Asianet Suvarna News Asianet Suvarna News

‘ರೆಬೆಲ್‌’ ಶಾಸಕರ ತಣಿಸಲು ಸಂಪುಟ ದರ್ಜೆ ಹುದ್ದೆ: ಸಿಎಂ ಸಲಹೆಗಾರರಾಗಿ ಬಿಆರ್‌ಪಿ, ರಾಯರೆಡ್ಡಿ ನೇಮಕ

‘ರೆಬೆಲ್‌’ ಶಾಸಕರ ಅಸಮಾಧಾನ ತಣಿಸುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಶಾಸಕರಾದ ಬಿ.ಆರ್‌. ಪಾಟೀಲ್‌, ಬಸವರಾಜ ರಾಯರೆಡ್ಡಿ ಅವರನ್ನು ಮುಖ್ಯಮಂತ್ರಿಗಳ ಸಲಹೆಗಾರರನ್ನಾಗಿ ನೇಮಿಸಿದರೆ, ಹಿರಿಯ ಶಾಸಕ ಆರ್‌.ವಿ.ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿ ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸಿ ಆದೇಶಿಸಲಾಗಿದೆ.

CM Siddaramaiah To Give Important Position To 3 Senior Mlas RV Deshpande Basavaraj Rayareddy BR Patil gvd
Author
First Published Dec 30, 2023, 4:00 AM IST

ಬೆಂಗಳೂರು (ಡಿ.30): ‘ರೆಬೆಲ್‌’ ಶಾಸಕರ ಅಸಮಾಧಾನ ತಣಿಸುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಶಾಸಕರಾದ ಬಿ.ಆರ್‌. ಪಾಟೀಲ್‌, ಬಸವರಾಜ ರಾಯರೆಡ್ಡಿ ಅವರನ್ನು ಮುಖ್ಯಮಂತ್ರಿಗಳ ಸಲಹೆಗಾರರನ್ನಾಗಿ ನೇಮಿಸಿದರೆ, ಹಿರಿಯ ಶಾಸಕ ಆರ್‌.ವಿ.ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿ ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸಿ ಆದೇಶಿಸಲಾಗಿದೆ.

ಆಳಂದ ಶಾಸಕ ಬಿ.ಆರ್‌.ಪಾಟೀಲ್‌ ಅವರನ್ನು ಮುಖ್ಯಮಂತ್ರಿಗಳ ಸಲಹೆಗಾರರನ್ನಾಗಿ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಈ ಇಬ್ಬರು ಶಾಸಕರು ಈ ಹಿಂದೆ ಕೆಲ ಸಚಿವರ ಕಾರ್ಯವೈಖರಿ ವಿರುದ್ಧ ನೇರವಾಗಿ ಅಸಮಧಾನ ವ್ಯಕ್ತಪಡಿಸಿದ್ದಲ್ಲದೆ, ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದಿದ್ದರು. ಅದರಲ್ಲೂ ಬಿ.ಆರ್‌. ಪಾಟೀಲ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯನ್ನೂ ಒಡ್ಡಿದ್ದರೂ. ಇದೀಗ ಈ ಇಬ್ಬರನ್ನೂ ಸಮಾಧಾನ ಪಡಿಸುವ ಸಲುವಾಗಿ ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸಲಾಗಿದೆ.

ದೇಶಪಾಂಡೆಗೂ ಸ್ಥಾನಮಾನ: ಸಚಿವ ಸ್ಥಾನ ಕೈತಪ್ಪಿದ್ದಕ್ಕಾಗಿ ಸರ್ಕಾರದೊಂದಿಗೆ ಈವರೆಗೆ ಅಂತರ ಕಾಯ್ದುಕೊಂಡಿದ್ದ ಆರ್‌.ವಿ. ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗ-3ರ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಹಿಂದೆ ಮೊದಲ ಆಡಳಿತ ಸುಧಾರಣಾ ಆಯೋಗಕ್ಕೆ ಹಾರನಹಳ್ಳಿ ರಾಮಸ್ವಾಮಿ ಅಧ್ಯಕ್ಷರಾಗಿದ್ದರು. ಎರಡನೇ ಆಯೋಗಕ್ಕೆ ಸರ್ಕಾರ ಮಾಜಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅವರ ಅವಧಿ ಪೂರ್ಣಗೊಂಡಿದ್ದು, ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಅಂತಿಮವರದಿ ಸಲ್ಲಿಸಬೇಕಿದೆ. ಅದರ ನಡುವೆಯೇ ಆಡಳಿತ ಸುಧಾರಣಾ ಆಯೋಗಕ್ಕೆ ಆರ್‌.ವಿ. ದೇಶಪಾಂಡೆ ಅವರನ್ನು ನೇಮಿಸಲಾಗಿದೆ.

ಯತ್ನಾಳ್‌ ಮಾಹಿತಿ ಮೇಲೆ ತನಿಖೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಜಗದೀಶ್‌ ಶೆಟ್ಟರ್‌

ಆಡಳಿತ ಸುಧಾರಣಾ ಆಯೋಗ-2ರ ಅಧ್ಯಕ್ಷರಾಗಿರುವ ಟಿ.ಎಂ. ವಿಜಯಭಾಸ್ಕರ್‌ ಅವರ ಅವಧಿ ಈಗಾಗಲೇ ಪೂರ್ಣಗೊಂಡಿದೆ. ಆಯೋಗ-2 ಈವರೆಗೆ 30 ಇಲಾಖೆಗಳಿಗೆ ಸಂಬಂಧಿಸಿದಂತೆ 6 ವರದಿಯನ್ನು ಸಲ್ಲಿಸಿದೆ. ಇದೀಗ ಏಳನೇ ವರದಿಯನ್ನು ಸಿದ್ಧಪಡಿಸಿರುವ ಆಯೋಗ-2 ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಅದಾದ ನಂತರ ಆಯೋಗವು ಬರ್ಖಾಸ್ತ್ ಆಗಲಿದ್ದು, ಅದರ ಜಾಗಕ್ಕೆ ಆರ್‌.ವಿ. ದೇಶಪಾಂಡೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ದೇಶಪಾಂಡೆ ನೇತೃತ್ವದಲ್ಲಿ ಆಯೋಗವು ಆಡಳಿತ ಸುಧಾರಣಾ ಆಯೋಗ-2 ಸಲ್ಲಿಸುವ 7 ವರದಿಗಳ ಪರಾಮರ್ಶೆ ಮಾಡುವುದು ಸೇರಿ ಇನ್ನಿತರ ಕಾರ್ಯಗಳನ್ನು ಮಾಡಲಿದೆ.

Follow Us:
Download App:
  • android
  • ios