Asianet Suvarna News Asianet Suvarna News

ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಿಲ್ಲ, ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ: ಲಕ್ಷ್ಮಣ ಸವದಿ

ಇಡೀ ರಾಜ್ಯದ ಜನರು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ. ಸ್ವಂತ ಬಲದಿಂದ ಸರ್ಕಾರ ರಚನೆಯಾಗುತ್ತಿದೆ. ಮುಂದಿನ ಐದು ವರ್ಷಗಳ ಕಾಲ ಉತ್ತಮ ಕೆಲಸ ಮಾಡಬೇಕೆಂಬ ಹಂಬಲವಿದ್ದು, ಜನರ ಪ್ರೀತಿ ಗಳಿಸುವ ಮೂಲಕ ಅವರ ನಂಬಿಕೆಯನ್ನು ಅಚಲವಾಗಿ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ: ಲಕ್ಷ್ಮಣ ಸವದಿ 

Congress MLA Laxman Savadi Talks Over CM Post in Karnataka grg
Author
First Published May 16, 2023, 10:25 AM IST

ಬೆಳಗಾವಿ(ಮೇ.16): ರಾಷ್ಟ್ರೀಯ ಪಕ್ಷದಲ್ಲಿ ಹೈಕಮಾಂಡ್‌ ಮತ ಸಂಗ್ರಹಿಸಿ ಬಳಿಕ ಶಾಸಕಾಂಗ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ. ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಒಬ್ಬಿಬ್ಬರ ಅಭಿಪ್ರಾಯವಲ್ಲ, 136 ಜನ ಶಾಸಕರ ಅಭಿಪ್ರಾಯವೂ ಸೇರಲಿದೆ. ವರದಿ ಬಂದ ನಂತರ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಾರು ಆಗುತ್ತಾರೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ ಹೀಗೆ ಹೇಳಿದರು.

ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿದ ಅವರು, ಶಾಸಕರಾದ ನಂತರ ಸಚಿವರಾಗಬೇಕು, ಡಿಸಿಎಂ ಆಗಬೇಕು, ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಿಲ್ಲ. ಆದರೆ, ಪಕ್ಷದ ಹೈಕಮಾಂಡ್‌ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಉತ್ತರಿಸಿದರು.

KARNATAKA ELECTION RESULTS 2023: ಬೆಳಗಾವಿಯಲ್ಲಿ ಬಿಜೆಪಿ ಯಡವಟ್ಟು, ಮಾಮನಿ ಕುಟುಂಬ ಸೋತಿದ್ದೇಗೆ?

ಕಾಂಗ್ರೆಸ್‌ ಮೇಲೆ ಜನರ ಪ್ರೀತಿ:

ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 136 ಸ್ಥಾನಗಳಲ್ಲಿ ಗೆಲವು ಸಾಧಿಸುವ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದೆ. ಆದ್ದರಿಂದ ಅವರ ನಂಬಿಕೆ ಉಳಿಸುವ ಕೆಲಸ ಮಾಡಲಿದೆ. 136 ಸ್ಥಾನಗಳ ಮೂಲಕ ಬಹುಮತ ಪಡೆದಿದೆ. ಬಿಜೆಪಿಯ ಭದ್ರಕೋಟೆ ಆಗಿರುವ ಬೆಳಗಾವಿಯಲ್ಲಿ ಈಗ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ ಎಂದು ಸವದಿ ಹೇಳಿದರು.

ಇಡೀ ರಾಜ್ಯದ ಜನರು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ. ಸ್ವಂತ ಬಲದಿಂದ ಸರ್ಕಾರ ರಚನೆಯಾಗುತ್ತಿದೆ. ಮುಂದಿನ ಐದು ವರ್ಷಗಳ ಕಾಲ ಉತ್ತಮ ಕೆಲಸ ಮಾಡಬೇಕೆಂಬ ಹಂಬಲವಿದ್ದು, ಜನರ ಪ್ರೀತಿ ಗಳಿಸುವ ಮೂಲಕ ಅವರ ನಂಬಿಕೆಯನ್ನು ಅಚಲವಾಗಿ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಎಲ್ಲ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿದ್ದಾರೆ. ಸರ್ಕಾರ ರಚನೆಯಲ್ಲಿ ಎಲ್ಲರಿಗೂ ಪಾಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಮೊದಲಿಗಿಂತ ಹೆಚ್ಚು ಜನ ಆಶೀರ್ವಾದ ಮಾಡಿದ್ದಾರೆ. ಕುಡಚಿ ಮತ್ತು ಕಾಗವಾಡದಲ್ಲಿ ಕಾಂಗ್ರೆಸ್‌ ಗೆಲುವು ಜನರ ಗೆಲುವಾಗಿದೆ. ಜನರೇ ಆಶೀರ್ವಾದ ಮಾಡುವ ಮೂಲಕ ಇಬ್ಬರನ್ನೂ ಗೆಲ್ಲಿಸುವ ಕೆಲಸ ಮಾಡಿದ್ದಾರೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗುವುದು ನನ್ನ ಹವ್ಯಾಸ ಎಂದ ಸವದಿ, ಹುಬ್ಬಳ್ಳಿಯಲ್ಲಿ ಜಗದೀಶ್‌ ಶೆಟ್ಟರ ಸೋಲು ಬಿಜೆಪಿಯ ಸಂಘಟಿತ ಕಾರ್ಯದ ಫಲವೇ ಇರಬಹುದು. ಆದರೆ, ಅಲ್ಲಿ ಅವರ ಪ್ರಭಾವವೂ ಇತ್ತು. ಅಲ್ಲಿ ಹಣದ ಹರಿವಿನ ಮೇಲೆ ನಾವು ಜಯ ಕಳೆದುಕೊಂಡಿದ್ದೇವೆ. ಹಿರಿಯ ರಾಜಕಾರಣಿಗಳು ಚುನಾಯಿತರಾಗಬೇಕೆಂದು ಪಕ್ಷ ಬಯಸಿತ್ತು ಎಂದರು.

ಕಬ್ಬು ಕಡಿಯುವ ಯಂತ್ರ ತಂದು ಪೂಜೆ ಮಾಡಿದ್ದೇನೆ:

ಲಕ್ಷ್ಮಣ ಸವದಿ ಅವರಿಗೆ ಕಬ್ಬು ಕಡಿಯುವುದನ್ನು ಕಲಿಸಬೇಕು ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸವದಿ, ಆಧುನಿಕ ಯುಗದಲ್ಲಿ ಕಬ್ಬು ಕಡಿಯುವವರು ಕಡಿಮೆ. ಎಲ್ಲ ರೈತರೂ ಈಗ ಯಾಂತ್ರೀಕೃತಗೊಂಡಿದ್ದಾರೆ. ನಿನ್ನೆ ಸನ್ಮಾನ ಸಮಾರಂಭದಲ್ಲಿ ಕಬ್ಬು ಕಡಿಯುವ ಯಂತ್ರ ತಂದು ಪೂಜೆ ಮಾಡಿದ್ದು, ಅದರ ಬಗ್ಗೆ ಚರ್ಚೆ ಬೇಡ ಎನ್ನುವ ಮೂಲಕ ರಮೇಶ್‌ ಜಾರಕಿಹೊಳಿ ಅವರಿಗೆ ಟಾಂಗ್‌ ಕೊಟ್ಟರು.

ಸತೀಶ ಜಾರಕಿಹೊಳಿ ನಾಯಕತ್ವದಲ್ಲಿ ಅಭೂತಪೂರ್ವ ಗೆಲುವು: ಹೆಬ್ಬಾಳ್ಕರ್‌

ಬೆಳಗಾವಿ ಜಿಲ್ಲೆಯ ಎಲ್ಲ ನಾಯಕರ ಹಾಗೂ ಸತೀಶ್‌ ಜಾರಕಿಹೊಳಿ ನಾಯಕತ್ವದಲ್ಲಿ ಜಿಲ್ಲೆಯ 12 ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಭಾಷೆ ಕೊಟ್ಟಿದ್ದಿವಿ. ಆದರೆ 11 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದೇವೆ. ಬೆಳಗಾವಿ ಜಿಲ್ಲಾ ರಾಜಕಾರಣದ ಇತಿಹಾಸದಲ್ಲಿ ಇಷ್ಟೊಂದು ಸೀಟ್‌ ಬಂದಿರಲಿಲ್ಲ. ಇದೊಂದು ಅಭೂತಪೂರ್ವವಾದ ಜಯ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿಜೇತ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

Belagavi Election Result 2023: ಆಪ್ತರ ಸೋಲಿನ ಬಳಿಕ ರಮೇಶ ಜಾರಕಿಹೊಳಿ ಏಕಾಂಗಿ..!

ನಗರದಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಹೈಕಮಾಂಡ್‌ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರಿಗೆ ಭಾಷೆ ಕೊಟ್ಟಂತೆ ಜಿಲ್ಲೆಯಲ್ಲಿ 11 ಸೀಟ್‌ ಗೆಲ್ಲುವ ಮೂಲಕ ಬಹಳ ಧೈರ್ಯದಿಂದ ಸಿಎಲ್‌ಪಿ ಸಭೆಯಲ್ಲಿ ಭಾಗವಹಿಸಲು ಹಾಗೂ ಧೈರ್ಯ ಇಟ್ಟು ಮಾತನಾಡಲು ಹೋಗುತ್ತಿದ್ದೇವೆ ಎಂದರು.

ಕಾಂಗ್ರೆಸ್‌ ಪಕ್ಷದ ಒಗ್ಗಟ್ಟು, ಜಿಲ್ಲೆಯ ನೇತೃತ್ವ ಗೆಲುವಿಗೆ ಪ್ರಮುಖ ಕಾರಣ. ಇನ್ನು ಜಿಲ್ಲೆಗೆ ಎಷ್ಟು ಸಚಿವ ಸ್ಥಾನ ಸಿಗಬಹುದು? ಎಂಬ ಮಾಧ್ಯಮದವರ ಪ್ರಶ್ನಗೆ ಹೈಕಮಾಂಡ್‌ ನೀಡಿದ ಜವಾಬ್ದಾರಿಯನ್ನು ನಿರ್ವಹಿಸುವೆ. ಮೊದಲು ರಾಜ್ಯದ ಜನರಿಗೆ ಕೊಟ್ಟ ಐದು ಭರವಸೆ ಈಡೇರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅದರ ಹೊರತಾಗಿ ಅಧಿಕಾರದ ಆಸೆ ಇಲ್ಲ ಎಂದು ಪ್ರತಿಕ್ರಿಯಿಸಿದರು.

Follow Us:
Download App:
  • android
  • ios