ಮೋದಿ ಸರ್ಕಾರ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆಯಲ್ಲಿ ತೊಡಗಿದೆ: ಸುರ್ಜೆವಾಲಾ
* ಬಿಜೆಪಿಗೆ ನಾಯಕರಿಗೆ ಜನರಿಗೆ ಒಳಿತು ಮಾಡುವ ಯಾವುದೇ ಉದ್ದೇಶವಿಲ್ಲ
* ರಾಜ್ಯ ಬಿಜೆಪಿ ಲೂಟಿಯಲ್ಲಿ ತೊಡಗಿದ್ದರೆ, ಕಾಂಗ್ರೆಸ್ ಜನರಿಗೆ ನೆರವಿನ ಹಸ್ತ ಚಾಚಿದೆ
* ಕೋವಿಡ್ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಕಾಂಗ್ರೆಸ್ ಮಾಡಿದೆ
ಹುಬ್ಬಳ್ಳಿ(ಜು.30): ಮೋದಿ ಸರ್ಕಾರ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆಯಲ್ಲಿ ತೊಡಗಿದೆ. ಪೆಗಾಸಸ್ ಮೂಲಕ ಬೇಹುಗಾರಿಕೆ ನಡೆಸಿ ಚುನಾಯಿತ ಸರ್ಕಾರವನ್ನು ಉರುಳಿಸುವ ಕೆಲಸ ಮಾಡಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನೇರವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಆರ್ಟಿಜಿಎಸ್ ಮೂಲಕ ಗುತ್ತಿಗೆದಾರರಿಂದ ಹಣ ಪಡೆದಿದ್ದಾರೆ. ಮುಖ್ಯಮಂತ್ರಿಯನ್ನ ಯಾವ ಕಾರಣಕ್ಕಾಗಿ ಬದಲಿಸಿದ್ರು ಅಂತ ಎಲ್ಲರಿಗೂ ಗೊತ್ತಿದೆ. ಲೂಟಿ ಮಾಡುವ ಉದ್ದೇಶದಿಂದಲೇ ರಬ್ಬರ್ ಸ್ಟ್ಯಾಂಪ್ ಮುಖ್ಯಮಂತ್ರಿಯನ್ನ ಕೂಡಿಸಲಾಗಿದೆ ಅಂತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು(ಶುಕ್ರವಾರ) ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಶಾಸಕರುಗಳು ಮಂತ್ರಿ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿರುವುದು ಒಳ್ಳೆಯ ಖಾತೆ ಪಡೆದು ಭ್ರಷ್ಟಾಚಾರ ನಡೆಸುವ ಉದ್ದೇಶದಿಂದ. ಬಿಜೆಪಿಗೆ ನಾಯಕರಿಗೆ ಜನರಿಗೆ ಒಳಿತು ಮಾಡುವ ಯಾವುದೇ ಉದ್ದೇಶವಿಲ್ಲ ಅಂತ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.
ಹುಬ್ಬಳ್ಳಿ: ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಮಧು ಬಂಗಾರಪ್ಪ
ರಾಜ್ಯ ಬಿಜೆಪಿ ಲೂಟಿಯಲ್ಲಿ ತೊಡಗಿದ್ದರೆ, ಕಾಂಗ್ರೆಸ್ ಜನರಿಗೆ ನೆರವಿನ ಹಸ್ತ ಚಾಚಿದೆ. ಕೋವಿಡ್ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಕಾಂಗ್ರೆಸ್ ಮಾಡಿದೆ ಅಂತ ಹೇಳಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಥ್ ನೀಡಿದ್ದರು.