ಬಿಜೆಪಿ ವಿರುದ್ಧ ಸಿದ್ದು ಹಿಗ್ಗಾಮುಗ್ಗಾ ವಾಗ್ದಾಳಿ, ವಿಜಯೇಂದ್ರ ವಿರುದ್ಧ ಗಂಭೀರ ಆರೋಪ
* ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ
* ಗಾಂಧಿ ನಡಿಗೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಷಣ
* ಬಿಎಎಸ್ವೈ ಪುತ್ರ ವಿಜಯೇಂದ್ರ ವಿರುದ್ಧ ಗಂಭೀರ ಆರೋಪ
ಬೆಂಗಳೂರು, (ಸೆ.26): ಬಿ.ಎಸ್.ಯಡಿಯೂರಪ್ಪ (BS Yediyurappa) ರಾಜಾಹುಲಿಯಂತೆ, ಇಂದಿರಾ ಕ್ಯಾಂಟಿನ್ ಮುಚ್ಚಿದಕ್ಕೆ ಅವರು ರಾಜಾಹುಲಿಯಾ? ಅತ್ಯುತ್ತಮ ಶಾಸಕನಂತೆ, ಯಡಿಯೂರಪ್ಪ ಎರಡು ವರ್ಷ ಸಿಎಂ ಆಗಿದ್ದರು. ಲೂಟಿ ಹೊಡೆಯುವುದನ್ನು ಬಿಟ್ಟರೆ ಬೇರೆ ಏನು ಮಾಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah ) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಇಂದು (ಸೆ.26) ಗಾಂಧಿ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಯಾರಾದ್ರು ಒಬ್ಬ ದೇಶಕ್ಕಾಗಿ ಸತ್ತಿದ್ದಾರೆಯೇ? ಬಿಜೆಪಿಯವರು (BJP) ಸಾವರ್ಕರ್ ಸಾವರ್ಕರ್ (Vinayak Damodar Savarkar) ಅಂತ ವಿಜೃಂಭಿಸುತ್ತಾರೆ. ಆದ್ರೆ ಅವರು ಜೈಲಿನಲ್ಲಿದ್ದಾಗ ನಾನು ಯಾವತ್ತು ಬ್ರಿಟೀಷರ ವಿರುದ್ದ ಹೋರಾಟ ಮಾಡಲ್ಲ ಅಂತ ಬರೆದುಕೊಟ್ಟು ಬಿಟ್ಟಿದ್ದ. ಇಂದು ಸುಮ್ಮನೆ ವೀರ ಸಾವರ್ಕರ್ ಅಂತ ಕಿರುಚಾಡ್ತಾರೆ. ಆರ್ಎಸ್ಎಸ್ (RSS) ಅವರು ಸಾಮಾಜಿಕ ವ್ಯವಸ್ಥೆ,ಬ್ರಾಹ್ಮಣ ಕ್ಷತ್ರಿಯ ಶೂದ್ರ ಅನ್ನೂದರ ರಕ್ಷಣೆಗಾಗಿ ಹುಟ್ಟುಕೊಂಡವರು ಎಂದು ಕಿಡಿಕಾರಿದರು.
ಮತ್ತೆ ಶುರುವಾಯ್ತು ಸಿದ್ದರಾಮಯ್ಯ ಪತ್ರ ಸಮರ
ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಅಪಾಯದಲ್ಲಿದೆ. ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆ ಕೇವಲ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಸಜ್ಜಾಗಬೇಕು. ಬಿಜೆಪಿ ಪಕ್ಷ ಬಡವರ, ದಲಿತರ ರೈತರ, ಮಹಿಳೆಯರ, ಕಾರ್ಮಿಕರ ವಿರೋಧಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಅಧಿಕಾರವಧಿಯಲ್ಲಿ ಬಿಎಸ್ ವೈ, ಮಗ ವಿಜಯೇಂದ್ರ (Vijayendra) ಲೂಟಿ ಮಾಡಿದ್ರು. ಈಗ ಬೊಮ್ಮಾಯಿ ಸಿಎಂ ಆಗಿದ್ದಾನೆ. ಬೊಮ್ಮಾಯಿ (Basavaraj Bommai) ಕೂಡ ಬಿಎಸ್ ವೈ ಶ್ರೀರಕ್ಷೆಯಿಂದ ಸಿಎಂ ಆದವರು. ಈಗಲೂ ವಿಜಯೇಂದ್ರ ಅವರೇ ಲೂಟಿ ಮಾಡ್ತಾರೆ. ಬಿಜೆಪಿ ಸರ್ಕಾರದಲ್ಲಿ IAS, IPS ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ. 8 ರಿಂದ10 ಕೋಟಿ ಕೊಟ್ಟು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ವಿಜಯೇಂದ್ರ ವಿರುದ್ಧ ಆರೋಪ ಮಾಡಿದರು.
ನಾನು 7 ಕೆಜಿ ಅಕ್ಕಿ ಉಚಿತವಾಗಿ ಕೊಟ್ಟಿದ್ದೆ, ಕುಮಾರಸ್ವಾಮಿ (HD Kumaraswamy) ಅಕ್ಕಿ ಕೊಟ್ಟಿದ್ದರೆ ಹೇಳಿ? ಯಡಿಯೂರಪ್ಪ ಕೊಟ್ಟಿದ್ದರೇ? ಈಗ ಬೊಮ್ಮಾಯಿ ಕೊಡುತ್ತಿದ್ದಾರಾ? ಈಗ ಕಡಿಮೆ ಅಕ್ಕಿ ಕೊಡುತ್ತಿದ್ದಾರೆ. ಇವರೇನು ಇವರಪ್ಪನ ಮನೆಯಿಂದ ಕೊಡುತ್ತಾರಾ. ಬಡವರಿಗೆ ಅಕ್ಕಿ ಕೊಡಲು ಯಾಕೆ ಹೊಟ್ಟೆ ಉರಿ ? ನಾನೇನು ನಮ್ಮಪ್ಪನ ಮನೆಯಿಂದ ಕೊಟ್ಟೆನಾ ಎಂದರು.
ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ. 7 ಕೆಜಿಯಲ್ಲ ಹತ್ತು ಕೆಜಿ ಅಕ್ಕಿಯನ್ನ ಉಚಿತವಾಗಿ ಕೊಡುತ್ತೇವೆ. ಮತ್ತೆ ಇಂದಿರಾ ಕ್ಯಾಂಟಿನ್(Indira Canteen) ಆರಂಭಿಸುತ್ತೇವೆ ಎಂದು ಸಿದ್ದರಾಮಯ್ಯ ಘೋಷಿಸಿದರು.