ಸಿಎಂ ಇಬ್ರಾಹಿಂ ಪತ್ರ ಕಂಡು ಹೌಹಾರಿದ ಕೈ ನಾಯಕರು, ಸಿದ್ದು ಅಖಾಡಕ್ಕೆ!
ಹಬ್ಬದ ವೇಳೆ ಸಾಮೂಕಿಕ ಪ್ರಾರ್ಥನೆಗೆ ಅವಕಾಶ ನೀಡಿ/ ಸಿಎಂ ಇಬ್ರಾಹಿಂ ಪತ್ರ/ ಪತ್ರಕ್ಕೆ ಕಾಂಗ್ರೆಸ್ ವಲಯದಲ್ಲಿಯೇ ವಿರೋಧ/ ಅಖಾಡಕ್ಕೆ ಧುಮುಕಿದ ಸಿದ್ದರಾಮಯ್ಯ
ಬೆಂಗಳೂರು(ಮೇ 14) ಕೊರೋನಾ ಆತಂಕ, ಲಾಕ್ ಡೌನ್ ಸಡಿಲಿಕೆ, ನಾಲ್ಕನೇ ಹಂತದ ಲಾಕ್ ಡೌನ್ ವಿಚಾರಗಳು ಚಚರ್ಚೆಯಲ್ಲಿ ಇರುವಾಗ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಇದೇ ತಿಂಗಳ 24 ಇಲ್ಲವೇ 25 ಇದ್ ಉಲ್ ಫಿತರ್ ಹಬ್ಬಕ್ಕೆ ನಮಾಜ್ ಮಾಡಲು ಅವಕಾಶ ನೀಡುವಂತೆ ಪತ್ರದಲ್ಲಿ ಕೇಳಿಕೊಂಡಿದ್ದಾರೆ. ಈದ್ಗಾ ಮೈದಾನ ಮತ್ತು ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಕೊಡಬೇಕು. ವೈದ್ಯಕೀಯ ತಜ್ಞರ ಜತೆ ಚರ್ಚೆ ಮಾಡಿ ಅಗತ್ಯ ಮುನ್ನೆಚ್ಚರಿಕೆಯ ಕ್ರಮ ಕೈಗೊಂಡು ಸಾಮೂಹಿಕ ಪ್ರಾರ್ಥನೆ ಗೆ ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಆದರೆ ಸಿಎಂ ಇಬ್ರಾಹಿಂ ಪತ್ರಕ್ಕೆ ಕಾಂಗ್ರೆಸ್ ನಲ್ಲೇ ವಿರೋಧ ವ್ಯಕ್ತವಾಗಿದೆ. ಇಬ್ರಾಹಿಂ ಪತ್ರ ಬರೆದಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮುಸ್ಲಿಂ ಮುಖಂಡರ ಜೊತೆ ಚರ್ಚೆ ನಡೆಸಿರುವ ಡಿ.ಕೆ ಶಿವಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.
ತಬ್ಲಿಘಿ ಗಳಿಂದ ಹೆಚ್ಚಾಗಿರುವ ಕೊರೋನಾ ಸಂಖ್ಯೆಯನ್ನೇ ಗುರಿಯಾಗಿಟ್ಟುಕೊಂಡು ಬಿಜೆಪಿ ವಾದ ಮಾಡ್ತಿದೆ. ಕಾಂಗ್ರೆಸ್ ಅನಿವಾರ್ಯವಾಗಿ ಸಮುದಾಯದ ಪರ ನಿಂತ ಪರಿಣಾಮ ಸಾರ್ವತ್ರಿಕ ವಲಯದಲ್ಲಿ ಕೆಟ್ಟ ಅಭಿಪ್ರಾಯ ಮೂಡುವಂತಾಗಿದೆ. ಈಗ ರಂಜಾನ್ ಗೆ ಸಾಮೂಹಿಕ ಪ್ರಾರ್ಥನೆ ಅಂದ್ರೆ ಮತ್ತೆ ಬಿಜೆಪಿ ಇದನ್ನ ದೊಡ್ಡದಾಗಿ ಬಿಂಬಿಸುತ್ತೆ. ಈ ಬಗ್ಗೆ ಸಿಎಂ ಇಬ್ರಾಹಿಂ ಜೊತೆ ಚರ್ಚಿಸುವಂತೆ ಸಿದ್ದರಾಮಯ್ಯಗೆ ಡಿ.ಕೆ ಶಿವಕುಮಾರ್ ಮನವಿ ಮಾಡಿಕೊಂಡಿದ್ದು ಸಿದ್ದರಾಮಯ್ಯ ಮೂಲಕ ಸಿಎಂ ಇಬ್ರಾಹಿಂ ಗೆ ತಿಳಿಹೇಳಲು ಕಾಂಗ್ರೆಸ್ ಮುಂದಾಗಿದೆ.