‘ಮತಗಳ್ಳತನ’ದ ಆರೋಪ -  ಯಾವ ರೀತಿ ನಕಲಿ ಮತದಾನ ನಡೆಯತ್ತದೆಂಬ ವಿವರಣೆಯಿರುವ ಸುಮಾರು ಒಂದು ನಿಮಿಷದ ವಿಡಿಯೋವೊಂದನ್ನೂ ಕಾಂಗ್ರೆಸ್‌ ಪಕ್ಷ ಬಿಡುಗಡೆ ಮಾಡಿದೆ.

ನವದೆಹಲಿ: ‘ಮತಗಳ್ಳತನ’ದ ಆರೋಪ ಮುಂದಿಟ್ಟುಕೊಂಡು ಚುನಾವಣಾ ಆಯೋಗ, ಬಿಜೆಪಿ ವಿರುದ್ಧದ ದೇಶವ್ಯಾಪಿ ಅಭಿಯಾನಕ್ಕೆ ಕಾಂಗ್ರೆಸ್‌ ಬುಧವಾರ ಚಾಲನೆ ನೀಡಿದೆ. ಇದರ ಭಾಗವಾಗಿ ಯಾವ ರೀತಿ ನಕಲಿ ಮತದಾನ ನಡೆಯತ್ತದೆಂಬ ವಿವರಣೆಯಿರುವ ಸುಮಾರು ಒಂದು ನಿಮಿಷದ ವಿಡಿಯೋವೊಂದನ್ನೂ ಪಕ್ಷ ಬಿಡುಗಡೆ ಮಾಡಿದೆ. 

Add Asianetnews Kannada as a Preferred SourcegooglePreferred

ವಿಡಿಯೋದಲ್ಲೇನಿದೆ?

ದಂಪತಿಗಳು ಮತಕೇಂದ್ರವೊಂದಕ್ಕೆ ಪ್ರವೇಶಿಸುವಾಗ ಕೇಸರಿ ಶಾಲು ಹಾಕಿದ ವ್ಯಕ್ತಿಗಳಿಬ್ಬರು ಅವರನ್ನು ತಡೆಯುತ್ತಾರೆ.

ನಿಮ್ಮ ಮತಗಳನ್ನು ಈಗಾಗಲೇ ನಾವು ಚಲಾಯಿಸಿದ್ದೇವೆ, ನೀವು ವಾಪಸ್‌ ಹೋಗಿ ಎನ್ನುವ ಸೂಚನೆ ನೀಡುತ್ತಾರೆ. ಬಳಿಕ ಆ ಇಬ್ಬರು ವ್ಯಕ್ತಿಗಳು ‘ಮತಕಳ್ಳತನ ಆಯೋಗ’ದ ಬೋರ್ಡ್‌ ಇರುವ ಟೇಬಲ್‌ನಲ್ಲಿ ಕೂತಿರುವ ಅಧಿಕಾರಿಗೆ ಗೆಲುವಿನ ಸನ್ನೆ ತೋರಿಸುತ್ತಾರೆ.

ಯಾರೋ ನಿಮ್ಮ ಮತವನ್ನು ಕಿತ್ತುಕೊಳ್ಳಲು ಬಿಡಬೇಡಿ. ಈ ಬಾರಿ ಪ್ರಶ್ನೆ ಮಾಡಿ , ಉತ್ತರಕ್ಕಾಗಿ ಆಗ್ರಹಿಸಿ. ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿಯ ಕಪಿಮುಷ್ಟಿಯಿಂದ ಬಿಡುಗಡೆ ಮಾಡಿ.

ಮಲ್ಲಿಕಾರ್ಜನ ಖರ್ಗೆ, ಎಐಸಿಸಿ ಅಧ್ಯಕ್ಷ

ಮತಕಳವು ನಿಮ್ಮ ಅಧಿಕಾರದ ಕಳವು. ನಿಮ್ಮ ಗುರುತಿನ ಕಳ್ಳತನವಾಗಿದೆ ಎಂದು ಹೇಳಿದರೆ,

ರಾಹುಲ್‌ ಗಾಂಧಿ.

ಮೋದಿ ಕ್ಷೇತ್ರ ವಾರಾಣಸಿಯಲ್ಲೂ ಭಾರೀ ಮತಕಳವು: ಕಾಂಗ್ರೆಸ್‌ 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲೂ ಮತಕಳವು ನಡೆದಿದೆ. ಇಲ್ಲಿ 50 ಮತದಾರರು ಒಬ್ಬರೇ ವ್ಯಕ್ತಿಯ ಹೆಸರನ್ನು ತಮ್ಮ ತಂದೆ ಎಂದು ನಮೂದಿಸಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಆದರೆ ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್‌ ಆರೋಪಿಸಿರುವ ವಿಳಾಸದಲ್ಲಿರುವ ರಾಮ ಜಾನಕಿ ಮಠದ ಆಡಳಿತ ಮಂಡಳಿ, ಕಾಂಗ್ರೆಸ್‌ ಆರೋಪಿಸಿರುವ ಆ 50 ಮತದಾರರು ರಾಮ ಜಾನಕಿ ದೇಗುಲದಲ್ಲಿ ಸನ್ಯಾಸಿಗಳು. ಅವರೆಲ್ಲರೂ ತಮ್ಮ ಮಠದ ಗುರು ಆಚಾರ್ಯ ರಾಮಕಮಲ್ ದಾಸ್‌ ಅವರ ಹೆಸರನ್ನೇ ತಂದೆಯ ಕಾಲಂನಲ್ಲಿ ಉಲ್ಲೇಖಿಸಿದ್ದಾರೆ. ಮಠದಲ್ಲಿ ಗುರುವನ್ನು ತಂದೆಯೆಂದು ಸ್ವೀಕರಿಸುವ ಸಂಪ್ರದಾಯವಿದೆ. ಹೀಗಾಗಿ ಎಲ್ಲಾ ದಾಖಲೆಗಳಲ್ಲಿಯೂ ಗುರುವಿನ ಹೆಸರನ್ನೇ ತಂದೆ ಎಂದು ಬರೆಯಲಾಗಿದೆ’ ಎಂದಿದೆ.

ಬಿಹಾರ ವಿಶೇಷ ಮತಪಟ್ಟಿ ಪರಿಷ್ಕರಣೆಯ ಪ್ರಕ್ರಿಯೆ ಮತದಾರ ಸ್ನೇಹಿ: ಸುಪ್ರೀಂ

ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ ವೇಳೆ ತಮ್ಮ ನಾಗರಿಕತ್ವವನ್ನು ಸಾಬೀತುಪಡಿಸಲು ಸಾಕಷ್ಟು ಅವಕಾಶ ನೀಡಲಾಗಿಲ್ಲ ಎಂಬ ವಿಪಕ್ಷಗಳ ಆರೋಪದ ನಡುವೆಯೇ, ಆ ಪ್ರಕ್ರಿಯೆಯು ಮತದಾರ ಸ್ನೇಹಿಯಾಗಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

‘ಆಧಾರ್‌ ಸೇರಿದಂತೆ ಕೆಲ ದಾಖಲೆಗಳು ನಾಗರಿಕತ್ವದ ಪುರಾವೆಗಳಲ್ಲ ಎನ್ನಲಾಗುತ್ತಿದೆ. ಎಲ್ಲರ ಬಳಿ ಪಾಸ್‌ಪೋರ್ಟ್‌ ಇರುವುದಿಲ್ಲ’ ಎಂಬ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರ ವಾದವನ್ನಾಲಿಸಿದ ನ್ಯಾ। ಸೂರ್ಯಕಾಂತ್‌ ಮತ್ತು ಜೋಯ್‌ಮಾಲಾ ಬಾಗ್ಚಿ ಅವರ ಪೀಠ, ‘ಈ ಮೊದಲು ನಡೆಸಲಾಗಿದ್ದ ಸಮಗ್ರ ಪರಿಷ್ಕರಣೆಯಲ್ಲಿ ಕೇವಲ 7 ದಾಖಲೆಗಳ ಸಲ್ಲಿಕೆ ಸಾಧ್ಯವಿತ್ತು. ಆದರೆ ವಿಶೇಷ ಪರಿಷ್ಕರಣೆಗೆ 11 ದಾಖಲೆಗಳ ಪೈಕಿ ಒಂದನ್ನು ಸಲ್ಲಿಸಲು ಅವಕಾಶವಿದೆ. ಹೀಗಾಗಿ ಇದು ಮತದಾರಸ್ನೇಹಿ ಪ್ರಕ್ರಿಯೆಯಾಗಿದೆ’ ಎಂದು ಹೇಳಿದೆ.

ಜತೆಗೆ, ಯಾವಯಾವ ದಾಖಲೆಗಳನ್ನು ಪರಿಗಣಿಸಬೇಕು ಎಂಬುದನ್ನು ಸರ್ಕಾರದ ವಿವಿಧ ಇಲಾಖೆಗಳ ಅಭಿಪ್ರಾಯ ಪಡೆದೇ ನಿಗದಿಪಡಿಸಲಾಗಿರುತ್ತದೆ ಎಂದು ಪೀಠ ಹೇಳಿದೆ.