* ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಕೂಗು * ಡಾ.ಅಂಬೇಡ್ಕರ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ದಲಿತ ಸಿಎಂ ಕೂಗು* ಈ ಬಗ್ಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ 

ಬೆಂಗಳೂರು, (ನ.09): ರಾಜ್ಯದಲ್ಲಿ ಮತ್ತೆ ದಲಿತ ಸಿಎಂ (Dalit CM) ಕೂಗು ಕೇಳಿಬಂದಿದೆ. ಮೈಸೂರಿನ ಹಿನಕಲ್‌ನಲ್ಲಿ ಡಾ.ಅಂಬೇಡ್ಕರ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ದಲಿತ ಸಿಎಂ ಕೂಗು ಜೊರಾಗಿದೆ.

Add Asianetnews Kannada as a Preferred SourcegooglePreferred

ಹೌದು... ಮೈಸೂರಿನ (Mysuru) ಹಿನಕಲ್‌ನಲ್ಲಿ ಇಂದು (ನವೆಂಬರ್ 9) ಡಾ.ಅಂಬೇಡ್ಕರ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ (Siddaramaiah), ಸಮುದಾಯದ ಕೆಲವರು ಸ್ವಾರ್ಥಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಸಿಂದಗಿಯ ದಲಿತ ಎಡಗೈ ಸಮುದಾಯದ ಸಭೆಯಲ್ಲಿ ಹೇಳಿದ್ದೆ. ಆರ್​ಎಸ್​ಎಸ್​ ಗಿರಾಕಿಗಳು ಈ ಭಾಷಣ ತಿರುಚಿ ಗದ್ದಲ‌ ಎಬ್ಬಿಸಿದರು. ದಲಿತರು ಅಂದ್ರೆ ಬರೀ ಪರಿಶಿಷ್ಟ ಜಾತಿಯವರು ಮಾತ್ರವಲ್ಲ. ನಾನು ಕೂಡ ದಲಿತನೇ, ಅವಕಾಶ ವಂಚಿತರೆಲ್ಲರೂ ದಲಿತರು. ಯಾರೇ ಮುಖ್ಯಮಂತ್ರಿ ಆದ್ರೂ ನಾನು ಖುಷಿ ಪಡುತ್ತೇನೆ. ಹೈಕಮಾಂಡ್ ದಲಿತರು ಸಿಎಂ ಆಗಲಿ ಅಂದ್ರೆ ಹೆಚ್ಚು ಸಂತಸ. ಹೆಚ್ಚು ಖುಷಿ ಪಡುವ ವ್ಯಕ್ತಿ ನಾನೇ ಎಂದರು.

ನಾನೇನೂ ಅಪ್ಪನ ಮನೆ ದುಡ್ಡಿನಿಂದ ಅನ್ನಭಾಗ್ಯ ಕೊಟ್ಟಿಲ್ಲ. ಜನರ ತೆರಿಗೆ ಹಣದಲ್ಲಿಯೇ ಜನರಿಗೆ ಅಕ್ಕಿ ಕೊಟ್ಟಿದ್ದೇನೆ. ತೆರಿಗೆ ಹಣದಲ್ಲಿ ಬಡವರ ಸಹಾಯಕ್ಕೂ ಬದ್ಧತೆ ಬೇಕು. ಚುನಾವಣೆಯಲ್ಲಿ ನಾವು ದುರದೃಷ್ಟವಶಾತ್ ಸೋತೆವು. ಬಡ್ತಿ ಮೀಸಲು ವಿಚಾರದಲ್ಲಿ ಕೆಲವರು ಬಂದು ಹೇಳಿದ್ರು. ನಿಮಗೆ ಕೆಲ ಸಮಾಜದ ಮತ ಬರಲ್ಲ ಅಂತಾ ಹೇಳಿದ್ದರು. ನಾನು ಇದ್ಯಾವುದಕ್ಕೂ ಕೇರ್ ಮಾಡಿರಲಿಲ್ಲ. ನನಗೆ ಸಂವಿಧಾನದ ಆಶಯ ಜಾರಿ ಮುಖ್ಯವಾಗಿತ್ತು ಎಂದು ತಿಳಿಸಿದರು. 

ಜಿಟಿಡಿ ಮಾತು
ಅಂಬೇಡ್ಕರ್‌ರವರು ಅತ್ಯುತ್ತಮ ಸಂವಿಧಾನ ನೀಡಿದ್ದಾರೆ. ನಮ್ಮ ಸಂವಿಧಾನದ ಎಲ್ಲರೂ ಬಗ್ಗೆ ತಿಳಿದುಕೊಳ್ಳಬೇಕು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು. ಇದು ಡಾ.ಬಿ.ಆರ್. ಅಂಬೇಡ್ಕರ್‌ರವರ ಧ್ಯೇಯವಾಗಿತ್ತು. ಮತದಾರರು ಜಾಗೃತರಾಗಬೇಕು. ಡಾ.ಬಿ.ಆರ್. ಅಂಬೇಡ್ಕರ್‌ ಆಶಯದಂತೆ ಬದುಕಬೇಕು ಎಂದು ಮೈಸೂರಿನ ಹಿನಕಲ್‌ನಲ್ಲಿ ಜಿ.ಟಿ. ದೇವೇಗೌಡ ಹೇಳಿಕೆ ನೀಡಿದ್ದಾರೆ.

3 ಪಕ್ಷಗಳಿಗೆ ಮಾಜಿ ಮೇಯರ್ ಸವಾಲು
ಸಾಮಾಜಿಕವಾಗಿ ತುಳಿತಕ್ಕೆ ಒಳಗಾಗಿರುವ ಎಲ್ಲರೂ ದಲಿತರು. ಹೀಗಾಗಿ ನಾನೂ ದಲಿತ. 3 ಪಕ್ಷಗಳು ದಲಿತರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ ಮಾಜಿ ಮೇಯರ್​ ಪುರುಷೋತ್ತಮ್​ ಒತ್ತಾಯ ಮಾಡಿದ್ದಾರೆ. 

ಸಿದ್ದರಾಮಯ್ಯ ಎದುರು ದಲಿತ ಸಿಎಂ ಕೂಗು ಕೇಳಿಬಂದಿದೆ. ದಲಿತರಿಗೆ ಮುಖ್ಯಮಂತ್ರಿ ಸ್ಥಾನ‌ ನೀಡುತ್ತೇವೆಂದು ಸ್ಪಷ್ಟಪಡಿಸಲಿ ಎಂದು 3 ಪಕ್ಷಗಳಿಗೆ ಮಾಜಿ ಮೇಯರ್ ಪುರುಷೋತ್ತಮ್ ಸವಾಲು ಹಾಕಿದ್ದಾರೆ. ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗ್ತಿದೆ. ಆದರೆ ಅಧಿಕಾರ ನೀಡುವಾಗ ಮಾತ್ರ ಕಡೆಗಣಿಸಲಾಗುತ್ತಿದೆ. ಈವರೆಗೂ ದಲಿತರೊಬ್ಬರು ರಾಜ್ಯದ ಸಿಎಂ ಆಗಲು ಸಾಧ್ಯವಾಗಿಲ್ಲ ಎಂದು ಅಂಬೇಡ್ಕರ್ ಭವನ ಉದ್ಘಾಟನೆ ವೇಳೆ ಪುರುಷೋತ್ತಮ್ ಹೇಳಿದ್ದಾರೆ.