ಪಂಜಾಬ್ ಸ್ಥಳೀಯ ಸಂಸ್ಧೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ್ದು, ಬಿಜೆಪಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ಕಂಟಕವಾಯ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಚಂಡಿಗಢ, (ಫೆ.17): ಪಂಜಾಬ್ ಸ್ಥಳೀಯ ಚುನಾವಣಾ ಫಲಿಂತಾಶ ಪ್ರಕಟವಾಗುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ಜಯಭೇರಿ ಭಾರಿಸಿದೆ. 

Add Asianetnews Kannada as a Preferred SourcegooglePreferred

ಒಟ್ಟು 8 ಪುರಸಭೆಗಳ 2,302 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, 109 ಮುನ್ಸಿಪಲ್ ಕೌನ್ಸಿಲ್ ಗಳಿಗೆ ಚುನಾವಣೆ ನಡೆದಿತ್ತು. ಇದರ ಫಲಿತಾಂಶ ಇಂದು (ಬುಧವಾರ) ಪ್ರಕಟವಾಗಿದ್ದು, 8ರಲ್ಲಿ 7 ಮಹಾನಗರ ಪಾಲಿಕೆಗಳನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಬಿಜೆಪಿಗೆ ದೊಡ್ಡ ಆಘಾತ ನೀಡಿದೆ.

ಮೋಘಾ, ಹೋಶೈರಪುರ್, ಕಾಪುರ್ತಲಾ, ಅಭೋಹರ್, ಪಠಾಣಕೋಟ್, ಬಟಾಲಾ, ಮತ್ತು ಬಟಿಂಡಾ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, 53 ವರ್ಷಗಳ ನಂತರ ಕಾಂಗ್ರೆಸ್ ಪುನಃ ಈ ಸಾಧನೆ ಮಾಡಿದೆ. 

ಕೃಷಿ ಕಾಯ್ದೆ ನಿಷ್ಕ್ರಿಯಕ್ಕೆ ಪಂಜಾಬ್‌ ಗೊತ್ತುವಳಿ!

ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಪಂಜಾಬ್​ನ ಬಹುತೇಕ ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಇನ್ನು ಫಲಿತಾಂಶದ ಕುರಿತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪ್ರತಿಕ್ರಿಯಿಸಿದ್ದು, ಇದು 2022ರ ಚುನಾವಣೆಯ ಟ್ರೈಲರ್ ಮಾತ್ರ, ಪಿಚ್ಚರ್ ಅಭಿ ಬಾಕಿ ಹೈ ಎಂದಿದ್ದಾರೆ.

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಪಂಜಾಬ್ ರೈತರ ಹೋರಾಟ ಮುಂದುವರಿದಿದೆ. ಹಲವು ಅಡೆತಡೆಗಳ ಮಧ್ಯೆಯೂ ಪಂಜಾಬ್ ರೈತರು ದಿಲ್ಲಿಯಲ್ಲಿ ಪ್ರತಿಭಟನೆ ಮುಂದುವರಿಸಿದ್ದು, ಈ ಕೃಷಿ ಕಾಯ್ದೆ ಕಾನೂನು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ವಿಶ್ಲೀಷಣೆ ಮಾಡಲಾಗಿದೆ.