120 ಕ್ಷೇತ್ರದ ಅಭ್ಯರ್ಥಿಗಳ ಹೆಸರು ಫೈನಲ್‌ ಸಂಭವ, ಖರ್ಗೆ, ಸೋನಿಯಾ, ರಾಹುಲ್‌ ಗಾಂಧಿ ನೇತೃತ್ವ, ಮೋಹನ್‌ ಪ್ರಕಾಶ್‌ ನೇತೃತ್ವದ ಸ್ಕ್ರೀನಿಂಗ್‌ ಕಮಿಟಿ ಕಳೆದ ವಾರ 2 ದಿನ ಸಭೆ ನಡೆಸಿತ್ತು, 120 ಕ್ಷೇತ್ರಕ್ಕೆ ಒಂಟಿ ಹೆಸರಿನ ಸಂಭಾವ್ಯರ ಪಟ್ಟಿ ಅಂತಿಮಗೊಳಿಸಿ ಎಐಸಿಸಿಗೆ ಕಳುಹಿಸಿತ್ತು. 

ಬೆಂಗಳೂರು(ಮಾ.13): ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನ ಅಭ್ಯರ್ಥಿಗಳ ಪಟ್ಟಿಅಂತಿಮಗೊಳಿಸುವ ನಿಟ್ಟಿನಲ್ಲಿ ಮಾ.15ರಂದು (ಬುಧವಾರ) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಎಐಸಿಸಿ ಚುನಾವಣಾ ಸಮಿತಿಯ ಮಹತ್ವದ ಸಭೆ ನಡೆಯಲಿದೆ.

Add Asianetnews Kannada as a Preferred SourcegooglePreferred

ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಅಂತಿಮಗೊಳಿಸಲು ಮೋಹನ್‌ ಪ್ರಕಾಶ್‌ ನೇತೃತ್ವದ ಸ್ಕ್ರೀನಿಂಗ್‌ ಸಮಿತಿ (ಪರಿಶೀಲನಾ ಸಮಿತಿ) ಕಳೆದ ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ರಾಜ್ಯದಲ್ಲಿ ಸರಣಿ ಸಭೆ ನಡೆಸಿತ್ತು. ಈ ವೇಳೆ 120 ಕ್ಷೇತ್ರಗಳಿಗೆ ಒಂಟಿ ಹೆಸರಿನ ಸಂಭಾವ್ಯರ ಪಟ್ಟಿಅಂತಿಮಗೊಳಿಸಿ ಎಐಸಿಸಿಗೆ ಕಳುಹಿಸಿಕೊಟ್ಟಿದೆ.

ಹೊಸಪೇಟೆ: ವಿಜಯನಗರ ಕ್ಷೇತ್ರದಿಂದ ಸಚಿವ ಆನಂದ ಸಿಂಗ್‌ ಪುತ್ರ ಸಿದ್ಧಾರ್ಥ ಅಖಾಡಕ್ಕೆ?

ಈ ಪಟ್ಟಿ ಪರಿಶೀಲಿಸಿ ಅಂತಿಮಗೊಳಿಸುವ ಹಿನ್ನೆಲೆಯಲ್ಲಿ ಬುಧವಾರ ಎಐಸಿಸಿ ಮಟ್ಟದಲ್ಲಿ ಚುನಾವಣಾ ಸಮಿತಿಯ ಮಹತ್ವದ ಸಭೆ ನಿಗದಿಯಾಗಿದೆ. ಸ್ಕ್ರೀನಿಂಗ್‌ ಸಮಿತಿಯು ಮೊದಲ ಹಂತದಲ್ಲಿ ಕಳುಹಿಸಲಿರುವ 120 ಕ್ಷೇತ್ರದ ಅಭ್ಯರ್ಥಿಗಳ ಹೆಸರುಗಳನ್ನು ಚುನಾವಣಾ ಸಮಿತಿ ಪರಿಶೀಲನೆ ನಡೆಸಿ ಅಂತಿಮಗೊಳಿಸಲಿದೆ. ಬೆನ್ನಲ್ಲೇ ಅಭ್ಯರ್ಥಿಗಳ ಪಟ್ಟಿಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ತಿಳಿದು ಬಂದಿದೆ.

ಮೋದಿ ಇರೋವರೆಗೆ ಕಾಂಗ್ರೆಸ್‌ ಬಾಲ ಬಿಚ್ಚಂಗಿಲ್ಲ: ಸಚಿವ ಅಶೋಕ್‌

ಸ್ಕ್ರೀನಿಂಗ್‌ ಸಮಿತಿಯು ಮೊದಲ ಪಟ್ಟಿಯಲ್ಲಿ ಕಳುಹಿಸಿರುವ 120 ಮಂದಿಯ ಹೆಸರುಗಳಲ್ಲಿ ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ, ಶಿಡ್ಲಘಟ್ಟಶಾಸಕ ವಿ.ಮುನಿಯಪ್ಪ, ಅಫ್ಜಲ್‌ಪುರ ಶಾಸಕ ಎಂ.ವೈ.ಪಾಟೀಲ್‌, ಪಾವಗಡ ಶಾಸಕ ವೆಂಕಟರಮಣಪ್ಪ ಅವರ ಹೆಸರುಗಳ್ನು ವಿವಿಧ ಕಾರಣಗಳಿಗೆ ಕೈಬಿಡಲಾಗಿದೆ. ಉಳಿದಂತೆ ವಿಧಾನಪರಿಷತ್‌ ಸದಸ್ಯರ ಪೈಕಿ ಯು.ಟಿ.ವೆಂಕಟೇಶ್‌ ಅವರಿಗೆ ಬಸವನಗುಡಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಲಿದ್ದು, ಉಳಿದ ಯಾವ ಪರಿಷತ್‌ ಸದಸ್ಯರಿಗೂ ಪಟ್ಟಿಯಲ್ಲಿ ಅವಕಾಶ ನೀಡಿಲ್ಲ.

120 ಕ್ಷೇತ್ರ ಹೊರತುಪಡಿಸಿ ಉಳಿದ 75 ಕ್ಷೇತ್ರಗಳ ಸಂಭವನೀಯರ ಆಯ್ಕೆಗೆ ಸ್ಕ್ರೀನಿಂಗ್‌ ಸಮಿತಿಯು ಮತ್ತೊಮ್ಮೆ ಸಭೆ ನಡೆಸಲಿದೆ. ಜೆಡಿಎಸ್‌ ಹಾಗೂ ಬಿಜೆಪಿಯಿಂದ ಪಕ್ಷಕ್ಕೆ ಬರಲಿರುವ ಶಾಸಕರು, ಸಚಿವರಿಗಾಗಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾದು ನೋಡುವ ತಂತ್ರ ಅನುಸರಿಸಲು ಇತ್ತೀಚೆಗಿನ ಸ್ಕ್ರೀನಿಂಗ್‌ ಸಮಿತಿಯಲ್ಲಿ ನಿರ್ಧರಿಸಲಾಗಿದೆ.