Asianet Suvarna News Asianet Suvarna News

ಬದುಕಿರುವವರೆಗೂ ಬಿಜೆಪಿ ಜತೆ ಸೇರಲ್ಲ ಎಂದಿದ್ದರು ದೇವೇಗೌಡರು: ಸಿಎಂ ಸಿದ್ದರಾಮಯ್ಯ

ಜ್ಯಾತ್ಯತೀತ ಜನತಾದಳದ (ಜೆಡಿಎಸ್) ಸಂಸ್ಥಾಪಕ ಸದಸ್ಯ ಹಾಗೂ ಮೊದಲ ಅಧ್ಯಕ್ಷ ನಾನು. ನಾನು ಬದುಕಿರುವವರೆಗೂ ಬಿಜೆಪಿ ಜತೆ ಸೇರಲ್ಲ ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ಹೇಳಿದ್ದರು. ಇದೀಗ ಬಿಜೆಪಿ ಜತೆಯೇ ಕೈ ಜೋಡಿಸಿದ್ದಾರೆ. 

CM Siddaramaiah Slams On HD Devegowda Over BJP JDS Alliance gvd
Author
First Published Oct 1, 2023, 9:23 PM IST

ಬೆಂಗಳೂರು (ಅ.01): ಜ್ಯಾತ್ಯತೀತ ಜನತಾದಳದ (ಜೆಡಿಎಸ್) ಸಂಸ್ಥಾಪಕ ಸದಸ್ಯ ಹಾಗೂ ಮೊದಲ ಅಧ್ಯಕ್ಷ ನಾನು. ನಾನು ಬದುಕಿರುವವರೆಗೂ ಬಿಜೆಪಿ ಜತೆ ಸೇರಲ್ಲ ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ಹೇಳಿದ್ದರು. ಇದೀಗ ಬಿಜೆಪಿ ಜತೆಯೇ ಕೈ ಜೋಡಿಸಿದ್ದಾರೆ. ಅಲ್ಲಿ ಹೋಯಿತು ಜ್ಯಾತ್ಯತೀತ ಮೌಲ್ಯ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 1999ರಲ್ಲಿ ಜನತಾ ಪಕ್ಷ ಇಬ್ಬಾಗವಾದಾಗ ಒಂದು ತಂಡ ಬಿಜೆಪಿ ಬೆಂಬಲಿಸಿ ಎನ್‌ಡಿಎ ಮೈತ್ರಿಕೂಟ ಸೇರಿಕೊಂಡರು. ಬಿಜೆಪಿಯನ್ನು ಬೆಂಬಲಿಸದೆ ಜ್ಯಾತ್ಯತೀತ ಸಿದ್ಧಾಂತಗಳಿಗೆ ಕಟ್ಟುಬಿದ್ದಿದ್ದರಿಂದ ಜೆಡಿಎಸ್‌ಗೆ ಜ್ಯಾತ್ಯತೀತ ಎಂಬ ಹೆಸರು ಸೇರಿಕೊಂಡಿತ್ತು. 

ಈಗ ಏನಾಗಿದೆ? ಎಂದು ಪ್ರಶ್ನಿಸಿದರು. ಎಚ್‌.ಬಿ.ಆರ್‌. ಬಡಾವಣೆಯಲ್ಲಿ ಬ್ಯಾರೀಸ್‌ ವೆಲ್ ಫೇರ್‌ ಅಸೋಸಿಯೇಷನ್‌ ನೂತನವಾಗಿ ನಿರ್ಮಿಸಿರುವ ಬ್ಯಾರೀಸ್ ಸೌಹಾರ್ದ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿ.ಎ. ಮೊಯ್ದೀನ್ ಅವರು ಸೌಹಾರ್ದತೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ಪರಸ್ಪರ ಅಪನಂಬಿಕೆ ಮತ್ತು ದ್ವೇಷವನ್ನು ಬಿತ್ತುವವರು ಈ ದೇಶದ ಅವನತಿಗೆ ಕಾರಣ ಆಗುತ್ತಾರೆ. ನಮ್ಮ ಸಂವಿಧಾನ ಜಾತ್ಯತೀತತೆಯನ್ನು , ಸೌಹಾರ್ದತೆಯನ್ನು ಎತ್ತಿ ಹಿಡಿದಿದೆ. ಭಾರತದಲ್ಲಿ ಜಾತ್ಯತೀತ ಮೌಲ್ಯವನ್ನು ಮತ್ತು ಸಂವಿಧಾನದ ಮೌಲ್ಯವನ್ನು ತನ್ನ ಮೌಲ್ಯವಾಗಿ ಆಚರಿಸುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.

ಕಾವೇರಿ ವಿಚಾರದಲ್ಲಿ ರೈತರ ಕತ್ತು ಕುಯ್ಯುವ ಕೆಲಸ ಮಾಡಬೇಡಿ: ಜೋಗಿ ಪ್ರೇಮ್‌

ಉಡುಪಿ-ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್‌ ಕೈ ಹಿಡಿಯಿರಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ,  ವಿಧಾನಸಭೆಯಲ್ಲಿ ಬೆಂಬಲಿಸಿದ ನಿಮಗೆ 1 ಕೋಟಿ ನಮಸ್ಕಾರ. ಲೋಕಸಭೆ ಚುನಾವಣೆ ವೇಳೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬ್ಯಾರಿ ಸಮುದಾಯ ಕಾಂಗ್ರೆಸ್ ಪಕ್ಷದ ಕೈ ಹಿಡಿಯಬೇಕು. ಎಲ್ಲಾ ಧರ್ಮದವರ ಜೊತೆ ಸ್ನೇಹಭಾವದಿಂದ ಇರುವ ಹಾಗೂ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಸೌಹಾರ್ದಯುತ ಗುಣ ಈ ಸಮುದಾಯಕ್ಕೆ ಇದೆ. ನಾಡಿನಲ್ಲಿ ಶಾಂತಿ-ಸೌಹಾರ್ದತೆಗಾಗಿ ಕಾಂಗ್ರೆಸ್‌ ಬೆಂಬಲಿಸಿ ಎಂದರು.

ಬಿಜೆಪಿ ಸರ್ಕಾರ ಇದ್ದ ವೇಳೆ ಹೂಡಿಕೆದಾರರ ಸಮಾವೇಶದ ಮೂಲಕ 10 ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಹರಿದು ಬಂದಿತು ಎಂದು ಹೇಳಿದ್ದರು. ಆದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಒಬ್ಬರೂ ಬಂದಿರಲಿಲ್ಲ. ಗಲ್ಫ್ ಸೇರಿದಂತೆ ಹೊರದೇಶಗಳಿಗೆ ಹೋಗದೆ, ಹುಟ್ಟಿದ ಊರಿನಲ್ಲಿ ಉದ್ಯೋಗ ಸೃಷ್ಟಿ ಮಾಡಿ, ಪ್ರತಿಭಾ ಪಲಾಯನ ರಾಜ್ಯದ ಅಭಿವೃದ್ಧಿಗೆ ಮಾರಕ ಎಂದು ಸಲಹೆ ನೀಡಿದರು.

ಯು.ಟಿ.ಖಾದರ್ ಎಲ್ಲಾ ಮಂತ್ರಿಗಳಿಗಿಂತ ಮೇಲೆ ಕುಳಿತಿದ್ದಾರೆ: ಸ್ಪೀಕರ್ ಆಗಿರುವಂತಹ ಯು.ಟಿ.ಖಾದರ್ ಅವರಿಗೆ ಮಂತ್ರಿ ಸ್ಥಾನ ನೀಡಿ ಎಂದು ಮನವಿ ಮಾಡಿದ್ದೀರಿ, ಅವರು ನಮಗಿಂತ ಎತ್ತರದ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ. ಎಸ್.ಎಂ.ಕೃಷ್ಣ, ಜಗದೀಶ್ ಶೆಟ್ಟರ್ ಅವರುಗಳು ಸ್ಪೀಕರ್ ಆಗಿದ್ದರು. ಮುಂದೇನಾದರು ಎಂಬುದು ಎಲ್ಲರಿಗೂ ಗೊತ್ತಿದೆ. ಯಾರ ಹಣೆಯಲ್ಲಿ ಏನು ಬರೆದಿರುತ್ತದೆ ಎಂದು ಯಾರಿಗೂ ತಿಳಿದಿಲ್ಲ, ನೀವು ನಮ್ಮನ್ನೆಲ್ಲಾ ಮೀರಿಸಿ ಮುಂದೊಂದು ದಿನ ಬೆಳೆಯಬಹುದು ಎಂದು ಪರೋಕ್ಷವಾಗಿ ಯು.ಟಿ. ಖಾದರ್‌ ಅವರಿಗೆ ಮುಖ್ಯಮಂತ್ರಿ ಅವಕಾಶವಿದೆ ಎಂದು ಹೇಳಿದರು.

ಇದಕ್ಕೂ ಮೊದಲು ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಸಚಿವರಾದ ಕೆ.ಜೆ. ಜಾರ್ಜ್, ದಿನೇಶ್‌ ಗುಂಡೂರಾವ್‌ ಆಸನ ಬಿಟ್ಟುಕೊಟ್ಟರು. ಶಿವಕುಮಾರ್‌ ಆಗಮಿಸಿದಾಗ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರೂ ಸಿದ್ದರಾಮಯ್ಯ ಆಹ್ವಾನ ಪತ್ರಿಕೆ ನೋಡಿಕೊಂಡು ಸುಮ್ಮನಿದ್ದರು. ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಇಂಧನ ಸಚಿವ ಕೆ.ಜೆ.ಜಾರ್ಜ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಬ್ಯಾರೀಸ್ ಸೌಹಾರ್ದ ಭವನ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಮಹಮದ್ ಬ್ಯಾರಿ ಸೇರಿ ಹಲವರು ಹಾಜರಿದ್ದರು.

ಕಾವೇರಿ ನೀರಿನ ವಿಚಾರದಲ್ಲಿ ಪ್ರಾಧಿಕಾರದಿಂದ ಪದೇಪದೇ ಅನ್ಯಾಯ: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

ಕಾನೂನು ಕೈಗೆತ್ತಿಕೊಂಡರೆ ಕ್ರಮ: ನಮ್ಮ ಆಡಳಿತದಲ್ಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ. ಎಷ್ಟೇ ರಾಜಕೀಯ ಶಕ್ತಿ ಹೊಂದಿದ್ದರೂ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಎಲ್ಲಾ ಜಾತಿ, ಧರ್ಮದವರಿಗೂ ಅವರ ಸಂವಿಧಾನಬದ್ದ ಹಕ್ಕುಗಳನ್ನು ಆಚರಿಸಲು ಅವಕಾಶವಿದೆ. ಇದಕ್ಕೆ ಯಾರೇ ತೊಂದರೆ ಕೊಡ್ಟರೂ ಕ್ರಮ ಖಚಿತ ಎಂದು ಎಚ್ಚರಿಸಿದರು.

Follow Us:
Download App:
  • android
  • ios