ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮುಂದಿನ ಐದು ವರ್ಷಗಳ ಕಾಲ ಪ್ರತಿ ತಿಂಗಳು ಮನೆಯ ಮಹಿಳೆಗೆ 2000 ಸಾವಿರ ರೂಪಾಯಿಯನ್ನು ಅವರ ಖಾತೆಗೆ ಹಾಕಲಾಗುವುದು ಎನ್ನುತ್ತಲೇ ಇಡೀ ಭಾಷಣದ ಉದ್ದಕ್ಕೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುಂಗ್ ಸುರ್ಜೇವಾಲಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

Add Asianetnews Kannada as a Preferred SourcegooglePreferred

ಕೊಡಗು (ಮಾ.02): ಬೆಲೆಯೇರಿಕೆಯಿಂದ ತತ್ತರಿಸಿರುವ ರಾಜ್ಯದ ಗೃಹಿಣಿ ಮನೆ ನೆಡುವುದು ಹೇಗೆ ಎಂಬ ಚಿಂತಿಯಲ್ಲಿ ಇದ್ದಾಳೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮುಂದಿನ ಐದು ವರ್ಷಗಳ ಕಾಲ ಪ್ರತಿ ತಿಂಗಳು ಮನೆಯ ಮಹಿಳೆಗೆ 2000 ಸಾವಿರ ರೂಪಾಯಿಯನ್ನು ಅವರ ಖಾತೆಗೆ ಹಾಕಲಾಗುವುದು ಎನ್ನುತ್ತಲೇ ಇಡೀ ಭಾಷಣದ ಉದ್ದಕ್ಕೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುಂಗ್ ಸುರ್ಜೇವಾಲಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮಡಿಕೇರಿಯಲ್ಲಿ ನಡೆದ ಕಾಂಗ್ರೆಸ್‌ನ ಗ್ಯಾರೆಂಟಿ ಕಾರ್ಡ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ಯಾರೆಂಟಿ ಕಾರ್ಡ್ ಬಿಡುಗಡೆ ಮಾಡಿದ ರಣದೀಪ್ ಸಿಂಗ್ ಸುಜೇವಾಲ ಅವರು ರಾಜ್ಯದ ಸಿಎಂಗೆ ಇಡೀ ದೇಶದಲ್ಲಿ ಅಪಖ್ಯಾತಿ ಬಂದಿದೆ. 

ಇಡೀ ದೇಶದಲ್ಲಿ ಎಲ್ಲಿ ಕೇಳಿದರು ಕರ್ನಾಟಕ ಸರ್ಕಾರ 40 ಪರ್ಸೆಂಟ್ ಕಮಿಷನ್ ಸರ್ಕಾರ ಎನ್ನುತ್ತಿದ್ದಾರೆ. ಬೊಮ್ಮಾಯಿ ಯಾರೆಂದು ಕೇಳಿದರೆ 40 ಪರ್ಸೆಂಟ್ ಕಮಿಷನ್ ಸರ್ಕಾರದ ಸಿಎಂ ಎನ್ನುತ್ತಿದ್ದಾರೆ. ಇಡೀ ದೇಶದಲ್ಲಿ ಎಲ್ಲಿ ಕೇಳಿದರು ಬೊಮ್ಮಾಯಿ ಪೇ ಸಿಎಂ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು. 50 ಸಾವಿರ ಸಂಖ್ಯೆ ಇರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು 40 ಪರ್ಸೆಂಟ್ ಕಮಿಷನ್ ಬಗ್ಗೆ ದೂರಿದ್ದರು. ಪ್ರತಿಯೊಂದು ಕಾಮಗಾರಿಯಲ್ಲೂ 40 ಪರ್ಸೆಂಟ್ ಕಮಿಷನ್ ಕೇಳುತ್ತಿದೆ ಎಂದು ಬರೆದರು. ಈ ಪತ್ರ ಬರೆದ ನಂತರ ಮೋದಿಯವರು 8 ಬಾರಿ ರಾಜ್ಯಕ್ಕೆ ಬಂದು ಹೋದರು. 

ಚುನಾವಣೆಗೆ ಬಿಎಸ್‌ವೈ, ಸೋಮಣ್ಣ ಒಟ್ಟಾಗಿ ಹೋಗಬೇಕು: ಮುಖಂಡರು, ಕಾರ್ಯಕರ್ತರ ಅಭಿಮತ

ಒಂದೇ ಒಂದು ಬಾರಿ 40 ಪರ್ಸೆಂಟ್ ಕಮಿಷನ್ ಬಗ್ಗೆ ಮಾತನಾಡಲಿಲ್ಲ ಎಂದು ಟೀಕಿಸಿದರು. ಪ್ರಧಾನಿ ಮೋದಿಯವರು ನಾವು ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎನ್ನುತ್ತಾರೆ. ಆದರೆ ಎಲ್ಲವನ್ನೂ ಲೂಟಿ ಮಾಡಲಾಗುತ್ತಿದೆ ಎಂದು ವಾಗ್ದಾಳಿ ಮಾಡಿದರು. ಬಿಜೆಪಿಯ ಕಾರ್ಯಕರ್ತನಾಗಿದ್ದ ಸಂತೋಷ್ ಪಾಟೀಲ್ ಪಕ್ಷದ ಪೋಸ್ಟರ್ ಅಂಟಿಸಿ ಕೆಲಸ ಮಾಡುತ್ತಿದ್ದವರು. ಗುತ್ತಿಗೆ ಕಾಮಗಾರಿಗಳನ್ನು ಮಾಡಿದ್ದ ಅವರಿಂದಲೂ ಸರ್ಕಾರ 40 ಪರ್ಸೆಂಟ್ ಕಮಿಷನ್ ಕೇಳಿತು. ಇದರಿಂದ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರು. ಮೋದಿಜಿ ಬೆಳಗಾವಿಗೆ ಬಂದರೂ ಅವರ ಮನೆಗೆ ಹೋಗಲಿಲ್ಲ. 

ಡಿಕೆಶಿ, ಸಿದ್ದರಾಮಯ್ಯ ಮತ್ತು ನಾನು ಮೃತ ಸಂತೋಷ್ ಪಾಟೀಲ್ ಅವರ ಮನೆಗೆ ಹೋಗಿ ಬಂದೆವೆಂದು ಪ್ರಧಾನಿ ಮೋದಿ ಮತ್ತು ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸಿದರು. ಇದಕ್ಕೂ ಮೊದಲು ಕೊಡಗಿನ ವೀರ ಸೇನಾನಿಗಳು, ಕ್ರೀಡಾಪಟುಗಳನ್ನು ನೆನೆದ ಸುರ್ಜೇವಾಲ, ಕೊಡಗು ಭೌಗೋಳಿಕವಾಗಿ ಅಷ್ಟೇ ಅಲ್ಲ, ಸೇನೆ ಕ್ರೀಡೆ ಎಲ್ಲಾ ರೀತಿಯಿಂದಲೂ ದೇಶದ ಹೆಮ್ಮೆಯಾಗಿದೆ. ಹೀಗಾಗಿ ಕೊಡಗು ಭೂಮಿಗೆ ನಾನು ನಮಸ್ಕರಿಸುತ್ತೇನೆ ಎಂದ ಸುರ್ಜೇವಾಲ ಕೊಡಗಿನ ಮತಗಳ ಬುಟ್ಟಿಗೆ ಕೈಹಾಕಲು ಪ್ರಯತ್ನಿಸಿದರು. ಕೊಡಗಿನ ಈ ಅತ್ಯಮೂಲ್ಯ ನೆಲದಿಂದ ಜನರಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರು ಬಂದಿದ್ದಾರೆ. ಅಷ್ಟೇ ಅಲ್ಲ ಸಾವಿರಾರು ಸೇನಾ ನಾಯಕರು, ಸೇನಾನಿಗಳನ್ನು ನೀಡಿದೆ. 

ಎಚ್‌ಡಿಕೆಯವರನ್ನು ಮುಖ್ಯಮಂತ್ರಿ ಮಾಡುವುದೇ ದೇವೇಗೌಡರ ಕೊನೆಯ ಆಸೆ: ಶಾಸಕ ಜಿ.ಟಿ.ದೇವೇಗೌಡ

ಜೊತೆಗೆ ಹಲವು ಕ್ರೀಡಾಪಟುಗಳಾದ ಎಂ. ಪಿ ಗಣೇಶ್, ಅಶ್ವಿನಿ ನಾಚಪ್ಪ ಸೇರಿದಂತೆ ಕ್ರೀಡಾ ಲೋಕಕ್ಕೆ ದೊಡ್ಡ ಕೊಡಗು ನೀಡಿದ ಪುಣ್ಯ ಭೂಮಿ ಎಂದು ಸ್ಮರಿಸಿದರು. ಭಾರತದಲ್ಲಿ ಕಾಂಗ್ರೆಸ್ ಪಕ್ಷ ಇತಿಹಾಸ ಸೃಷ್ಟಿಸಲಿದೆ. ಕರ್ನಾಟಕದಲ್ಲಿ ಈ ಬಾರಿ ಜನತೆಯ ಆಯ್ಕೆ ಕಾಂಗ್ರೆಸ್ ಆಗಿರುತ್ತದೆ. ಬಿಜೆಪಿಯಿಂದ ಕರ್ನಾಟಕದ ಘನತೆಗೆ ಧಕ್ಕೆಯಾಗಿದೆ. ಬೊಮ್ಮಾಯಿಯ 40 % ಸರ್ಕಾರದಿಂದ ರಾಜ್ಯದ ಜನತೆಗೆ ಅನ್ಯಾಯವಾಗಿದೆ. ಹಾಗಾಗಿ ಬಿಜೆಪಿ ರಾಜ್ಯದಲ್ಲಿ‌ ಕ್ಷಮಾಪಣಾ ಯಾತ್ರೆ ಮಾಡಬೇಕು ಎಂದು ಟೀಕಿಸಿದರು. ಮುಂದಿನ ಹತ್ತು ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಹೇಳಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಸೇರಿದಂತೆ ಪ್ರಮುಖ ನಾಯಕರು ಇದ್ದರು.