ಕೆಲ ಉದ್ಯಮಿಗಳು ಜನರ ಹಣ ಲೂಟಿ ಮಾಡಿ ದೇಶ ಬಿಟ್ಟು ವಿದೇಶದಲ್ಲಿ ಆರಾಮದಾಯಕ ಜೀವನ ನಡೆಸುತ್ತಿದ್ದಾರೆ. ದೇಶದ ಜನರ ಹಣ ಲೂಟಿ ಮಾಡಿದ ಕಳ್ಳರನ್ನು ಕಳ್ಳ ಎಂದು ಕರೆಯುವುದು ಅಪರಾಧವೇ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಪ್ರಶ್ನಿಸಿದರು.  

ಕೋಲಾರ (ಏ.02): ಕೆಲ ಉದ್ಯಮಿಗಳು ಜನರ ಹಣ ಲೂಟಿ ಮಾಡಿ ದೇಶ ಬಿಟ್ಟು ವಿದೇಶದಲ್ಲಿ ಆರಾಮದಾಯಕ ಜೀವನ ನಡೆಸುತ್ತಿದ್ದಾರೆ. ದೇಶದ ಜನರ ಹಣ ಲೂಟಿ ಮಾಡಿದ ಕಳ್ಳರನ್ನು ಕಳ್ಳ ಎಂದು ಕರೆಯುವುದು ಅಪರಾಧವೇ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಪ್ರಶ್ನಿಸಿದರು. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಏ.9ರಂದು ನಡೆಯಲಿರುವ ‘ಜೈ ಭಾರತ್‌’ ಸಮಾವೇಶ ಆಯೋಜನೆ ಸಂಬಂಧ ಶನಿವಾರ ನಗರ ಹೊರವಲಯದ ನಂದಿನಿ ಪ್ಯಾಲೇಜ್‌ನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

Add Asianetnews Kannada as a Preferred SourcegooglePreferred

ಹಲವು ಉದ್ಯಮಿಗಳಿಂದ ಬ್ಯಾಂಕ್‌ ಹಣ ಲೂಟಿ: ದೇಶದ ಬಡ ಜನರು ಕಷ್ಟಪಟ್ಟು ದುಡಿದು ಬ್ಯಾಂಕ್‌ನಲ್ಲಿಟ್ಟಿರುವ ಹಣವನ್ನು ಲಲಿತ್‌ ಮೋದಿ, ನೀರವ್‌ ಮೋದಿ ಸೇರಿದಂತೆ ಹಲವು ಉದ್ಯಮಿಗಳು ಲೂಟಿ ಮಾಡಿಕೊಂಡು ಹೋದರೂ ದೇಶ ರಕ್ಷಕರು ಸುಮ್ಮನೇ ನೋಡಿಕೊಂಡು ಕುಳಿತಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ಕಾರಣಕ್ಕಾಗಿ ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ಅವರ ಮೈಕ್‌ ಆಫ್‌ ಮಾಡಲಾಯಿತು. ಈಗ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಚುನಾವಣೆಗಳು ಇರುವುದಿಲ್ಲ. ಮುಖ್ಯಮಂತ್ರಿಗಳು, ಮಂತ್ರಿಗಳು ಇರುವುದಿಲ್ಲ. ಕೇವಲ ಒಬ್ಬ ವ್ಯಕ್ತಿ ದೇಶವನ್ನು ಆಳ್ವಿಕೆ ಮಾಡುವಂತಹ ಕಾಲ ಬರುತ್ತದೆ’ ಎಂದು ಎಚ್ಚರಿಸಿದರು.

ಬಿಜೆಪಿ ಟಿಕೆಟ್‌ ವಿಚಾರದಲ್ಲಿ ಗೊಂದಲ ಇಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಇಲ್ಲಿಂದಲೇ ದಿಟ್ಟ ಉತ್ತರ: ಕೇಂದ್ರ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಮಾತನಾಡಿ, ದೇಶದಲ್ಲಿ ಅಂಬೇಡ್ಕರ್‌ ಆಶಯ ಮತ್ತು ಸಂವಿಧಾನಕ್ಕೆ ಧಕ್ಕೆ ತರಲಾಗುತ್ತಿದೆ. ದೇಶವನ್ನು ಲೂಟಿ ಹೊಡೆದು ಹೋದ ಮೋದಿಗಳ ಬಗ್ಗೆ ಮಾತನಾಡಿದ್ದೇ ಅಪರಾದವಾಯಿತೇ. ರಾಹುಲ್‌ ಗಾಂಧಿಗೆ ಕೋಲಾರದಲ್ಲೇ ಸಮಸ್ಯೆ ಎದುರಾಗುವಂತೆ ಮಾಡಿದ್ದರಿಂದ ಇಲ್ಲಿಂದಲೇ ಉತ್ತರ ದಿಟ್ಟಉತ್ತರ ಕೊಡುತ್ತೇವೆ. ನಂತರ ದೇಶಾದ್ಯಂತ ಬಿಜೆಪಿ ವಿರುದ್ಧ ಕಹಳೆ ಮೊಳಗಲಿದೆ ಎಂದು ತಿಳಿಸಿದರು. ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮದ್‌, ಎಂಎಲ್ಸಿ ನಸೀರ್‌ ಅಹ್ಮದ್‌ ಮಾತನಾಡಿದರು.

ಅಭ್ಯರ್ಥಿಗಳ ಆಯ್ಕೆ ಬಿಜೆಪಿ ಸಂಸದೀಯ ಸಭೆಯಲ್ಲಿ ಅಂತಿಮ: ಶಾಸಕ ಬಸನಗೌಡ ಯತ್ನಾಳ

ವಾರ್‌ರೂಮ್‌ಗೆ ಸಿದ್ದು ಭೇಟಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದ ಟೇಕಲ್‌ ರಸ್ತೆಯಲ್ಲಿರುವ ತಮ್ಮ ವಾರ್‌ ರೂಮ್‌ಗೆ ಭೇಟಿ ನೀಡುವ ಮೂಲಕ ಭಾರಿ ಕುತೂಹಲ ಮೂಡಿಸಿದರು. ಸಿದ್ದರಾಮಯ್ಯರ ಚುನಾವಣಾ ತಂತ್ರಗಾರಿಕೆಯನ್ನು ಇದೇ ವಾರ್‌ ರೂಮ್‌ ನೋಡಿಕೊಳ್ಳುತ್ತಿದೆ. ಇಲ್ಲಿಗೆ ಭೇಟಿ ನೀಡಿ ಮಾತನಾಡಿದ ಸಿದ್ದರಾಮಯ್ಯ, ತಾವು ಮಾನಸಿಕವಾಗಿ ಕೋಲಾರದಲ್ಲಿ ಸ್ಪರ್ಧೆಗೆ ಒಪ್ಪಿದ್ದೇನೆ. ಆದರೆ ಹೈಕಮಾಂಡ್‌ ತೀರ್ಮಾನದಂತೆ ನಡೆದುಕೊಳ್ಳುವುದಾಗಿ ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.