Asianet Suvarna News Asianet Suvarna News

ಕೋಲಾರದಲ್ಲಿ ಕೈ-ಕೈ ಮಿಲಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು: ಪತ್ರಕರ್ತರ ಮೇಲೆ ರಮೇಶ್ ಕುಮಾರ್ ಹಲ್ಲೆ

ಪರ ವಿರೋಧದ ನಡುವೆಯೇ ಕಾಂಗ್ರೆಸ್‌ನಿಂದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಕೋಲಾರದಲ್ಲಿ ಕಾರ್ಯಕ್ರಮದ ಪೂರ್ವಭಾಗಿ ತಯಾರಿಗಾಗಿ ಕರೆದಿದ್ದ ಸಭೆಯಲ್ಲೂ ಎರಡು ಗುಂಪುಗಳ ನಡುವೆ ಮಾರಾಮರಿ ನಡೆದರೆ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಸಭೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಘಟನೆ ಕೂಡಾ ನಡೆಯಿತು. 

Congress members fight in Kolar Congress Bhavan Former Speaker KR Ramesh Kumar attack journalists gvd
Author
Bangalore, First Published Jul 29, 2022, 10:56 PM IST

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಜು.29): ಪರ ವಿರೋಧದ ನಡುವೆಯೇ ಕಾಂಗ್ರೆಸ್‌ನಿಂದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಕೋಲಾರದಲ್ಲಿ ಕಾರ್ಯಕ್ರಮದ ಪೂರ್ವಭಾಗಿ ತಯಾರಿಗಾಗಿ ಕರೆದಿದ್ದ ಸಭೆಯಲ್ಲೂ ಎರಡು ಗುಂಪುಗಳ ನಡುವೆ ಮಾರಾಮರಿ ನಡೆದರೆ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಸಭೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಘಟನೆ ಕೂಡಾ ನಡೆಯಿತು. 

ಮುಖಂಡರ ನಡುವೆಯೇ ಕಾರ್ಯಕರ್ತರ ನಡುವೆ ಮಾತಿಗೆ ಮಾತು, ಹೇಯ್​ ಓಯ್​ ಎಂದು ಕೂಗಾಟ ಬೈದಾಟ, ಆಕ್ರೋಶಗೊಂಡ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಹರಸಾಹಸ ಪಡುತ್ತಿರುವ ನಾಯಕರು, ಅಲ್ಲಿ ಗಲಾಟೆಯನ್ನು ಮೊಬೈಲ್​ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮದವರ ಮೇಲೆ ಹಲ್ಲೆ ಮಾಡುತ್ತಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್​ ಇಂಥಾದೊಂದು ದೃಶ್ಯಗಳು ನಮಗೆ ಕಂಡು ಬಂದಿದ್ದು, ಕೋಲಾರ ಜಿಲ್ಲಾ ಕಾಂಗ್ರೆಸ್​ ಕಛೇರಿಯಲ್ಲಿ. 

ಜೆಡಿಎಸ್ ಪಕ್ಷದ ಹೆಸರಿನಲ್ಲಿ ಕಟಿಂಗ್ ಶಾಪ್ ಓಪನ್: ಅಭಿಮಾನಿಯಿಂದ ವಿನೂತನ ಕಾರ್ಯಕ್ರಮ

ಹೌದು! ಇವತ್ತು ಕೋಲಾರ ಜಿಲ್ಲಾ ಕಾಂಗ್ರೆಸ್​ ಉಸ್ತುವಾರಿ ನಾರಾಯಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್​ 3ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯನವರ 75ನೇ ಜನ್ಮದಿನಾಚರಣೆ ಹಾಗೂ 75ನೇ ಸ್ವತಂತ್ರ್ಯೋತ್ಸವ ಕಾರ್ಯಕ್ರಮದ ಕುರಿತು ಚರ್ಚೆ ನಡೆಸಲು ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು, ಈ ಸಭೆಯಲ್ಲೂ ಕೂಡಾ ಕೋಲಾರ ಜಿಲ್ಲಾ ಕಾಂಗ್ರೆಸ್​ನಲ್ಲಿನ ಗುಂಪುಗಾರಿಕೆ ಭುಗಿಲೆದ್ದಿತ್ತು. ಮಾಜಿ ಸ್ಪೀಕರ್​ ರಮೇಶ್ ಕುಮಾರ್ ಹಾಗೂ ಕೆ.ಹೆಚ್​.ಮುನಿಯಪ್ಪ ಬಣದ ಕಾರ್ಯಕರ್ತರ ನಡುವೆ ಆರಂಭದಲ್ಲಿ ಕುರ್ಚಿ ವಿಚಾರವಾಗಿ ಗಲಾಟೆ ಶುರುವಾಯ್ತು. 

ನಂತರ ಸಭೆಯಲ್ಲಿ ಹಾಕಲಾಗಿದ್ದ ಬ್ಯಾನರ್​ನಲ್ಲಿ ಪೋಟೋ ಇಲ್ಲಾ ಅನ್ನೋ ಕಾರಣಕ್ಕೆ ಸಭೆಯಲ್ಲಿ ಉಪಸ್ಥಿತರಿದ್ದ ರಮೇಶ್​ ಕುಮಾರ್​ ಸೇರಿದಂತೆ ಕೋಲಾರ ಉಸ್ತುವಾರಿ ನಾರಾಯಣಸ್ವಾಮಿ ಸೇರಿ ಹಲವು ಶಾಸಕರ ಎದುರಲ್ಲೇ ಎರಡೂ ಬಣದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಶುರುವಾಯ್ತು. ನೋಡ ನೋಡುತ್ತಿದ್ದಂತೆ ಸಭೆಯಲ್ಲಿ ಗದ್ದಲ, ಗೊಂದಲ, ತಳ್ಳಾಟ ನೂಕಾಟ ಜೊತೆಗೆ ಸಭೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ವೇಳೆ ಕಾರ್ಯಕರ್ತರನ್ನು ಮಾಧಾನ ಪಡಿಸುವಲ್ಲಿ ವೇದಿಕೆ ಮೇಲಿದ್ದ ನಾಯಕರುಗಳು ಸುಸ್ತಾಗಿ ಹೋದರು. 

ನಂತರ ರಮೇಶ್​ ಕುಮಾರ್​ ಹಾಗೂ ಕೋಲಾರ ಉಸ್ತುವಾರಿ ನಾರಾಯಣಸ್ವಾಮಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಏನೇ ಭಿನ್ನಾಭಿಪ್ರಾಯ ಇದ್ದರು ಪಕ್ಷದಲ್ಲಿ ಸಂಬಂಧಪಟ್ಟವರಿಗೆ ದೂರು ನೀಡಿ ಎಂದರು, ಅಲ್ಲದೆ ಪಕ್ಷದಲ್ಲಿ ಶಿಸ್ತು ಉಲ್ಲಂಘಿಸುವವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವುದಾಗಿ ನಾರಾಯಣಸ್ವಾಮಿ ಹೇಳಿದರು. ಇನ್ನು ಸಭೆ ಆರಂಭದಿಂದಲೂ ಕೂಡಾ ರಮೇಶ್ ಕುಮಾರ್​ ಹಾಗೂ ಕೆ.ಹೆಚ್.ಮುನಿಯಪ್ಪ ಗುಂಪುಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇತ್ತು, ಸಭೆ ಆರಂಭದಿಂದಲೂ ಬೂದಿ ಮುಚ್ಚಿದ ಕೆಂಡದಂತಿತ್ತು.

ಆದರೆ ಕುರ್ಚಿ ವಿಚಾರವಾಗಿ ಶುರುವಾದ ಗಲಾಟೆ ಸಭೆಯಲ್ಲಿ ಹೊತ್ತಿ ಉರಿಯಲು ಆರಂಭವಾಯಿತು. ಈ ವೇಳೆ ವೇದಿಕೆ ಮೇಲಿದ್ದ ರಮೇಶ್​ ಕುಮಾರ್​ ಆದಿಯಾಗಿ ನಾಯಕರುಗಳು ಪರಿಸ್ಥಿತಿಯನ್ನು ನಿಯಂತ್ರಣ ಮಾಡಲಾಗದೆ ಹೋದರು. ಈ ವೇಳೆ ಸಭೆಯಲ್ಲಿ ನಡೆಯುತ್ತಿದ್ದ ಗಲಾಟೆಯ ಚಿತ್ರೀಕರಣ ಮಾಡುತ್ತಿದ್ದ ಪತ್ರಕರ್ತರ ಮೇಲೆ ಮಾಜಿ ಸ್ಪೀಕರ್​ ರಮೇಶ್ ಕುಮಾರ್​ ಏಕಾಏಕಿ ಎದ್ದು ನಿಂತು ಹಲ್ಲೆ ಮಾಡಿ, ವೇದಿಕೆ ಮೇಲಿಂದ ಪತ್ರಕರ್ತರನ್ನು ತಳ್ಳಿದರು. 

ಈ ವೇಳೆ ರಮೇಶ್​ ಕುಮಾರ್ ಪತ್ರಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಪತ್ರಕರ್ತರ ಮೇಲೆ ಹರಿಹಾಯ್ದರು. ಅಲ್ಲಿದ್ದ ಪತ್ರಕರ್ತರೆಲ್ಲಾ ಸಭೆಯಿಂದ ಹೊರ ನಡೆದರು. ಈ ವೇಳೆ ಪತ್ರಕರ್ತರ ಸಂಘದ ಅಧ್ಯಕ್ಷರು ಸೇರಿ ಪತ್ರಕರ್ತರು ಮಾಜಿ ಸ್ಪೀಕರ್​ ಹಾಗೂ ಪ್ರಬುದ್ದ ರಾಜಕಾರಣಿ ಎನಿಸಿಕೊಂಡಿದ್ದ ರಮೇಶ್​ ಕುಮಾರ್​ ಪರ್ತಕರ್ತರ ಮೇಲಿನ ಹಲ್ಲೆಗೆ ಖಂಡನೆ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದರು. 

‘ಡಿಸಿಸಿ’ ಸಾಲ ವಿತರಣೆ ವೇಳೆ ಕಾಂಗ್ರೆಸ್‌ ಶಾಸಕರನ್ನು ದೂರವಿಡಿ: ಬಿಜೆಪಿ ನಾಯಕರು

ಈ ವೇಳೆ ಸ್ಥಳಕ್ಕೆ ಬಂದ ಎಂಎಲ್​ಸಿ ಅನಿಲ್​ ಕುಮಾರ್, ಶಾಸಕ ನಂಜೇಗೌಡ ಹಾಗೂ ಕೋಲಾರ ಉಸ್ತುವಾರಿ ನಾರಾಯಣಸ್ವಾಮಿ ಪತ್ರಕರ್ತರ ಕ್ಷಮೆ ಕೇಳಿ ಪತ್ರಕರ್ತರನ್ನು ಸಮಾಧಾನ ಪಡಿಸಿದರು. ಒಟ್ಟಾರೆ ಕೋಲಾರ ಜಿಲ್ಲಾ ಕಾಂಗ್ರೆಸ್​ನಲ್ಲಿ ಎರಡು ಗುಂಪುಗಳ ನಡುವಿನ ವಿವಾದ ದಿನದಿಂದ ದಿನಕ್ಕೆ ಅತಿರೇಕಕ್ಕೆ ಹೋಗುತ್ತಿದೆ. ಬೀದಿ ಬೀದಿಯಲ್ಲಿ ಎರಡೂ ಗುಂಪಿನ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯ ಭುಗಿಲೇಳುತ್ತಿದೆ. ಕಾಂಗ್ರೆಸ್ ಹೈಕಮಾಂಡ್​ ಕೂಡಲೇ ಕೋಲಾರ ಜಿಲ್ಲಾ ಕಾಂಗ್ರೆಸ್​ನ ಗುಂಪುಗಾರಿಕೆಗೆ ಶಮನ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ಬಾರಿ ನಷ್ಟ ಅನುಭವಿಸೋದರಲ್ಲಿ ಅನುಮಾನವಿಲ್ಲ.

Follow Us:
Download App:
  • android
  • ios