ಕೆಲವೇ ದಿನಗಳಲ್ಲಿ ಬೆಳಗಾವಿಯ 18 ಕ್ಷೇತ್ರದಲ್ಲಿರುವ ಆಂತರಿಕ ಬಿಕ್ಕಟ್ಟನ್ನು ಸಂಪೂರ್ಣವಾಗಿ ಬಗೆಹರಿಸಲಿರುವ ಸುರ್ಜೇವಾಲ: ಹೆಬ್ಬಾಳಕರ

ಚನ್ನಮ್ಮನ ಕಿತ್ತೂರು(ನ.03):  ಡಿಸೆಂಬರ್‌ ತಿಂಗಳಲ್ಲಿ ರಾಜ್ಯದ 150 ಸ್ಥಾನಗಳಿಗೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಪಟ್ಟಿಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ಇಲ್ಲಿಯ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಸುರ್ಜೇವಾಲ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮುಖಂಡರು ಸಭೆ ಸೇರಿ ಬೆಳಗಾವಿಯ 18 ಕ್ಷೇತ್ರದಲ್ಲಿರುವ ಆಂತರಿಕ ಬಿಕ್ಕಟ್ಟನ್ನು ಸಂಪೂರ್ಣವಾಗಿ ಬಗೆಹರಿಸಲಿದ್ದಾರೆ ಎಂದು ಹೇಳಿದರು.

Add Asianetnews Kannada as a Preferred SourcegooglePreferred

ಅ.7 ರಂದು ಸೋಮವಾರ ಕಿತ್ತೂರು ಪಟ್ಟಣದ ಹೊರ ವಲಯದಲ್ಲಿ ನಡೆಯಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಹುಟ್ಟುಹಬ್ಬವನ್ನು ಅಭೂತ ಪೂರ್ವವಾಗಿ, ಪಕ್ಷಾತೀತವಾಗಿ ಆಚರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಒಳಗೊಂಡಂತೆ ಪಕ್ಷಾತೀತವಾಗಿ ರಾಜ್ಯದ ಪ್ರಮುಖ ಮುಖಂಡರು, ಮಠಾಧೀಶರು ವಿಶೇಷವಾಗಿ ಆಮಂತ್ರಿಸಲಾಗಿದೆ. ರಾಜ್ಯದ ಕ್ಷೇತ್ರಗಳಿಂದ ವಿನಯ ಕುಲಕರ್ಣಿ ಅಭಿಮಾನಿಗಳು ತಂಡೋಪತಂಡವಾಗಿ ಆಗಮಿಸಲಿದ್ದು, ಅಂದಾಜು 1.5 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಎಂದು ಹೇಳಿದ ಅವರು, ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಪಕ್ಷದ ಬ್ಯಾನರ್‌ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Bharat Jodo Yatra: ದೇಶದ ಜನರನ್ನು ಒಗ್ಗೂಡಿಸಲು ಭಾರತ ಜೋಡೋ ಪಾದಯಾತ್ರೆ: ಹೆಬ್ಬಾಳಕರ

ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಆ ದಿನ ಸಂಜೆ 4ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದೆ. 4 ರಿಂದ 6 ರವರೆಗೆ ಜಾನಪದ ಸಂಗೀತ ಕಾರ್ಯಕ್ರಮ, ನಂತರ ವೇದಿಕೆ 6 ರಿಂದ 8 ರ ವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಈ ಸಂದರ್ಭದಲ್ಲಿ ಚಿತ್ರನಟ ದರ್ಶನ ಆಗಮಿಸಲಿದ್ದಾರೆ. ನಂತರ ಜೀ ಕನ್ನಡದ ಖ್ಯಾತ ಕಲಾವಿದರಿಂದ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯದ ಖ್ಯಾತ ಸಾಹಿತಿಗಳು, ರೈತ ಮುಖಂಡರು ಪಕ್ಷಾತೀತವಾಗಿ ಆಗಮಿಸಲಿದ್ದಾರೆ. ಇದು ಬೆಳಗಾವಿ ಜಿಲ್ಲೆಯಲ್ಲಿಯೇ ಮಿನಿ ಸಿದ್ದರಾಮೋತ್ಸವ ಆಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಬಾಬಾಸಾಹೇಬ ಪಾಟೀಲ ಮಾತನಾಡಿ, 50 ಸಾವಿರದ ಆಸನದ ವ್ಯವಸ್ಥೆ ಮಾಡಲಾಗುವುದು, ಭವ್ಯ ವೇದಿಕೆ ನಿರ್ಮಾಣಗೊಳ್ಳಲಿದೆ. ಸೂಕ್ತ ಸ್ಥಳಗಳಲ್ಲಿಯೂ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. 12 ಸ್ಕ್ರೀನ್‌ ಅಳವಡಿಸಲಾಗುವುದು. ಬಂದ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಹೇಳಿದರು.