ಕೋಮು ಗಲಭೆಗೆ ಪ್ರಚೋದನೆ ಹೇಳಿಕೆ: ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ದೂರು
ನಾವು ಗಂಭೀರ ವಿಚಾರವಾಗಿ ಕಾಂಗ್ರೆಸ್ ನಿಯೋಗದೊಂದಿಗೆ ಠಾಣೆಗೆ ಬಂದಿದ್ದೇವೆ. ಅಮಿತ್ ಶಾ ವಿರುದ್ಧ ದೂರು ನೀಡಿದ್ದೇವೆ. ಬಿಜೆಪಿ ನಾಯಕರು ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ. ಪ್ರಚಾರದ ವೇಳೆ ಸುಳ್ಳು ಹೇಳಿಕೆಗಳನ್ನ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕೋಮು ಗಲಭೆಗಳು ಆಗುತ್ತವೆ ಅಂತ ಪ್ರಚಾರದ ವೇಳೆ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಇವರ ವಿರುದ್ಧ ನಾವು ದೂರು ನೀಡಿದ್ದೇವೆ: ರಣದೀಪ್ ಸಿಂಗ್ ಸುರ್ಜೆವಾಲಾ
ಬೆಂಗಳೂರು(ಏ.27): ಬಿಜೆಪಿ ನಾಯಕರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿ. ಸೋಮಣ್ಣ ವಿರುದ್ಧ ಕಾಂಗ್ರೆಸ್ ನಾಯಕರು ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿ.ಸೋಮಣ್ಣ ಚಾಮರಾಜನಗರ ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ, ಆಮಿಷವೊಡ್ಡಿರುವ ವಿಚಾರ ಹಾಗೂ ಚುನಾವಣೆ ಪ್ರಚಾರದ ವೇಳೆ ಅಮಿತ್ ಶಾ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಾಟೆಗಳು, ಘರ್ಷಣೆಗಳು, ಗಲಭೆಗಳು ಹೆಚ್ಚಾಗುತ್ತವೆ ಎಂಬ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ವಿ. ಸೊಮಣ್ಣ, ಅಮಿತ್ ಶಾ ವಿರುದ್ಧ ರಣದೀಪ್ ಸಿಂಗ್ ಸುರ್ಜೆವಾಲಾ, ಡಿ.ಕೆ. ಶಿವಕುಮಾರ್ ದೂರು ನೀಡಿದ್ದಾರೆ.
ಬಳಿಕ ಮಾಧ್ಯಮದವರ ಜತೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲಾ ಅವರು, ನಾವು ಗಂಭೀರ ವಿಚಾರವಾಗಿ ಕಾಂಗ್ರೆಸ್ ನಿಯೋಗದೊಂದಿಗೆ ಠಾಣೆಗೆ ಬಂದಿದ್ದೇವೆ. ಅಮಿತ್ ಶಾ ವಿರುದ್ಧ ದೂರು ನೀಡಿದ್ದೇವೆ. ಬಿಜೆಪಿ ನಾಯಕರು ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ. ಪ್ರಚಾರದ ವೇಳೆ ಸುಳ್ಳು ಹೇಳಿಕೆಗಳನ್ನ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕೋಮು ಗಲಭೆಗಳು ಆಗುತ್ತವೆ ಅಂತ ಪ್ರಚಾರದ ವೇಳೆ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಇವರ ವಿರುದ್ಧ ನಾವು ದೂರು ನೀಡಿದ್ದೇವೆ ಅಂತ ತಿಳಿಸಿದ್ದಾರೆ.
ಕರ್ನಾಟಕ ಮತದಾರರಿಗೆ ಅಮಿತ್ ಶಾ ಬೆದರಿಕೆ: ಜೈರಾಂ ರಮೇಶ್
ಪಿಎಫ್ಐ ಬ್ಯಾನ್ಗೆ ಕಾಂಗ್ರೆಸ್ ಒತ್ತಾಯ ಮಾಡಿತ್ತು. ಬೊಮ್ಮಾಯಿ ಸರ್ಕಾರದ ಮೇಲೆ ಸಿದ್ದರಾಮಯ್ಯ, ಡಿಕೆಶಿ ಒತ್ತಾಯ ಮಾಡಿದ್ರು. ಆದ್ರೂ ಬೊಮ್ಮಾಯಿ ಸರ್ಕಾರ ಕ್ರಮ ತೆಗೆದುಕೊಳ್ಳಲಿಲ್ಲ. ಈಗ ಬಿಜೆಪಿ ಸರ್ಕಾರ ಸೋಲಿನ ಭಯಕ್ಕೆ ಒಳಗಾಗಿದೆ. ಕಾಂಗ್ರೆಸ್ ಪರ ಜನಾಭಿಪ್ರಾಯಕ್ಕೆ ಬಿಜೆಪಿ ಹೆದರಿದೆ. ಹಾಗಾಗಿ ಹತಾಶೆಯಿಂದ ಅಮಿತ್ ಶಾ, ಯೋಗಿ ಆದಿತ್ಯ ನಾಥ್ ಮಾತನಾಡಿದ್ದಾರೆ. ನಾವು ಕೊಟ್ಟ ದೂರು ಮೇಲೆ ಕ್ರಮ ಆಗಬೇಕು. ಅಮಿತ್ ಶಾ ಬಂಧನ ಆಗಬೇಕು. ಈ ಬಗ್ಗೆ ನಾಳೆ ಸಂಜೆ 4 ಗಂಟೆಗೆ ದೆಹಲಿಯಲ್ಲಿ ಚುನಾವಣಾ ಆಯೋಗವನ್ನು ಭೇಟಿ ಮಾಡುತ್ತೇವೆ, ದೂರು ನೀಡುತ್ತೇವೆ ಅಂತ ರಣದೀಪ್ ಸುರ್ಜೇವಾಲ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ನಮ್ಮ ರಾಜ್ಯ ಶಾಂತಿಯ ತೋಟವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗಲಭೆ ಆಗ್ತಾವೆ ಅಂತ ಸೆಂಟ್ರಲ್ ಹೋಮ್ ಮಿನಿಸ್ಟರ್ ಭಾಷಣ ಮಾಡಿದ್ದಾರೆ. ಜನರ ಹೆದರಿಸುವಂತ ಕೆಲಸವವನ್ನ ಇವರು ಮಾಡಿದ್ದಾರೆ. ಪ್ರಜಾಪ್ರಭುತ್ವ ಎಲ್ಲಿದೆ, ಜನರ ಮೇಲೆ ಪ್ರಭಾವ ಬೀರುವ ಅಮಿತ್ ಶಾ ಮೇಲೆ ಕ್ರಮ ಆಗಬೇಕು. ಎರಡ್ಮೂರು ಸಮಾವೇಶದಲ್ಲಿ ಇಂತಹ ಹೇಳಿಕೆಗಳನ್ನ ನೀಡಿದ್ದಾರೆ. ಇವರ ವಿರುದ್ಧ ಕಾನೂನು ಪ್ರಕಾರ ಕ್ರಮ ಆಗಬೇಕು. ಚುನಾವಣಾ ಆಯೋಗ ಅಮಿತ್ ಶಾ ಅವರು ಚುನಾವಣಾ ಪ್ರಚಾರ ಮಾಡದಂತೆ ಬ್ಯಾನ್ ಮಾಡಬೇಕು.ಬೇರೆಯವರು ಮಾತನಾಡಿದ್ರೆ ಕೂಡಲೇ ಕ್ರಮ ತೆಗೆದುಕೊಳ್ತಾ ಇದ್ರು. ಪೇ ಸಿಎಂಗೆ ನಮ್ಮ ಮೇಲೆ ಕೇಸ್ ಹಾಕಿದ್ದಾರೆ. ಈಗ ಈ ದೂರಿನ ಮೇಲೆ ಕ್ರಮ ಆಗಬೇಕು. ಜನರ ಮೇಲೆ ಪ್ರಭಾವ ಬೀರುವ ಹೇಳಿಕೆಗಳನ್ನ ನೀಡಬಾರದು. ನಮ್ಮ ದೂರಿಗೆ ಕೂಡಲೇ ಕ್ರಮ ಆಗಬೇಕು ಅಂತ ಚುನಾವಣಾ ಆಯೋಗ ಹಾಗೂ ಪೊಲೀಸಿಗೆ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ಪಿಎಫ್ಐ ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಮಿತ್ ಶಾ ಪಿಎಫ್ಐ ಬ್ಯಾನ್ ರದ್ದು ಮಾಡುತ್ತೆ ಅಂತ ಸುಳ್ಳು ಹೇಳಿದ್ದಾರೆ. ಪಿಎಫ್ಐ ಬ್ಯಾನ್ ಮಾಡಲು ಸಿದ್ದರಾಮಯ್ಯ, ಮತ್ತು ನಾನು ಒತ್ತಾಯಿಸಿದ್ದೆವು. ಆದ್ರೆ ಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿಲ್ಲ. ಕಾಂಗ್ರೆಸ್ ಪಿಎಫ್ಐ ಬ್ಯಾನ್ ಮಾಡಲು ಒತ್ತಾಯ ಮಾಡಿದೆ. ಬಿಜೆಪಿ ಚುನಾವಣೆಯಲ್ಲಿ 40 ಸ್ಥಾನಗಳು ಬರಲಿದೆ. ಸೋಲುವುದರಿಂದ ತಪ್ಪಿಸಿಕೊಳ್ಳಲು ಅಮಿತ್ ಶಾ ಇಂತಹ ಸುಳ್ಳು ಆರೋಪಗಳನ್ನ ಮಾಡಿದ್ದಾರೆ. ಇವರ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಾಗಬೇಕು. ಅಮಿಶ್ ಶಾರನ್ನ ತಕ್ಷಣವೇ ಬಂಧಿಸಬೇಕು ಅಂತ ಡಿಕೆಶಿ ಆಗ್ರಹಿಸಿದ್ದಾರೆ.