ವಿಧಾನಸೌಧದಲ್ಲಿ ದೋಸ್ತಿ, ಕ್ಷೇತ್ರಗಳಲ್ಲಿ ಕುಸ್ತಿ: ಸಿದ್ದರಾಮಯ್ಯ ಮಾಡ್ತಾರಾ ಶಾಸ್ತಿ?
ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್ ನ ಅಭಿಪ್ರಾಯಗಳಿಗೆ ಸರ್ಕಾರದಲ್ಲಿ ಮನ್ನಣೆಯಿಲ್ಲ ಅನ್ನೋ ಆಕ್ರೋಶ ಭುಗಿಲೆದ್ದಿದೆ. ಈ ವಿಚಾರವಾಗಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿರುವ ಕೆಲ ಕಾಂಗ್ರೆಸ್ ನಾಯಕರು ಜೆಡಿಎಸ್ ವಿರುದ್ಧ ದೂರು ನೀಡಿದ್ದಾರೆ.
ಬೆಂಗಳುರು, [ನ.29]: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್ ನಾಯಕರಿಗೆ ನೆಮ್ಮದಿಯಿಲ್ಲ. ಕಾಂಗ್ರೆಸ್ ನ ಅಭಿಪ್ರಾಯಗಳಿಗೆ ಸರ್ಕಾರದಲ್ಲಿ ಮನ್ನಣೆಯಿಲ್ಲ ಎನ್ನುವ ಕೆಲ ನಾಯಕರ ಆಕ್ರೋಶದ ಕಟ್ಟೆ ಹೊಡೆದಿದೆ.
ಇತ್ತೀಚೆಗಷ್ಟೇ ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ಕೆಲಸವಾಗ್ತಿಲ್ಲ ಎಂದು ಮುನಿಸಿಕೊಂಡಿದ್ದ ಕಾಂಗ್ರೆಸ್ ಶಾಸಕರು ಹಾಗೂ ಮಾಜಿ ಶಾಸಕರು, ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಭೇಟಿ ಮಾಡಿ ಕಾಂಗ್ರೆಸ್ ನ್ನು ಮಲತಾಯಿ ಮಕ್ಕಳಂತೆ ನೋಡ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದರು.
ಮೈತ್ರಿಯಲ್ಲಿ ಮತ್ತೆ ಅಸಮಧಾನ ಸ್ಫೋಟ: ಸಿದ್ದರಾಮಯ್ಯ ಮೊರೆ ಹೋದ ಕೈ ಲೀಡರ್ಸ್
ಇದೀಗ ಹಾಸನ ಜಿಲ್ಲೆಯಲ್ಲಿ ಅದೇ ಪರಿಸ್ಥಿರಿ ನಿರ್ಮಾಣವಾಗಿದೆ. ಇದ್ರಿಂದ ದೋಸ್ತಿ ಸರ್ಕಾರಕ್ಕೂ, ಕಾಂಗ್ರೆಸ್ಗೂ ಬಿಗ್ ಬಾಸ್ ಆಗಿರುವ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನ ಇಂದು [ಗುರುವಾರ] ಕಾಂಗ್ರೆಸ್ ಮುಖಂಡರು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರು.
ಹಾಸನ ಜಿಲ್ಲೆಯಲ್ಲಿ ಸಚಿವ ರೇವಣ್ಣ ಆಟೋಟೋಪ ಹೆಚ್ಚಾಗಿದೆ. ಜೆಡಿಎಸ್ ಮುಖಂಡರಿಂದ ಹಾಗೂ ಸಚಿವ ರೇವಣ್ಣರಿಂದ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಜೆಡಿಎಸ್ ಕಾಂಗ್ರೆಸ್ಸಿಗರ ಮೇಲೆ ದಬ್ಬಾಳಿಕೆ ನಡೀತಿದೆ ಎಂದು ರೇವಣ್ಣ ದೂರು ನೀಡಿದ್ದಾರೆ.
ಇದನೆಲ್ಲ ಅರಿತಿರುವ ಕಾಂಗ್ರೆಸ್ ಟ್ರಬಲ್ ಶೂಟರ್ ಸಿದ್ದರಾಮಯ್ಯ ಅವರು ಇದೇ ಡಿಸೆಂಬರ್ 8ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದ್ದಾರೆ. ಈ ಸಭೆಗೆ ಸಿಎಂ ಕುಮಾರಸ್ವಾಮಿ ಅವರಿಗೂ ಆಹ್ವಾನ ನೀಡಿದ್ದು, ಕಾಂಗ್ರೆಸ್ ಶಾಸಕರ ಸಮಸ್ಯೆಗಳನ್ನ ಸಿಎಂ ಸಮ್ಮುಖದಲ್ಲಿಯೇ ಬಗೆಹರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಒಟ್ವಿಟಿನಲ್ಲಿ ವಿಧಾನಸೌಧದಲ್ಲಿ ದೋಸ್ತಿ, ಕ್ಷೇತ್ರಗಳಲ್ಲಿ ಕುಸ್ತಿಗೆ ಮುಂದಿನ ದಿನಗಳಲ್ಲಿ ಪರಿಹಾರ ಕಾಣದಿದ್ದರೆ ಸರ್ಕಾರದ ಅಸ್ತಿತ್ವದ ಮೇಲೆ ಪರಿಣಾಮ ಬೀರೋದಂತೂ ಗ್ಯಾರಂಟಿ.