ಸಲೀಂ-ಉಗ್ರಪ್ಪ ಹೇಳಿಕೆ ಆಧಾರ ರಹಿತ: ಬಿಜೆಪಿ ವಿರುದ್ಧ ರಾಮಲಿಂಗಾರೆಡ್ಡಿ ವಾಗ್ದಾಳಿ
* ತ್ರಿಶೂಲ ಹಿಡಿದುಕೊಳ್ಳೋದು ತಪ್ಪಲ್ಲ. ದೇವರ ಮನೆಯಲ್ಲಿ ಬೇಕಾದರೆ ಇಟ್ಟುಕೊಳ್ಳಲಿ
* ಸಲೀಂ ಹೇಳಿಕೆ ಬಗ್ಗೆ ಡಿಕೆಶಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ
* ಬಿಜೆಪಿ ಸರ್ಕಾರದ ಬಗ್ಗೆ ಜನ ಏನು ಮಾತಾಡ್ತಿದ್ದಾರೆ ಕೇಳಿದ್ದೀರಾ?
ಬೆಂಗಳೂರು(ಅ.15): ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ(Saleem) ಹಾಗೂ ವಿ.ಎಸ್. ಉಗ್ರಪ್ಪ(VS Ugrappa) ಅವರ ಹೇಳಿಕೆ ಆಧಾರ ರಹಿತವಾಗಿದೆ. ಸಿದ್ದರಾಮಯ್ಯ(Siddaramaiah) ಸರ್ಕಾರ ಇರುವಾಗ ಯಾವುದೇ ಪರ್ಸಂಟೇಜ್ ಇರಲಿಲ್ಲ. ಈಗ ಬಿಜೆಪಿ(BJP) ಸರ್ಕಾರದಲ್ಲಿ 20 ಪರ್ಸೆಂಟ್ ಆಗಿರಬಹುದೇನೋ ಗೊತ್ತಿಲ್ಲ. ಸಲೀಂ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ. ದಾರಿಯಲ್ಲಿ ಹೋಗುವವರೆಲ್ಲ ಏನೇನೋ ಮಾತಾಡ್ತಾರೆ. ಅದಕ್ಕೆಲ್ಲ ಉತ್ತರ ಕೊಡಲಿಕ್ಕೆ ಸಾಧ್ಯವಾಸ? ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸಲೀಂ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು(ಶುಕ್ರವಾರ) ನಗರದ ಕೆಪಿಸಿಸಿ(KPCC) ಕಚೇರಿಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ(Ramalinga Reddy), ಅವರ ಹೇಳಿಕೆಯಿಂದ ಡಿ.ಕೆ.ಶಿವಕುಮಾರ್(DK Shivakumar) ಅವರಿಗೆ ಮುಜುಗರ ಆಗಿರಬಹುದು. ಆದರೆ, ಡಿಕೆಶಿ ಅವರು ಸಲೀಂ ಹೇಳಿಕೆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸಲೀಂ ಹೇಳಿಕೆಗೆ ಯಾವುದೇ ಆಧಾರವಿಲ್ಲ ಅಂತ ಹೇಳಿದ್ದಾರೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ(BS Yediyurappa), ದಿ. ಅನಂತಕುಮಾರ್(Anantkumar) ಅವರು ಒಬ್ಬರಿಗೊಬ್ಬರು ಟೀಕೆ ಮಾಡಿದ ವಿಡಿಯೋ ಇರಲಿಲ್ವಾ?. ಕಾರ್ಪೋರೇಟ್ ಕಂಪನಿಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದ ಬಿಜೆಪಿ ಸರ್ಕಾರದ ಬಗ್ಗೆ ಜನ ಏನು ಮಾತಾಡ್ತಿದ್ದಾರೆ ಕೇಳಿದ್ದೀರಾ?. ಇದರಲ್ಲಿ ಎಷ್ಟು ಪರ್ಸೆಂಟ್ ಆಗಿದೆಯೋ ಅಂತ ಜನ ಮಾತಾಡ್ತಿದ್ದಾರೆ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
'ಉಗ್ರಪ್ಪ, ಸಲೀಂ ಗುಟ್ಟೊಂದನ್ನ ರಟ್ಟು ಮಾಡಿದ್ದಾರೆ, ಇದರ ಹಿಂದೆ ಪಿತೂರಿ ಇದೆ'
ಆರ್ಎಸ್ಎಸ್(RSS) ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಸಂಘ ಪರಿವಾರದ ಮಾತು ಕೇಳಲೇಬೇಕು. ಅವರ ಮಾತು ಕೇಳದೆ ಹೋದರೆ ಸಿಎಂ ಸ್ಥಾನದಿಂದ ಕೆಳಗಿಳಿಸ್ತಾರೆ. ಬಿಜೆಪಿ ಹಿರಿಯ ನಾಯಕ ಅಡ್ವಾಣಿಯವರ ಕಥೆ ಏನಾಯ್ತು?. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(Atal Bihari Vajpayee), ಎಲ್.ಕೆ. ಅಡ್ವಾಣಿ(LK Advani) ಅವರು ಪಕ್ಷ ಕಟ್ಟಿದವರು. ಅವರಿಗೆ ಯಾವ ಗೌರವ ಬಿಜೆಪಿಯವರು ಕೊಡ್ತಾರೆ ಅಂತ ಹೇಳಿದ್ದಾರೆ.
ಸಿಎಂ ತ್ರಿಶೂಲ ಹಿಡಿದುಕೊಂಡ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಮಲಿಂಗಾರೆಡ್ಡಿ, ತ್ರಿಶೂಲ ಹಿಡಿದುಕೊಳ್ಳೋದು ತಪ್ಪಲ್ಲ. ದೇವರ ಮನೆಯಲ್ಲಿ ಬೇಕಾದರೆ ಇಟ್ಟುಕೊಳ್ಳಲಿ. ಅದನ್ನ ಬೇರೆ ಕಡೆ ಬಳಕೆ ಮಾಡಬಾರದು ಅಂತ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸಭೆ ಆರಂಭ
ಉಪಚುನಾವಣೆ(Byelection) ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್(Congress) ರಣತಂತ್ರದ ರೂಪಿಸುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಇನ್ನು ಶಿಕ್ಷಕರ ಮತ್ತು ಪದವಿಧರ ಕ್ಷೇತ್ರಗಳ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಿದೆ ಅಂತ ತಿಳಿದು ಬಂದಿದೆ.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ, ಕಾರ್ಯಾಧ್ಯಕ್ಷ ಸಲಿಂ ಅಹಮದ್, ಧ್ರುವನಾರಾಯಣ್ ಭಾಗಿಯಾಗಿದ್ದರು.