ಕಾಂಗ್ರೆಸ್‌ ಅಧಿಕಾರಕ್ಕೆ ತನ್ನಿ, ಮುಸ್ಲಿಂ ಬಾಂಧವರು ಚಿಂತಿಸಿ ಮತ ಚಲಾಯಿಸಿ: ಅಬ್ದುಲ್‌ ಜಬ್ಬಾರ್‌ 

ಶಹಾಪುರ(ಜ.22):  ಬಡವರು, ಶೋಷಿತರು, ದಲಿತರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರು, ಯುವಕರು ಹಾಗೂ ಪರಿಶಿಷ್ಟರ ಧ್ವನಿಯಾಗದೇ ನಾವು ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ದೇಶದ ನಾಗರಿಕರು ಶಾಂತಿ, ಸೌಹಾರ್ಧತೆ ಹಾಗೂ ಸಮಾನತೆಯಿಂದ ಬದುಕು ನಡೆಸಬೇಕಿದ್ದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕಿದೆ. ಆ ನಿಟ್ಟಿನಲ್ಲಿ ಮುಸ್ಲಿಂ ಬಾಂಧವರು ಚಿಂತನೆ ನಡೆಸಿ ಮತ ಚಲಾವಣೆ ಮಾಡಬೇಕಿದೆ ಎಂದು ರಾಜ್ಯ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷರು ಹಾಗೂ ಎಂಎಲ್‌ಸಿ ಅಬ್ದುಲ್‌ ಜಬ್ಬರ್‌ ಹೇಳಿದರು.

Add Asianetnews Kannada as a Preferred SourcegooglePreferred

ನಗರದ ಚಾಂದ್‌ ಪ್ಯಾಲೆಸ್‌ ಫಂಕ್ಷನ್‌ ಹಾಲ್‌ನಲ್ಲಿ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದಿಂದ ನಡೆದ ಚಿಂತನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ನೀತಿಗಳಿಂದ ನೊಂದಿರುವ ಹಿಂದುಳಿದ ಸಮುದಾಯಗಳ ಪರವಾಗಿ ಹೋರಾಟ ನಡೆಸಲು ಕಾಂಗ್ರೆಸ್‌ ಸಿದ್ಧವಾಗಿದೆ. ಬಿಜೆಪಿ ದುರಾಡಳಿತ ಜನರಿಗೆ ಸಾಕಾಗಿದೆ. ಜಾತಿ, ಧರ್ಮದ ಆಧಾರದ ಜನರ ಮತಗಳನ್ನು ವಿಭಜಿಸುವ ಮೂಲಕ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ದೇಶದ ಅಭಿವೃದ್ಧಿಗಾಗಿ, ದೇಶಕ್ಕಾಗಿ ನಾವೆಲ್ಲ ಒಂದಾಗಿ ಕಾಂಗ್ರೆಸ್‌ ಅಧಿಕಾರ ತರುವಲ್ಲಿ ನಾವೆಲ್ಲ ಶ್ರಮಿಸಬೇಕಿದೆ. ದರ್ಶನಾಪುರರಂತ ಅಭಿವೃದ್ಧಿ ಪರ ಚಿಂತಕ ಮತ್ತು ಸಮಾನತೆಯ ಸಾಕಾರ ಮೂರ್ತಿಯಂತವರ ಕೈ ಬಲಪಡಿಸಬೇಕಿದೆ ಎಂದರು.

ಪ್ರಧಾನಿ ಮೋದಿ ಕಾರ್ಯಕ್ರಮ ಯಶಸ್ಸು, ನನ್ನ ಜನ್ಮ ಧನ್ಯ: ಶಾಸಕ ರಾಜೂಗೌಡ

ಶಾಸಕ ಶರಣಬಸಪ್ಪಗೌಡ ದರ್ಶನಾಪೂರ್‌ ಮಾತನಾಡಿ, ಚುನಾವಣೆ ಬಂದಾಗ ಜಾತಿ, ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಮೂಲಕ ಅಧಿಕಾರಕ್ಕೆ ಬರುವ ಕನಸು ಕಾಣುತ್ತಾರೆ. ನಮ್ಮ ದೇಶ ಜಾತ್ಯಾತೀತ ದೇಶವಾಗಿದೆ. ಇಲ್ಲಿ ಜಾತಿ, ಧರ್ಮಗಳ ದಂಗಲ್‌ಗೆ ಅವಕಾಶ ಕಲ್ಪಿಸಬಾರದು. ವಾಮಮಾರ್ಗದಿಂದ ಅಧಿಕಾರಕ್ಕೆ ಬರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ನನ್ನ ಮತಕ್ಷೇತ್ರದಲ್ಲಿ ಸಾಕಷ್ಟುಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಇದಲ್ಲದೆ ಪ್ರತ್ಯೇಕ ಶಾದಿ ಮಹಲ್‌ ನಿರ್ಮಾಣದ ಗುರಿ ಹೊಂದಿದ್ದು, ಈಗಾಗಲೇ ಅದಕ್ಕೆ ಸೂಕ್ತ ಜಾಗವನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಅಭೂತಪೂರ್ವ ಶಾದಿ ಮಹಲ್‌ ನಿರ್ಮಿಸುವುದಾಗಿ ಭರವಸೆ ನೀಡಿದರು.

ರಾಜ್ಯ ಉಪಾಧ್ಯಕ್ಷ ಲಾಲಹ್ಮದ್‌ ಬಾಂಬೆಸೇಠ ಮಾತನಾಡಿದರು. ಸಗರ ದರ್ಗಾದ ಸಯ್ಯದ್‌ ಮುಜೀಬುದ್ದೀನ್‌ ಸರಮಸ್‌ತ, ಗೋಗಿ ದರ್ಗಾದ ಸಯ್ಯದ್‌ ಷಾ ಫಯ್ಯೂಮುದ್ದೀನ್‌ ಹಾಗೂ ಮುಖಂಡರಾದ ಮುಸ್ತಫಾ ದರ್ಬಾನ್‌, ಪಾಶಾ ಪಟೇಲ್‌, ರಫೀಕ್‌ ಚೌದ್ರಿ, ಬಾಬಾ ಪಟೇಲ್‌, ಸದ್ದಾಂ ದಾದುಲ್ಲಾ ಸೇರಿದಂತೆ ಇತರರಿದ್ದರು.