ಸುಮ್ನೆ ನೋಡ್ತಾ ಇರಿ, ಗ್ಯಾರಂಟಿ ಕಾರ್ಡ್‌ ತೋರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಬಣ್ಣ ಹತ್ತು ತಿಂಗಳಲ್ಲಿ ಬಯಲಾಗುತ್ತೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಚಿತ್ರದುರ್ಗ (ಜೂ.11) ಸುಮ್ನೆ ನೋಡ್ತಾ ಇರಿ, ಗ್ಯಾರಂಟಿ ಕಾರ್ಡ್‌ ತೋರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಬಣ್ಣ ಹತ್ತು ತಿಂಗಳಲ್ಲಿ ಬಯಲಾಗುತ್ತೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಜಿಲ್ಲಾ ಬಿಜೆಪಿ ವತಿಯಿಂದ ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ನೀಡಿರುವ ಗ್ಯಾರಂಟಿಗಳನ್ನು ಈಡೇರಿಸಲು 58 ಸಾವಿರ ಕೋಟಿ ಹಣ ಬೇಕಾಗುತ್ತದೆ. ಈಗಾಗಲೇ ಬಡ್ಡಿ ಮತ್ತು ಕಂತು ಸೇರಿ 2 ಲಕ್ಷ ಕೋಟಿ ವೆಚ್ಚ ಇದೆ. ಈ ಭರವಸೆ ಈಡೇರಿಸಲು ಸಾಧ್ಯವಿಲ್ಲ ಎಂದರು.

ರಾಜ್ಯದಲ್ಲಿ ಗರ್ವದ ಕಾಲ ಹೋಗಿ, ಸರ್ವರ ಕಾಲ ಬಂದಿದೆ: ಬಿ.ಎನ್‌. ಚಂದ್ರಪ್ಪ

ಇಂದಿರಾ ಗಾಂಧಿ ಕಾಲದಿಂದಲೂ ಕಾಂಗ್ರೆಸ್‌ನವರು ಸಾಕಷ್ಟುಭರವಸೆ ಕೊಟ್ಟಿದ್ದರು. ಅವುಗಳನ್ನು ಈಡೇರಿಸಲು ಇದುವರೆಗೂ ಆಗಿಲ್ಲ. ಹಿಂದಿನ ಕಾಲದ ಜನ ಸುಮ್ಮನಿರುತ್ತಿದ್ದರು. ಆದರೆ ಇಂದಿನ ಕಾಲದ ಜನರು ಬುದ್ಧಿವಂತರಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಕೊಟ್ಟಎಲ್ಲ ಭರವಸೆ ಈಡೇರಿಸಬೇಕು. ತಪ್ಪಿದಲ್ಲಿ ಜನ ಸರ್ಕಾರಕ್ಕೆ ಛೀಮಾರಿ ಹಾಕುವ ಸನ್ನಿವೇಶ ಬರುತ್ತದೆ ಎಂದರು.

ಡಿಸಿ ಆಫೀಸ್‌ನಿಂದ ಪೋನ್‌ ಮಾಡ್ತಾ ಇದ್ದೇವೆ:

ಚುನಾವಣೆಯಲ್ಲಿ ಬಿಜೆಪಿ ಬಹಳಷ್ಟುಹಿನ್ನಡೆ ಅನುಭವಿಸಿದೆ. ಕೆಲವು ಸಂದರ್ಭದಲ್ಲಿ ಆಗಿರುವ ತೀರ್ಮಾನ, ಎಲ್ಲ ವರ್ಗದ ಹಿತ ಕಾಯುವ ಕೆಲಸ ಮಾಡಲಾಗಿಲ್ಲ. ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಮಾಡಿಸಿ, ಮನೆ ಮನೆಗೆ ಹಂಚಿ ಫೋನ್‌ ಮಾಡಿದ್ದಾರೆ. ಡಿಸಿ ಆಫೀಸ್‌ನಿಂದ ಮಾತನಾಡುತ್ತಿದ್ದೇವೆ. ಕಾರ್ಡ್‌ ಕಳೆದುಕೊಳ್ಳಬೇಡಿ ಎಂದಿದ್ದಾರೆ. ಡಿಸಿ ಅಂದ್ರೆ ಡಿಸ್ಟ್ರಿಕ್ಟ್ ಕಾಂಗ್ರೆಸ್‌ ಆಫೀಸ್‌. ಜನ ಇದನ್ನು ಜಿಲ್ಲಾಧಿಕಾರಿ ಕಚೇರಿ ಅಂದುಕೊಂಡು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದರು.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮೂರು ಸಿಲಿಂಡರ್‌ ಕೊಡುತ್ತೇವೆ ಎಂದಿದ್ದು ಯಾರಿಗೂ ಅರ್ಥವಾಗಲಿಲ್ಲ. ಕೋವಿಡ್‌ ಸಂದರ್ಭದಲ್ಲಿ ಪ್ರಧಾನಿ ಮಾಡಿದ ಕೆಲಸಗಳು ಗೊತ್ತಾಗಲಿಲ್ಲ. ಮಾಡಿದ ಕೆಲಸ ಜನರ ಗಮನಕ್ಕೆ ತಾರದೆ ಸರ್ಕಾರ ಕಳೆದುಕೊಂಡಿದ್ದೇವೆ. ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದು ಹಿನ್ನಡೆಗೆ ಕಾರಣ ಎಂದು ಕ್ಷೇತ್ರದಲ್ಲಿ ಮಾತನಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಎಲ್ಲರೂ ಸಂಘಟಿತರಾಗಿ ಕೆಲಸ ಮಾಡುವ ಮೂಲಕ ಪಕ್ಷವನ್ನು ಗಟ್ಟಿಗೊಳಿಸಬೇಕು. ಮುಂದಿನ ಕೆಲವೇ ದಿನಗಳಲ್ಲಿ ಜಿಪಂ, ತಾಪಂ, ಎಪಿಎಂಸಿ ಚುನಾವಣೆ ಎದುರಾಗಲಿವೆ. ಹತ್ತು ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಈ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಪಕ್ಷ ಸಂಘಟನೆ ಮಾಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಗೆದ್ದು ತೋರಿಸಬೇಕು ಎಂದು ಚಂದ್ರಪ್ಪ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಮಾತನಾಡಿ, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಐದು ಕ್ಷೇತ್ರದಲ್ಲಿ ಸೋತಿದ್ದೇವೆ. ಆದರೆ, ಯಾವುದೋ ಗೆಲುವು, ಅಧಿಕಾರಕ್ಕಾಗಿ ಬಿಜೆಪಿ ಅಸ್ತಿತ್ವಕ್ಕೆ ಬಂದಿದ್ದಲ್ಲ. ದೇಶ ಮೊದಲು ಎನ್ನುವ ಪರಿಕಲ್ಪನೆ ನಮ್ಮದು. ಐದು ಕ್ಷೇತ್ರಗಳ ಸೋಲಿಗೆ ಕಾರಣಗಳು ನಮಗೆಲ್ಲಾ ಗೊತ್ತಿದೆ. ಒಂದು ಸೋಲಿನಿಂದ ರಾಜಕಾರಣ ಬದಲಾಗುವು ದಿಲ್ಲ. ಬಿಜೆಪಿ ಮುಖಂಡರು, ಕಾರ್ಯಕರ್ತರು ಧೃತಿಗೆಡುವುದಿಲ್ಲ. ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು. ಪ್ರತಿ ಬೂತ್‌ಗಳಿಗೆ ತೆರಳಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಬೇಕು. ಈ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳ ಸಾಧಕ, ಬಾಧಕಗಳನ್ನು ಮತದಾರರಿಗೆ ಮುಟ್ಟಿಸಬೇಕು. ಲೋಕಸಭೆ, ಜಿಪಂ, ತಾಪಂ ಚುನಾವಣೆ ನಿಟ್ಟಿನಲ್ಲಿ ಯೋಜನೆಗಳನ್ನು ಸಿದ್ಧಪಡಿಸಬೇಕು ಎಂದು ಹೇಳಿದರು.

ಐತಿಹಾಸಿಕ ಜಯ ನನ್ನದಲ್ಲ, ಈ ರಾಜ್ಯದ ಜನರದ್ದು: ಕೃತಜ್ಞತಾ ಸಮಾವೇಶದಲ್ಲಿ ಸಿದ್ದು ಭಾವುಕ ನುಡಿ

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಜಿಲ್ಲಾ ಪ್ರಭಾರಿ ಪ್ರೇಮಕುಮಾರ್‌, ಮಾಜಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಹೊನ್ನಾಳ್‌ ಉಪಸ್ಥಿತರಿದ್ದರು.