* ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ * ಕಾಂಗ್ರೆಸ್ ನಾಯಕರ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ* ಕಾಂಗ್ರೆಸ್ ಪಾದಯಾತ್ರೆ ಮಾಡಿದ್ರೆ ಕುಮಾರಸ್ವಾಮಿಗೆ ಏಕೆ ಉರಿ ಎಂದ ಸಿದ್ದರಾಮಯ್ಯ

ಬೆಂಗಳೂರು, (ಡಿ.29):  ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಕೈಗೊಂಡಿರುವ ವಿಚಾರವಾಗಿ ಕುಮಾರಸ್ವಾಮಿ ಆಕ್ರೋಶಗೊಂಡಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಬಗ್ಗೆ ಟೀಕಿಸಿ ನಮ್ಮ ಯಾತ್ರೆಯನ್ನ ಹೈಜಾಕ್ ಮಾಡಿದ್ದಾರೆ ಎಂದು ಆರೋಪಿಸಿದ್ಧ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

Mekedatu Padayatre ಡಿಕೆಶಿ ಆಯ್ತು ಈಗ ಸಿದ್ದರಾಮಯ್ಯನತ್ತ ಬಾಣ ತಿರುಗಿಸಿದ ಕುಮಾರಸ್ವಾಮಿ

ಇಂದು(ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಹೈಜಾಕ್ ಮಾಡುವುದಕ್ಕೆ ಸರ್ಕಾರಿ ಕಾರ್ಯಕ್ರಮನಾ ನಮ್ಮ ಸರ್ಕಾರದ ಅವಧಿಯಲ್ಲಿ ಯೋಜನೆ ಸಂಬಂಧ ಡಿಪಿಆರ್ ಮಾಡಿದ್ದೇವು. ಅದನ್ನು ಜಾರಿ ಮಾಡುವಂತೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿದ್ದೇವೆ. ನಾವ್ಯಾಕೆ ಜೆಡಿಎಸ್ ಕಾರ್ಯಕ್ರಮ ಹೈಜಾಕ್ ಮಾಡೋಣ ಎಂದು ಎಂದರು.

ಹೈಜಾಕ್ ಮಾಡೋದಕ್ಕೆ ಮೇಕೆದಾಟು ಯೋಜನೆಯನ್ನು ಎಚ್.ಡಿ.ಕುಮಾರಸ್ವಾಮಿ ಮಾಡಿದ್ದಾರಾ. ಈ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಏಕೆ ಹೊಟ್ಟೆಯುರಿ? ಪಾದಯಾತ್ರೆ ಹೈಜಾಕ್ ಅಂದರೆ ಏನರ್ಥ? ಹೈಜಾಕ್ ಮಾಡಲು ಅದೇನು ಸರ್ಕಾರಿ ಕಾರ್ಯಕ್ರಮವಾಗಿದೆಯಾ? ಎಂದು ಪ್ರಶ್ನಿಸಿದರು.

ಹಾಗೆಯೇ ಪಾದಯಾತ್ರೆ ಹಗಲಿನಲ್ಲಿ ನಡೆಯುತ್ತೆ ರಾತ್ರಿ ಇರುವುದಿಲ್ಲ. ಹೀಗಾಗಿ ನೈಟ್ ಕರ್ಫ್ಯೂನಿಂದ ನಮ್ಮ ಪಾದಯಾತ್ರೆಗೆ ತೊಂದರೆ ಇಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದರು.

ಕುಮಾರಸ್ವಾಮಿ ಹೇಳಿದ್ದೇನು?
ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಸರಕಾರವು ಡಿಪಿಆರ್​ಗೆ ಒಪ್ಪಿಗೆ ನೀಡಬೇಕು ಎಂದು ಒತ್ತಾಯ ಮಾಡಲು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ನನ್ನನ್ನು ಉದ್ದೇಶಿಸಿ ಹೇಳಿದ್ದಾರೆ.ಆದರೆ, ಕೇಂದ್ರ ಜಲ ಆಯೋಗದಲ್ಲಿ ಈ ಡಿಪಿಆರ್ ಏಕೆ ಕೊಳೆಯುತ್ತಿದೆ ಎನ್ನುವುದಕ್ಕೆ ಕಾರಣವನ್ನು ಅವರೇಕೆ ಹೇಳುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಪಾದಯಾತ್ರೆ ಮಾಡಿದರೆ ಡಿಪಿಆರ್​ಗೆ ಜಲ ಆಯೋಗ ಒಪ್ಪಿಗೆ ನೀಡುತ್ತಾ? ಈ ಬಗ್ಗೆ ಕೇಂದ್ರ ಸರಕಾರ ಏನು ಹೇಳಿದೆ ಎಂಬ ಅರಿವು ಪ್ರತಿಪಕ್ಷ ನಾಯಕರಿಗೆ ಇದೆಯಾ? ತಮಿಳುನಾಡು ಒಪ್ಪಿಗೆ ಪಡೆಯಿರಿ ಎಂದು ಸ್ವತಃ ಕೇಂದ್ರ ಸರಕಾರವೇ ರಾಜ್ಯಕ್ಕೆ ಸ್ಪಷ್ಟವಾಗಿ ಹೇಳಿದೆ. ಹಾಗಾದರೆ, ಪಾದಯಾತ್ರೆಯಿಂದ ಡಿಪಿಆರ್​ಗೆ ಒಪ್ಪಿಗೆ ಹೇಗೆ ಸಿಗುತ್ತದೆ?.

ಪಾದಯಾತ್ರೆ ಮಾಡುವುದು ಬಿಟ್ಟು ಕೇಂದ್ರದ ಮೇಲೆ ಒತ್ತಡ ಹೇರಿ ತಮಿಳುನಾಡು ರಾಜ್ಯದ ಮನವೊಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಸರಕಾರಕ್ಕೆ ಹೇಳಿ. ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯುವಂತೆ ಒತ್ತಾಯ ಮಾಡಿ. ಜತೆಯಲ್ಲಿ ನಾವೂ ಬರುತ್ತೇವೆ. ಐದು ವರ್ಷ ಸಿಎಂ ಆಗಿದ್ದರು. ಹಣಕಾಸು ಮಂತ್ರಿಯೂ ಆಗಿದ್ದರು. ಈಗ ಪ್ರತಿಪಕ್ಷ ನಾಯಕರು ಆಗಿದ್ದಾರೆ. ಆದರೆ, ಡಿಪಿಆರ್​ಗೆ ಜಲ ಆಯೋಗ ಒಪ್ಪಿಗೆ ಕೊಡುವ ಮಾನದಂಡ ಏನು ಎನ್ನುವ ತಿಳಿವಳಿಕೆ ಅವರಿಗೆ ಇಲ್ಲವೆ? ತಾಂತ್ರಿಕ, ಕಾನೂನಾತ್ಮಕ ಅಂಶಗಳಿಂದ ನೆನೆಗುದಿಗೆ ಬಿದ್ದ ಡಿಪಿಆರ್​ಗೆ ಪಾದಯಾತ್ರೆಯಿಂದ ಮೋಕ್ಷ ಸಿಗುತ್ತಾ? ಎಂದು ಕುಮಾರಸ್ವಾಮಿ ಹೇಳಿದ್ದರು.

ಮೈತ್ರಿ ಸರಕಾರದಲ್ಲಿ ನಾನು ಸಿಎಂ ಆಗಿದ್ದಾಗ ಮೇಕೆದಾಟು ಡಿಪಿಆರ್ ಸಿದ್ದಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಯಿತು. ಕೂಡಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ತಮಿಳುನಾಡು ತಡೆಯಾಜ್ಞೆ ನೀಡುವಂತೆ ಮನವಿ ಮಾಡಿತ್ತು. ಆಗ ಕೇಂದ್ರ ಸರಕಾರವು ತಮಿಳುನಾಡಿನ ಒತ್ತಾಯಕ್ಕೆ ಮಣಿದು, ನೆರೆ ರಾಜ್ಯದ ಸಹಮತ ಪಡೆಯುವಂತೆ ನಮ್ಮ ರಾಜ್ಯಕ್ಕೆ ಸೂಚಿಸಿತ್ತು.

ಈ ಅಡೆತಡೆಗಳನ್ನು ನಿವಾರಿಸಲು ಹಲವು ಬಾರಿ ಪ್ರಧಾನಿಗಳನ್ನು, ಅಂದಿನ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಖುದ್ದು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಆದರೆ, ದಿಲ್ಲಿಯಲ್ಲಿ ಕೊಳೆಬಿದ್ದಿರುವ ಡಿಪಿಆರ್ ಗೆ ಒಪ್ಪಿಗೆ ಪಡೆಯಲು ಕಾಂಗ್ರೆಸ್ ಏನು ಮಾಡಿದೆ? ಎಲ್ಲಿ ಹೋರಾಟ ಎನ್ನುವುದನ್ನು ಪ್ರತಿಪಕ್ಷ ನಾಯಕರು ಜನರಿಗೆ ಹೇಳಬೇಕು ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.