಳಿಗೆ ಏರ್ಪಡಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಜಿ.ಕೆ ವೆಂಕಟಶಿವಾರೆಡ್ಡಿಯವರು ಭಾಗಿಯಾಗಿದ್ದರು.

ಕೋಲಾರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿರುವ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದೇಗೌಡರಿಗೆ ಸಿದ್ದರಾಮಯ್ಯನವರನ್ನು ಕೋಲಾರಕ್ಕೆ ಕರೆತರಲು ಕಾಂಗ್ರೆಸ್‌ ಪಕ್ಷದ ಒಂದು ಗುಂಪು ಪ್ರಯತ್ನಿಸುತ್ತಿರುವುದರಿಂದ ತಾವಾಗಿಯೇ ಸಿದ್ದರಾಮಯ್ಯ ಬರುತ್ತಿಲ್ಲ. ಕೆಲವರು ಒತ್ತಡ ಏರಿ ತರುತ್ತಿದ್ದಾರೆ ಎಂದು ಅಸಮಾಧಾನವನ್ನು ಹೊರ ಹಾಕಿರುವ ಗೋವಿಂದಗೌಡರಿಗೆ ಜೆಡಿಎಸ್‌ ಗಾಳ ಹಾಕಿರುವುದು ಮತ್ತು ಜೆಡಿಎಸ್‌ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿಯವರು ಬುಧವಾರ ಗೋವಿಂದಗೌಡರ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಕಾಕತಾಳಿಯವಾದರೂ ಗೋವಿಂದ ಗೌಡರನ್ನು ಜೆಡಿಎಸ್‌ಗೆ ಸೇರಿಸಿಕೊಳ್ಳುವ ವಿಚಾರಕ್ಕೆ ಇಂಬುಕೊಟ್ಟಂತಾಗಿದೆ. ಕೆ.ಎಚ್‌ ಮುನಿಯಪ್ಪನವರು ತಮ್ಮ ವಿರೋಧಿಗಳನ್ನು ಮಣಿಸಲು ಎಲ್ಲಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ.