ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷದಲ್ಲಿ ನಡೆದಿರುವ ಪೈಪೋಟಿಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕಾಂಗ್ರೆಸ್‌ನ ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂದರೆ ಇರುವವಳು ಒಬ್ಬಳು ಹುಡುಗಿ, ಹತ್ತು ಜನ ಗಂಡಂದಿರು ರೆಡಿಯಾಗಿ ಕುಳಿತಿರುವ ಹಾಗಿದೆ ಎಂದು ಹೇಳಿದ್ದಾರೆ. 

ಬಾಗಲಕೋಟೆ (ಡಿ.19): ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷದಲ್ಲಿ ನಡೆದಿರುವ ಪೈಪೋಟಿಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕಾಂಗ್ರೆಸ್‌ನ ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂದರೆ ಇರುವವಳು ಒಬ್ಬಳು ಹುಡುಗಿ, ಹತ್ತು ಜನ ಗಂಡಂದಿರು ರೆಡಿಯಾಗಿ ಕುಳಿತಿರುವ ಹಾಗಿದೆ ಎಂದು ಹೇಳಿದ್ದಾರೆ. ಬಾಡಗಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಗಳ ಸ್ಥಾನಕ್ಕೆ ಈ ರೀತಿ ಸ್ಪರ್ಧೆ ಇದ್ದರೆ ಜೆಡಿಎಸ್‌ನಲ್ಲಿ ಹಾಗಿಲ್ಲ. ನಮ್ಮಲ್ಲಿ ಓರ್ವ ಮುಖ್ಯಮಂತ್ರಿ ಅಭ್ಯರ್ಥಿ ಮಾತ್ರ ಇದ್ದಾರೆ. ಅದು ಕುಮಾರಸ್ವಾಮಿ ಮಾತ್ರ. 

Add Asianetnews Kannada as a Preferred SourcegooglePreferred

ಹೀಗಾಗಿ, ಅವರ ಹೆಸರನ್ನು ಡಿಕ್ಲೇರ್‌ ಮಾಡಿ ನಾವು ಪ್ರಚಾರಕ್ಕೆ ಹೊರಟಿದ್ದೇವೆ ಎಂದು ತಿಳಿಸಿದರು. ಮಾಜಿ ಸಚಿವ ಎಸ್‌.ಆರ್‌.ಪಾಟೀಲ ಅವರ ಪುತ್ರಿಯ ಮದುವೆಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದರು. ಎಸ್‌.ಆರ್‌.ಪಾಟೀಲ ಅವರನ್ನು ಜೆಡಿಎಸ್‌ಗೆ ಅಹ್ವಾನಿಸಿರುವ ಕುರಿತು ಉತ್ತರಿಸಿದ ಇಬ್ರಾಹಿಂ, ಮನಸ್ಸು ಕೂಡಿದಾವ, ದೇಹಗಳು ಪಕ್ಕ ಪಕ್ಕ ಬರಬೇಕು. ನೋಡೋಣ ಕಾಲಾಯ ತಸ್ಮೈ ನಮಃ ಎಂದರಲ್ಲದೇ, ಕಾಂಗ್ರೆಸ್‌ ಹಿರಿಯ ನಾಯಕರಾಗಿದ್ದರೂ ಅವರಿಗೆ ಪಕ್ಷದಲ್ಲಿ ಅವಮಾನವಾಗಿದೆ. ವರ ನಿರ್ಣಯದ ಬಗ್ಗೆ ಮುಂದಿನ ದಿನಗಳವರೆಗೆ ಕಾದು ನೋಡೋಣ ಎಂದರು.

ಬಸ್‌ ಯಾತ್ರೆ ವಿಚಾರದಲ್ಲಿ ಪಕ್ಷದ ನಿರ್ಧಾರವೇ ಅಂತಿಮ: ಡಿ.ಕೆ.ಶಿವಕುಮಾರ್‌

ಮಹಾರಾಷ್ಟ್ರ ಗಡಿ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವರಿಗೆ ಹೊಟ್ಟೆ, ಬಟ್ಟೆ, ಮೊಟ್ಟೆ, ತತ್ತಿಯಾಯಿತು. ಇದೀಗ ಗಡಿ ವಿಷಯವನ್ನು ಹಿಡಿದುಕೊಂಡಿದ್ದಾರೆ. ಈಗಾಗಲೇ ಮಹಾಜನ ವರದಿ ತೀರ್ಪು ಬಂದಾಗಿದೆ. ಕರ್ನಾಟಕದಲ್ಲಿ ಮರಾಠಿಗರೂ ಆರಾಮಾಗಿದ್ದಾರೆ. ಬೆಳಗಾವಿಯಲ್ಲಿ ವಿವಾದವೇ ಇಲ್ಲ ಎಂದ ಇಬ್ರಾಹಿಂ, ಮೊದಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಹದಾಯಿ ಸಮಸ್ಯೆಬಗೆಹರಿಸಲಿ. ನಾವು ನಮ್ಮ ನಾಡು, ನಮ್ಮ ನೀರು, ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಸಂಸದೀಯ ಮಂಡಳಿ ಸಭೆಯಲ್ಲಿ ದಳ ಅಭ್ಯರ್ಥಿ ಆಯ್ಕೆ: ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಸಂಸದೀಯ ಮಂಡಳಿ ಸಭೆಯಲ್ಲಿ ಅಂತಿಮಗೊಳಿಸಲಾಗುವುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಲಾಗುತ್ತಿದೆ. ಸಂಭವನೀಯ ಅಭ್ಯರ್ಥಿಗಳಿಗೆ ಈಗಾಗಲೇ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಕೆಲವು ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆಯಾಗಿದೆ. ಆದರೆ, ನಾವು ಹೇಳಿದವರೇ ಅಂತಿಮವಲ್ಲ. ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳು ಬದಲಾಗಬಹುದು ಎಂದು ಈಗಾಗಲೇ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ ಎಂದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರಿಗೆ ಸಾಲದಿಂದ ಮುಕ್ತಿ: ಸಿ.ಎಂ.ಇಬ್ರಾಹಿಂ

ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಗಡಿ ಸಮಸ್ಯೆ ಈಗಾಗಲೇ ಮುಗಿದು ಹೋಗಿರುವ ವಿಚಾರ. ಸಮಸ್ಯೆಗೆ ಸಮಿತಿ ರಚನೆ ಮಾಡುವ ಅವಶ್ಯಕತೆ ಇರಲಿಲ್ಲ. ಮಹಾಜನ್‌ ವರದಿಯೇ ಅಂತಿಮ. ಕನ್ನಡಿಗರು, ಮರಾಠಿಗರು ಸಹೋದರರಂತೆ ಬಾಳುತ್ತಿದ್ದಾರೆ. ಭಾವನಾತ್ಮಕ ವಿಚಾರಗಳನ್ನು ಕೆರಳಿಸುತ್ತಿರುವುದು ಬಿಜೆಪಿ. ಚುನಾವಣೆಗಾಗಿ ಸಮಿತಿ ಮಾಡಿದ್ದಾರೆ. ನಾವು ಭಾವನಾತ್ಮಕ ವಿಚಾರಗಳ ಮೇಲೆ ರಾಜಕೀಯ ಮಾಡುವುದಿಲ್ಲ. ನಾವು ಯಾರ ಶಕ್ತಿಯ ಮೇಲೂ ಅವಲಂಬಿತವಾಗಿಲ್ಲ. ರಾಜ್ಯದಲ್ಲಿ ಜನತಾದಳಕ್ಕೆ ತನ್ನದೇ ಆದ ಶಕ್ತಿ ಇದೆ. ಅದರ ಆಧಾರದ ಮೇಲೆ ಹೊರಾಟ ಮಾಡುತ್ತೇವೆ ಎಂದು ತಿಳಿಸಿದರು.