* ಬಿಜೆಪಿ-ಎಸ್ಡಿಪಿಐ ನೇರಾನೇರ ಹೇಳಿಕೆ ಸಮರ* ಹಿಜಾಬ್ ಪರ ನಿಂತರೆ ಹಿಂದೂ ಮತ ಬಿಜೆಪಿಗೆ ವಾಲಿದರೆ ಎಂಬ ಚಿಂತೆ* ನೇರ ನುಡಿ ಆಡದ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು(ಫೆ.10): ರಾಜ್ಯಾದ್ಯಂತ(Karnataka) ಭುಗಿಲೆದ್ದಿರುವ ಹಿಜಾಬ್ ವಿವಾದಕ್ಕೆ(Hijab Controversy) ಸಂಬಂಧಿಸಿದಂತೆ ಬಿಜೆಪಿ ಹಾಗೂ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತಮ್ಮ ನಿಲುವಿಗೆ ಅಂಟಿಕೊಂಡು ಪ್ರಬಲವಾಗಿ ಹೇಳಿಕಾ ಸಮರಕ್ಕೆ ಇಳಿದ್ದಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಮಾತ್ರ ಈ ವಿಚಾರವನ್ನು ಹೇಗೆ ನಿಭಾಯಿಸಬೇಕು ಎಂದು ಗೊಂದಲಕ್ಕೆ ಸಿಲುಕಿದಂತಿವೆ.
ಹಿಜಾಬ್ ವಿರೋಧಿಸುವ ವಿಚಾರದಲ್ಲಿ ಬಿಜೆಪಿಗೆ(BJP) ಯಾವುದೇ ಗೊಂದಲವಿಲ್ಲ. ಅದೇ ರೀತಿ ಹಿಜಾಬ್ ಪರ ನಿಂತು ತಾನು ನಾಡಿನಲ್ಲಿ ಅಲ್ಪಸಂಖ್ಯಾತರ ಪರ ಗಟ್ಟಿಧ್ವನಿ ಎಂದು ಬಿಂಬಿಸಿಕೊಳ್ಳುವ ಮೂಲಕ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಎಸ್ಡಿಪಿಐ ತೀವ್ರ ಪ್ರಯತ್ನ ನಡೆಸಿದೆ. ಆದರೆ, ಜಾತ್ಯತೀತ ನಿಲುವಿಗೆ ಅಂಟಿಕೊಂಡಿರುವ ಕಾಂಗ್ರೆಸ್(Congress) ಹಾಗೂ ಜೆಡಿಎಸ್(JDS) ನಾಯಕರು ಮಾತ್ರ ಅಳೆದು-ತೂಗಿ ಹೇಳಿಕೆ ನೀಡುವ ಅನಿವಾರ್ಯಕ್ಕೆ ಸಿಲುಕಿದ್ದಾರೆ.
Karnataka Politics: ಹೀಗೇ ಮಾಡಿದರೆ ಕಾಂಗ್ರೆಸ್ ಅರಬ್ಬಿ ಸಮುದ್ರಕ್ಕೆ: ಅರಗ
ಆರಂಭದಲ್ಲಿ ವಿರೋಧಿದ್ದ ಕಾಂಗ್ರೆಸ್:
ಹಿಜಾಬ್ ವಿವಾದದ ಆರಂಭದ ದಿನಗಳಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ಹಿಜಾಬ್ ಪರ ಹೇಳಿಕೆಗಳನ್ನು ನೀಡಿದ್ದರು. ಅದರಲ್ಲೂ ಸಿದ್ದರಾಮಯ್ಯ ಅವರು ಹಿಜಾಬ್ ನಿರ್ಬಂಧಿಸುವುದು ಸಂವಿಧಾನ ವಿರೋಧಿ ನೀತಿ ಎಂದು ಟೀಕಿಸಿ, ಕೋಮು ಸ್ವರೂಪ ನೀಡುತ್ತಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು.
ಶಿವಕುಮಾರ್ ಅವರು ಆರಂಭದಲ್ಲಿ ಎಚ್ಚರಿಕೆ ಹೇಳಿಕೆ ನೀಡುತ್ತಿದ್ದರೂ, ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ(Rahul Gandhi) ಅವರೇ ಹಿಜಾಬ್ ಪರ ಟ್ವೀಟ್ ಮಾಡಿದ ನಂತರ ಗಟ್ಟಿಧ್ವನಿಯಲ್ಲೇ ಹಿಜಾಬ್ ವಿರೋಧಿಸಿದರು. ಈ ನಡುವೆ ಎಸ್ಡಿಪಿಐ ಪ್ರಬಲವಾಗಿ ಈ ಹಿಜಾಬ್ ಪರ ನಿಲ್ಲುವ ಮೂಲಕ ತಾನು ಅಲ್ಪಸಂಖ್ಯಾತರ(Minorities) ಪರ ಎಂದು ಬಿಂಬಿಸಿಕೊಳ್ಳತೊಡಗಿತು. ಈ ಹಂತದಲ್ಲಿ ಕಾಂಗ್ರೆಸ್ ಹಿಜಾಬ್ ಪರ ಗಟ್ಟಿಧ್ವನಿಯಲ್ಲೇ ಮುಂದುವರೆಯಬೇಕೋ ಅಥವಾ ಸಮತೋಲನ ಕಾಯ್ದುಕೊಳ್ಳಬೇಕೋ ಎಂಬ ಗೊಂದಲಕ್ಕೆ ಸಿಲುಕಿತು.
ಹಿಂದೂ ಮತ ಬಿಜೆಪಿಗೆ ವಾಲಿದರೆ ಎಂಬ ಚಿಂತೆ:
ಹಿಜಾಬ್ ವಿಚಾರ ರಾಜ್ಯಾದ್ಯಂತ ವಿಸ್ತರಿಸಿ ಬಹುಸಂಖ್ಯಾತ ವರ್ಗ ಹಿಜಾಬ್ ವಿರುದ್ದ ನಿಲುವಿಗೆ ಅಂಟಿಕೊಂಡ ಸೂಚನೆ ದೊರೆತಿದ್ದು ಕಾಂಗ್ರೆಸ್ನ ಈ ಗೊಂದಲಕ್ಕೆ ಕಾರಣ. ಹಿಜಾಬ್ ಪರ ನಿಂತರೆ ಪಕ್ಷದ ಪರ ಇರುವ ಹಿಂದುಗಳ(Hindu) ಮತ ಬಿಜೆಪಿಯತ್ತ ವಾಲಬಹುದು ಹಾಗಂತ ಸುಮ್ಮನಾದರೆ ಅಲ್ಪಸಂಖ್ಯಾತರು ಪಕ್ಷದ ಬಗ್ಗೆ ಬೇಸರ ಪಟ್ಟುಕೊಳ್ಳಬಹುದು. ಇದೇ ಅವಕಾಶ ಕಾಯುತ್ತಿರುವ ಎಸ್ಡಿಪಿಐ ಅಲ್ಪಸಂಖ್ಯಾತರ ಪರ ಮತ್ತಷ್ಟು ಅಬ್ಬರ ಉಂಟು ಮಾಡಬಹುದು ಎಂಬ ಚಿಂತೆ ಪಕ್ಷದ ನಾಯಕರನ್ನು ಕಾಡತೊಡಗಿತು.
Hijab Row ನಾನು ಎಷ್ಟು ಬೇಕಾದರೂ ಕೇಸರಿ ಶಾಲು ಹಂಚುತ್ತೇನೆ, ಗುಡುಗಿದ ಸಚಿವ ಈಶ್ವರಪ್ಪ
ಅಲ್ಲದೆ, ಈ ವಿಚಾರ ಬೆಳೆದಷ್ಟು ರಾಜ್ಯದಲ್ಲಿ ಸಾಮರಸ್ಯ ಹದಗೆಟ್ಟು ಅದರ ಲಾಭ ಕೋಮುವಾದಿ ಪಕ್ಷಗಳಿಗೆ ಲಭಿಸಬಹುದು ಎಂಬ ಭಾವನೆ ಮೂಡತೊಡಗಿತು. ಇದರ ಪರಿಣಾಮವಾಗಿ ಪಕ್ಷದ ಹಿರಿಯ ಮುಸ್ಲಿಂ(Muslim) ನಾಯಕರು ಮುಸ್ಲಿಂ ಧರ್ಮ ಗುರು ಅರ್ಥಾತ್ ಅಮೀರ್ ಷರಿಯತ್ ಆಗಿರುವ ಮುಫ್ತಿ ಸಯ್ಯೀದ್ ಅಹ್ಮದ್ ಅವರಿಗೆ ಮನವಿ ಮಾಡಿ ಹಿಜಾಬ್ ವಿಚಾರದಿಂದ ರಾಜ್ಯದಲ್ಲಿ ಕೋಮು ಸಾಮರಸ್ಯ ಕೆಡದಂತೆ ವರ್ತಿಸಬೇಕು ಎಂದು ಎಸ್ಡಿಪಿಐ ನಾಯಕರಿಗೂ ತಾಕೀತು ಮಾಡಿಸಿದರು ಎನ್ನಲಾಗಿದೆ.
ನೇರ ನುಡಿ ಆಡದ ಎಚ್ಡಿಕೆ:
ಇನ್ನು ಜೆಡಿಎಸ್ ಕೂಡ ತೋರಿಕೆಗೆ ಹೇಳಿಕೆಗಳನ್ನು ನೀಡುತ್ತಿದ್ದರೂ ಈ ವಿಚಾರದಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳುವ ನಿಲುವಿಗೆ ಅಂಟಿಕೊಂಡಿದೆ. ಪಕ್ಷದ ಮುಖ್ಯಸ್ಥ ಕುಮಾರಸ್ವಾಮಿ(HD Kumaraswamy) ಈ ವಿಚಾರವನ್ನು ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರ(BJP Government) ಎಡವಿದೆ ಎಂಬುದಕ್ಕೆ ಮಾತ್ರ ತಮ್ಮ ಹೇಳಿಕೆಗಳನ್ನು ಸೀಮಿತಗೊಳಿಸುತ್ತಿರುವುದು ಈ ಮಾತಿಗೆ ಉದಾಹರಣೆ.
