ಸಾಲು ಸಾಲು ವಿಧಾನಸಭಾ ಚುನಾವಣೆ, ಮುಂದಿನ ವರ್ಷ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸುವಿಕೆ ಕಾರ್ಯಕ್ಕೆ ಹೆಚ್ಚಿನ ಮಹತ್ವದ ನೀಡಿದೆ. ಆದರೆ ಪಕ್ಷದೊಳಗಿನ ಅಸಮಾಧಾನ, ಭಿನ್ನಮತಗಳ ತಳಮಳ ಸೃಷ್ಟಿಸಿದೆ. ಇದೀಗ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪತ್ನಿ, ಪಟಿಯಾಲ ಸಂಸದೆಗೆ ಕಾಂಗ್ರೆಸ್ ಗೇಟ್‌ಪಾಸ್ ನೀಡಿದೆ.

ಪಂಜಾಬ್(ಫೆ.03) ಭಾರತ್ ಜೋಡೋ ಯಾತ್ರೆ, ಬಸ್ ಯಾತ್ರೆ ಸೇರಿದಂತೆ ಹಲವು ಯಾತ್ರೆಗಳ ಮೂಲಕ ಕಾಂಗ್ರೆಸ್ ಮತ್ತೆ ಪಕ್ಷ ಬಲಪಡಿಸಲು ಮುಂದಾಗಿದೆ. ಕಳೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ನೀಡಿ ಅಧಿಕಾರ ಕಳೆದುಕೊಂಡಿತ್ತು. ಈ ಚುನಾವಣೆ ಸೋಲಿನ ಬಳಿಕ ಪಂಜಾಬ್ ಕಾಂಗ್ರೆಸ್‌ನಲ್ಲಿ ಹಲವು ಬೆಳವಣಿಗೆಯಾಗಿದೆ. ಹಲವು ಪ್ರಮುಖ ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ. ಈ ಬೆಳವಣಿಗೆ ಬಳಿಕ ಪಂಜಾಬ್ ಕಾಂಗ್ರೆಸ್ ಚೇತರಿಕೆ ಹಾದಿಯಲ್ಲಿತ್ತು. ಇದೀಗ ಪಂಜಾಬ್ ಕಾಂಗ್ರೆಸ್ ತಮ್ಮ ಪಕ್ಷದ ನಾಯಕಿ, ಪಟಿಯಾಲ ಸಂಸದೆ ಪ್ರಣೀತ್ ಕೌರ್‌ನ್ನು ಅಮಾನತು ಮಾಡಿದೆ. ಪ್ರಣೀತ್ ಕೌರ್ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾಗಿ ಬಳಿಕ ಪಕ್ಷದ ನಿರ್ಧಾರದಿಂದ ಬೇಸತ್ತು ರಾಜೀನಾಮೆ ನೀಡಿದ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪತ್ನಿ.

ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿ ಸೇರಿಕೊಂಡಿದ್ದಾರೆ. ಹೊಸ ಪಕ್ಷ ಸ್ಥಾಪಿಸಿ ಕೈಸುಟ್ಟುಕೊಂಡ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿಗೆ ಅಧಿಕೃತವಾಗಿ ಸೇರಿಕೊಂಡಿದ್ದಾರೆ. ಆದರೆ ಅಮರಿಂದರ್ ಸಿಂಗ್ ಪತ್ನಿ ಕಾಂಗ್ರೆಸ್ ಸಂಸದೆಯಾಗಿ ಮುಂದುವರಿದಿದ್ದರು. ಅಮರಿಂದರ್ ಸಿಂಗ್ ಬಿಜೆಪಿ ಸೇರ್ಪಡೆ ಬಳಿಕ , ಪ್ರಣೀತ್ ಕೌರ್ ಕಾಂಗ್ರೆಸ್ ಸಂಸದೆಯಾದರೂ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಆನ್ನೋ ಆರೋಪ ಕೇಳಿಬಂದಿತ್ತು. 

ರಾಹುಲ್ ಗಾಂಧಿ ಯಾತ್ರೆ ನಡುವೆ ಕಾಂಗ್ರೆಸ್‌ಗೆ ಶಾಕ್, ಮಾಜಿ ವಿತ್ತ ಸಚಿವ ರಾಜೀನಾಮೆ, ಬಿಜೆಪಿ ಸೇರ್ಪಡೆ!

ಭಾರತ್ ಜೋಡೋ ಯಾತ್ರೆ ವೇಳೆ ಪ್ರಣೀತ್ ಕೌರ್ ಬಿಜೆಪಿ ಪರ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಯಾವುದೇ ಜವಾಬ್ದಾರಿ ವಹಿಸಿಕೊಂಡಿಲ್ಲ. ಇನ್ನು ಕಾಂಗ್ರೆಸ್ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಡಿ ಪಂಜಾಬ್ ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿಗೆ ದೂರು ನೀಡಿತ್ತು. ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ಈ ಕುರಿತು ಎಚ್ಚರಿಕೆ ನೀಡಿದ್ದರು. 

ಕಾಂಗ್ರೆಸ್ ಶಿಸ್ತು ಸಮಿತಿ ಸಭೆ ಸೇರಿ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಣೀತ್ ಕೌರ್ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಪಕ್ಷದಿಂದ ವಜಾ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಶಿಸ್ತು ಸಮಿತಿ ಸದಸ್ಯ ತಾರಿಕ್ ಅನ್ವರ್, ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಪಕ್ಷದಲ್ಲಿ ಜಾಗವಿಲ್ಲ. ಪ್ರಣೀತ್ ಕೌರ್ ವಿರುದ್ಧ ನಾಯಕರು, ಕಾರ್ಯಕರ್ತರು ಪ್ರತಿ ದಿನ ದೂರು ದಾಖಲಿಸಿದ್ದಾರೆ. ದೂರುಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗಿದೆ. ಈ ಕುರಿತು ಪ್ರಣೀತ್ ಕೌರ್‌ಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಅವರ ನಡೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪಕ್ಷದ ಹಿತದೃಷ್ಟಿಯಿಂದ ಪ್ರಣೀತ್ ಕೌರ್ ಅವರನ್ನು ಈ ತಕ್ಷಣದಿಂದ ವಜಾ ಮಾಡಲಾಗಿದೆ ಎಂದಿದ್ದಾರೆ.

ನಾನು RSS ಕಚೇರಿಗೆ ಬರ್ಬೇಕಾದ್ರೆ ನನ್ನ ತಲೆ ಕಡೀಬೇಕಷ್ಟೇ: ರಾಹುಲ್‌ ಗಾಂಧಿ

ಮಾಜಿ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಸೆಪ್ಟೆಂಬರ್ ತಿಂಗಳಲ್ಲಿ ಪಕ್ಷದ ಹಿರಿಯ ನಾಯಕ ನರೇಂದ್ರ ಸಿಂಗ್‌ ತೋಮರ್‌ ಹಾಗೂ ಕಿರಣ್‌ ರಿಜಿಜು ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ ನಾಯಕರ ಪಟ್ಟಿಯಲ್ಲಿ ಅಮರಿಂದರ್‌ ಕೂಡಾ ಸೇರ್ಪಡೆಯಾಗಿದ್ದಾರೆ. ಪಂಜಾಬ್‌ ಚುನಾವಣೆ ವೇಳೆ ಚರಣಜೀತ್‌ ಸಿಂಗ್‌ ಚನ್ನಿಯವರನ್ನು ಮುಖ್ಯಮಂತ್ರಿಯಾಗಿ ಮಾಡಿದ ಬಳಿಕ ಅಮರಿಂದರ್‌ ಕಾಂಗ್ರೆಸ್‌ ಬಿಟ್ಟು ತಮ್ಮದೇ ಪಕ್ಷ ಪಂಜಾಬ್‌ ಲೋಕ ಕಾಂಗ್ರೆಸ್‌ ಸ್ಥಾಪಿಸಿದ್ದರು. ಬಿಜೆಪಿ ಸೇರಿದ ಅವರು ತಮ್ಮ ಪಕ್ಷ ಪಂಜಾಬ್‌ ಲೋಕ ಕಾಂಗ್ರೆಸ್‌ ಅನ್ನು ಬಿಜೆಪಿ ಜತೆ ವಿಲೀನಗೊಳಿಸಿದ್ದಾರೆ. ಅಮರಿಂದರ್‌ ಪುತ್ರ ರಣಿಂದರ್‌ ಸಿಂಗ್‌ ಹಾಗೂ ಅವರ ಪುತ್ರಿ ಜೈಇಂದರ್‌ ಕೌರ್‌ ಕೂಡಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.