Asianet Suvarna News Asianet Suvarna News

ಬಿಜೆಪಿ ಹಿರಿಯರು ನಿದ್ರೆಗೆ ಜಾರಿದ್ದರೆ, ಹೊಸಬರಿಂದ ಹಗಲುಗನಸು: ರಾಜಶೇಖರ ಪಾಟೀಲ್‌

ಕೆಲ ಪಕ್ಷದವರು ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ ಎಂದು ಹೇಳಿಕೊಂಡು ಎಲ್ಲೆಡೆ ಪ್ರಚಾರ ಮಾಡುತ್ತಿದ್ದಾರೆ. ಆದರೆ ದೇಶದಲ್ಲಿ ಕಾಂಗ್ರೆಸ್‌ ಮುಕ್ತ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಲಿ: ರಾಜಶೇಖರ ಪಾಟೀಲ್‌ 

Congress MLA Rajashekhar Patil Slams BJP grg
Author
First Published Feb 1, 2023, 10:30 PM IST

ಹುಮನಾಬಾದ್‌(ಫೆ.01):  ಬಿಜೆಪಿ ಪಕ್ಷದ ಹಿರಿಯ ಮುಖಂಡರು ನಿದ್ದೆ ಮಾಡುತ್ತಿದ್ದರೆ, ಇತ್ತೀಚೆಗೆ ಪಕ್ಷಕ್ಕೆ ಬಂದವರು ಚುನಾವಣೆ ಕುರಿತು ಹಗಲುಗನಸು ಕಾಣುತ್ತಿದ್ದಾರೆ ಎಂದು ಶಾಸಕ ರಾಜಶೇಖರ ಪಾಟೀಲ್‌ ವ್ಯಂಗ್ಯವಾಡಿದರು. ಅವರು ಪಟ್ಟಣದ ಹೊರವಲಯದ ಶಕುಂತಲಾ ಪಾಟೀಲ್‌ ವಸತಿ ಶಾಲೆಯ ಆವರಣದಲ್ಲಿ ಸೋಮವಾರ ಸಂಜೆ ನಡೆದ ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮದ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಸುಭಾಷ ಕಲ್ಲೂರ ಬಿಎಸ್‌ಎಸ್‌ಕೆ ಅಧ್ಯಕ್ಷರಾಗಿ ಕಾರ್ಖಾನೆ ಮುಚ್ಚಿಸಿರುವದೇ ಬಿಜೆಪಿಯ ಸಾಧನೆ ಎಂದು ಲೇವಡಿ ಮಾಡಿದರು.

ಕ್ಷೇತ್ರ ಅಭಿವೃದ್ಧಿ ವಿಷಯದಲ್ಲಿ ಯಾರು ಬೇಕಾದರೂ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಅವರು, ಕೆಲ ಪಕ್ಷದವರು ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ ಎಂದು ಹೇಳಿಕೊಂಡು ಎಲ್ಲೆಡೆ ಪ್ರಚಾರ ಮಾಡುತ್ತಿದ್ದಾರೆ. ಆದರೆ ದೇಶದಲ್ಲಿ ಕಾಂಗ್ರೆಸ್‌ ಮುಕ್ತ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಲಿ. ಅದನ್ನು ಮುಂಬರುವ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ತೋರಿಸುತ್ತೇವೆ, ಕೆಲ ಪಕ್ಷದವರು ಬೆದರಿಕೆ ಹಾಕುತ್ತಿದ್ದು, ಕಾಂಗ್ರೆಸ್‌ ಕಾರ್ಯಕರ್ತರು ಯಾರಿಗೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

BIDAR: ಭಾಲ್ಕಿ ಕ್ಷೇತ್ರ ಅಭಿವೃದ್ಧಿಗೆ 24 ಕೋಟಿ: ಶಾಸಕ ಈಶ್ವರ ಖಂಡ್ರೆ

ಪ್ರಜಾಧ್ವನಿ ಯಾತ್ರೆ ಯಶಸ್ವಿಯಾಗುವ ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎನ್ನುವದನ್ನು ದೃಷ್ಟಿಯಲ್ಲಿಟ್ಟುಕೊಂಡು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪ್ರಜಾಧ್ವನಿ ಬಸ್‌ ಯಾತ್ರೆ ಮತ್ತು ಬೂತ್‌ ಮಟ್ಟದಲ್ಲಿ ಕಾಂಗ್ರೆಸ್‌ನ ಕಾರ್ಯಕ್ರಮಗಳ ಬಗ್ಗೆ ನಿರಂತರ ಸಭೆಗಳನ್ನು ನಡೆಸುವ ಮೂಲಕ, ಹಳ್ಳಿ ಹಳ್ಳಿಗಳಲ್ಲಿ ಜನರಿಗೆ ಮನವರಿಕೆ ಮಾಡಿಕೊಡುತ್ತದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಭೀಮರಾವ್‌ ಪಾಟೀಲ್‌, ಮಾಜಿ ಜಿಪಂ ಸದಸ್ಯ ವೀರಣ್ಣ ಪಾಟೀಲ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಫ್ಸರಮಿಯ್ಯಾ, ಟಿಎಪಿಸಿಎಂಎಸ್‌ ಅಧ್ಯಕ್ಷ ಅಭಿಷೇಕ್‌ ಪಾಟೀಲ್‌, ಕೆಎಂಎಫ್‌ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ ಪಾಟೀಲ್‌, ಉದ್ಯಮಿ ರುದ್ರಮ್‌ ಪಾಟೀಲ್‌, ಕೇಶವರಾವ್‌ ತಳಘಟಕರ್‌, ಪುರಸಭೆ ಅಧ್ಯಕ್ಷೆ ನೀತು ಶರ್ಮಾ, ಹಳ್ಳಿಖೇಡ (ಬಿ) ಪುರಸಭೆ ಅಧ್ಯಕ್ಷ ನಾಗರಾಜ ಹಿಬಾರೆ, ಓಂಕಾರ ತುಂಬಾ, ಮಲ್ಲಿಕಾರ್ಜುನ ಮಹೇಂದ್ರಕರ್‌, ರಾಜಶೇಖರ ಪಾಟೀಲ್‌ ಮದರಗಾಂವ್‌, ಉಮೇಶ ಜಂಬಗಿ, ರಮೇಶ ಡಾಕುಳಗಿ, ಪ್ರಭು ತಾಳಮಡಗಿ ಸೇರಿದಂತೆ ಮತ್ತಿತರರು ಇದ್ದರು.

Follow Us:
Download App:
  • android
  • ios