ಸಿದ್ದರಾಮಯ್ಯಗೆ ಅನಾರೋಗ್ಯ, ವೈದ್ಯರಿಂದ ತಪಾಸಣೆ
* ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಅನಾರೋಗ್ಯ
* ಆಪ್ತ ವೈದ್ಯ ಡಾ.ರವಿ ಕುಮಾರ್ ಅವರಿಂದ ತಪಾಸಣೆ
ಬೆಂಗಳೂರು, (ಜೂನ್.01): ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯಗೆ ಜ್ವರ ಇದೆ ಎಂದು ಮಾಹಿತಿ ಲಭ್ಯವಾಗಿದೆ.
ನಿನ್ನೆ (ಸೋಮವಾರ) ರಾತ್ರಿ ಸಿದ್ದರಾಮಯ್ಯಗೆ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆಪ್ತ ವೈದ್ಯ ಡಾ.ರವಿ ಕುಮಾರ್ ಅವರು ಸಿದ್ದರಾಮಯ್ಯನವರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಅಲ್ಲದೇ ಕೋವಿಡ್ ಟೆಸ್ಟ್ ಮಾಡಿದ್ದು, ವರದಿ ನೆಗೆಟಿವ್ ಅಂತ ಬಂದಿದೆ.
.ಬಿಜೆಪಿಯಲ್ಲಿ ಯಡಿಯೂರಪ್ಪಗೆ ಪರ್ಯಾಯ ನಾಯಕರಿಲ್ಲ: ಸಿದ್ದರಾಮಯ್ಯ
ಅನಾರೋಗ್ಯದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ವೈದ್ಯ ಡಾ.ರವಿ ಕುಮಾರ್ ಅವರು, ಆರೋಗ್ಯ ತಪಾಸಣೆ ನಡೆಸಿದ್ದು, ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ತಮ್ಮ ನಿವಾಸದಲ್ಲಿ ಸಿದ್ದರಾಮ್ಯಯ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.
ಈಗಾಗಲೇ ಒಮ್ಮೆ ಸಿದ್ದರಾಮಯ್ಯ ಅವರು ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದರು.
ಇನ್ನು ಸಿದ್ದರಾಮಯ್ಯ ಅವರಿಗೆ ಅನಾರೋಗ್ಯ ಉಂಟಾಗಿರೋ ಕಾರಣ ಇಂದು ನಿಗದಿಯಾಗಿದ್ದ ಅವರ ಎಲ್ಲಾ ಕಾರ್ಯಕ್ರಮಗಳನ್ನ ರದ್ದು ಮಾಡಲಾಗಿದೆ. ಇಂದು ಬೆಂಗಳೂರಿನ ನಾನಾ ಕ್ಷೇತ್ರಗಳಿಗೆ ತೆರಳಿ ಉಚಿತ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸದ್ಯ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಬೆಂಗಳೂರಿನ ನಾನಾ ಕ್ಷೇತ್ರಗಳಿಗೆ ತೆರಳಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಟ್ ವಿತರಣೆ ಮಾಡಲಿದ್ದಾರೆ.