ಪೇಸಿಎಂ ಬಳಿಕ ಬುಕ್ ಮೈ ಸಿಎಂ ಅಭಿಯಾನ ಆರಂಭಿಸಿದ ಕಾಂಗ್ರೆಸ್, ತೆಲಂಗಾಣದಲ್ಲಿ ಸಂಚಲನ!
ಕರ್ನಾಟಕದಲ್ಲಿ ಪೇಸಿಎಂ ಅಭಿಯಾನ ಆರಂಭಿಸಿ ಭಾರಿ ಯಶಸ್ಸು ಕಂಡಿದ್ದ ಕಾಂಗ್ರೆಸ್ ಇದೀಗ ತೆಲಂಗಾಣ ಚುನಾವಣೆಗೆ ಬುಕ್ ಮೈ ಸಿಎಂ ಅಭಿಯಾನ ಆರಂಭಿಸಿದೆ. ಈ ಅಭಿಯಾನ ಬಿಆರ್ಎಸ್ ಸರ್ಕಾರ ಹಾಗೂ ಪಕ್ಷವನ್ನೇ ಅಲುಗಾಡಿಸಿದೆ.

ಬೆಂಗಳೂರು(ಸೆ.16) ಕರ್ನಾಟಕ ವಿಧಾನಸಭಾ ಚುನಾವಣೇ ವೇಳೆ ಕಾಂಗ್ರೆಸ್ ಪೇಸಿಎಂ ಅಭಿಯಾನ ಆರಂಭಿಸಿ ಬಿಜೆಪಿಯನ್ನು ಕಟ್ಟಿಹಾಕಿತ್ತು. ಕಾಂಗ್ರೆಸ್ ಅಭಿಯಾನ ಭಾರಿ ಯಶಸ್ಸು ಕಂಡಿತ್ತು. ಇದೀಗ ತೆಲಂಗಾಣದಲ್ಲೂ ಇದೇ ಪ್ಲಾನ್ ಅನುಸರಿಸುತ್ತಿರುವ ಕಾಂಗ್ರೆಸ್ ಹೊಸ ಅಭಿಯಾನ ಆರಂಭಿಸಿದೆ. ಬುಕ್ ಮೈ ಸಿಎಂ ಅಭಿಯಾನದ ಮೂಲಕ ತೆಲಂಗಾಣದಲ್ಲಿ ಕಾಂಗ್ರೆಸ್ ಹೊಸ ಸಂಚಲನ ಸೃಷ್ಟಿಸಿದೆ. ಈ ಕುರಿತು ಪೋಸ್ಟರ್ ಅಂಟಿಸಿರುವ ಕಾಂಗ್ರೆಸ್, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ತಲೆನೋವು ಹೆಚ್ಚಿಸಿದೆ.
ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಮೇಲೆ 30 ಪರ್ಸೆಂಟ್ ಕಮಿಷನ್, ಭ್ರಷ್ಟಾಚಾರ ಆರೋಪ ಮಾಡಿರುವ ಕಾಂಗ್ರೆಸೆ್ ಕ್ರಿಯಾತ್ಮಕ ಪೋಸ್ಟರ್ ಅಂಟಿಸಿದೆ. ಬುಕ್ ಮೈ ಸಿಎಂ ಕೆಳಗೆ ಕೆ ಚಂದ್ರಶೇಖರ್ ರಾವ್ ಫೋಟೋ ಬಳಸಲಾಗಿದೆ. ರಾವ್ ಕಪ್ಪು ಗ್ಲಾಸ್ ಧರಿಸಿದ್ದು, ಈ ಗ್ಲಾಸ್ ಮೇಲೆ 30 ಪರ್ಸೆಂಟ್ ಎಂದು ಬರೆಯಲಾಗಿದೆ. ಇಷ್ಟೇ ಅಲ್ಲ ಥೀಯೆಟರ್ನಲ್ಲಿ ಹಗರಣ 2023 ಎಂದು ಬರೆಯಲಾಗಿದೆ. ಉತ್ತಮ ಅನುಭವಕ್ಕಾಗಿ 3ಡಿ ಶೇಕಡಾ 30 ಪರ್ಸೆಂಟ್ ಗ್ಲಾಸ್ ಬಳಕೆ ಮಾಡಿ ಎಂದು ಬರೆದಿದ್ದಾರೆ.
ಸಿನಿಮಾ ಸೇರಿದಂತೆ ಇತರ ಮನರಂಜನೆ ಟಿಕೆಟ್ ಬುಕಿಂಗ್ ಮಾಡುವ ತಾಣದ ಪರಿಕಲ್ಪನೆಯಲ್ಲಿ ಈ ಅಭಿಯಾನ ಆರಂಭಿಸಲಾಗಿದೆ. ಇದೀಗ ತೆಲಂಗಾಣದಲ್ಲಿ ಕಾಂಗ್ರೆಸ್ ಅತೀ ದೊಡ್ಡ ಅಭಿಯಾನದ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದೆ. ಇತ್ತ ಬಿಆರ್ಎಸ್ ಪಕ್ಷ ತಿರುಗೇಟು ನೀಡುವ ಪ್ರಯತ್ನ ಮಾಡಿದರೂ ಇದೀಗ ಈ ಅಭಿಯಾನ ದೇಶಾದ್ಯಂತ ಸುದ್ದಿಯಾಗಿದೆ.
ಸೆ.17ರಿಂದ 19 ರವರೆಗೆ ಹೈದರಾಬಾದ್ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಹೈದರಾಬಾದ್ನಲ್ಲಿ ಸೇರಿದ್ದಾರೆ. ಕರ್ನಾಟಕ ಮಾದರಿಯಲ್ಲೇ ತೆಲಂಗಾಣದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಘೋಷಣೆ ಮಾಡುವ ಸಾಧ್ಯತೆಯಿದೆ. ಈಗಾಗಲೇ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂದಾಗಿ ಬಿಜೆಪಿಯೂ ಸಹ ಇದನ್ನು ಅನುಕರಣೆ ಮಾಡಲು ಶುರು ಮಾಡಿದೆ. ಇದೊಂದು ಯಶಸ್ವಿ ಮಾದರಿಯಾಗಿ ಬದಲಾಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸಮ್ಮುಖದಲ್ಲೇ ತೆಲಂಗಾಣದಲ್ಲಿ ಗ್ಯಾರಂಟಿಗಳನ್ನು ಘೋಷಿಸಲು ಕಾಂಗ್ರೆಸ್ ಸಜ್ಜಾಗಿದೆ ಎಂದು ತಿಳಿದುಬಂದಿದೆ.
ಡಿನ್ನರ್ ಪಾಲಿಟಿಕ್ಸ್ ನೆಪದಲ್ಲಿ ಆಪ್ತರ ಜತೆ ಸಿಎಂ ಮಾತುಕತೆ: ಕುತೂಹಲ ಮೂಡಿಸಿದ ಸಿದ್ದರಾಮಯ್ಯ ನಡೆ..!
ಕಾಂಗ್ರೆಸ್ ಪಕ್ಷದಲ್ಲಿ ನಿರ್ಧಾರ ಕೈಗೊಳ್ಳುವ ಪರಮೋಚ್ಚ ಸಮಿತಿಯಾಗಿರುವ ಸಿಡಬ್ಲ್ಯುಸಿಗೆ ಖರ್ಗೆ ಅಧ್ಯಕ್ಷರಾಗಿದ್ದು, 39 ಸದಸ್ಯರಿದ್ದಾರೆ. 32 ಶಾಶ್ವತ ಆಹ್ವಾನಿತರು, 13 ವಿಶೇಷ ಆಹ್ವಾನಿತರು ಕೂಡ ಸಮಿತಿಯಲ್ಲಿದ್ದಾರೆ. ಅವರು ಹಾಗೂ ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರು ಶನಿವಾರದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.