ಮುಖ್ಯಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಂಡಿಸಿರುವ 2021ರ ಬಜೆಟ್‌ ಬಗ್ಗೆ ಮಾಜಿ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು  ವ್ಯಂಗ್ಯವಾಡಿದ್ದಾರೆ.

ಬೆಂಗಳೂರು, (ಮಾ.08): ಮಹಿಳಾ ದಿನಾಚರಣೆ ಪ್ರಯುಕ್ತ ಬಜೆಟ್ ಮೇಲೆ ಬಹು ನಿರೀಕ್ಷೆ ಹೊಂದಿದ್ದ ರಾಜ್ಯದ ಮಹಿಳಿಯರಿಗೆ, ಲಾಲಿಪಾಪ್ ನೀಡಲು ಯತ್ನಿಸಿರುವ ರಾಜ್ಯ ಬಿಜೆಪಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ಅವರಿಗೆ ಅಭಿನಂದನೆಗಳು ಎಂದು ಮಾಜಿ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ರಾಜ್ಯ ಬಜೆಟ್ ಕುರಿತಂತೆ ವ್ಯಂಗ್ಯವಾಡಿದ್ದಾರೆ.

Add Asianetnews Kannada as a Preferred SourcegooglePreferred

ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, 2018ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ' ಸ್ತ್ರೀ ಉನ್ನತಿ ' ಯೋಜನೆಯ ಮೂಲಕ ಮಹಿಳೆಯರಿಗೆ 10 ಸಾವಿರ ಕೋಟೆ ರೂಪಾಯಿ ಯೋಜನೆ ನೀಡುವುದಾಗಿ ಭರವಸೆ ನೀಡಿತ್ತು. ರಾಜ್ಯದಲ್ಲಿ ಮಹಿಳೆಯರ ಪ್ರಕರಣ ಸಂಬಂಧ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ನೇಮಿಸಿ, ಒಂದು ಸಾವಿರ ಮಹಿಳಾ ಪೊಲೀಸ್ ನೇಮಕದ ಮೂಲಕ ಭದ್ರತೆಗೆ ಒತ್ತು ನೀಡುವ ಭರವಸೆ ನೀಡಿದ್ದರು ಎಂದಿದ್ದಾರೆ.

'ಓಲ್ಡ್ ವೈನ್ ಇನ್ ನ್ಯೂ ಬಾಟೆಲ್ ತರ ಬಜೆಟ್ ಮಂಡನೆ'

ಒಂದು ನೂರು ಕೋಟಿ ರೂಪಾಯಿ ಒದಗಿಸಿ ಮಹಿಳೆಯರಿಗೆ ಹೈನುಗಾರಿಕೆಯಲ್ಲಿ ಶಕ್ತಿ ನೀಡುವುದಾಗಿ ಹೇಳಿದ್ದರು. ಮುಖ್ಯಮಂತ್ರಿ Smart Phone ಯೋಜನೆ ಅಡಿಯಲ್ಲಿ ರಾಜ್ಯದ BPL ಕುಟುಂಬದ ಎಲ್ಲಾ ಮಹಿಳೆಯರಿಗೆ Smart Phone ಭರವಸೆ ನೀಡಿದ್ದರು. ಒಂದು ನೂರು ಕೋಟಿ ರೂಪಾಯಿ ಅನುದಾನ ನೀಡಿ 30 ಮಹಿಳಾ ಮೈಕ್ರೋ, ಸಣ್ಣ ಉದ್ದಿಮೆ ಸ್ಥಾಪಿಸುವುದಾಗಿ ಹೇಳಿದ್ದರು. ಅದೇರೀತಿ ರಾಜ್ಯದ ಮಹಿಳೆಯರಿಗೆ ಬಡ್ಡಿ ರಹಿತ ಸಾಲ, ಮಹಿಳಾ ಸಬಲೀಕರಣ ಯೋಜನೆಗಳ ಕನಸುಗಳನ್ನೇ ಬಿತ್ತಿದ್ದರು ಎಂಬುದನ್ನು ಎತ್ತಿ ತೋರಿಸಿದ್ದಾರೆ.

ರಾಜ್ಯ ಬಿಜೆಪಿಗೆ ಮತ್ತು ಶ್ರೀ ಯಡಿಯೂರಪ್ಪ ಅವರಿಗೆ ಮಹಿಳೆಯರು ಅವರ ಪಕ್ಷದ ಪ್ರಣಾಳಿಕೆ ಓದುವುದಿಲ್ಲ ಎಂಬ ಅಚಲವಾದ ನಂಬಿಕೆ! ಒಂದು ವೇಳೆ ಓದಿ ಕೇಳಿದರೂ ಕೋವಿಡ್ ಹೆಸರಿನ ರಕ್ಷಾ ಕವಚದ ಉನ್ಮಾದ! ಅದಕ್ಕೇ ಮಹಿಳಾ ದಿನಾಚರಣೆ ದಿನವೇ ಮಹಿಳೆಯರ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ. ಮಾನ್ಯ ಯಡಿಯೂರಪ್ಪ ಅವರಿಗೆ ಮಹಿಳೆಯರ ಮೇಲೆ ಕನಿಷ್ಠ ಗೌರವ ಇದ್ದರೆ, ತಮ್ಮ ಬಜೆಟ್ ಒಳಗಿನ ಸತ್ಯ ಹೇಳಿ, ಲಾಲಿಪಾಪ್ ನೀಡಿರುವ ಕಾರಣಕ್ಕೆ ಈ ರಾಜ್ಯದ ಮಹಿಳೆಯರ ಕ್ಷಮೆ ಕೇಳಲಿ ಎಂಬುದಾಗಿ ಒತ್ತಾಯಿಸಿದ್ದಾರೆ.