ಕೊರೋನಾದಿಂದ ಗುಣಮುಖರಾದ ಸಿಎಂಗೆ ಎದುರಾದ 2 ಬಹುದೊಡ್ಡ ಸವಾಲುಗಳು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು (ಸೋಮವಾರ) ಡಿಸ್ಚಾರ್ಜ್ ಆಗಿದ್ದಾರೆ. ಆದರೂ, ಮುಂದಿನ ಒಂದು ವಾರಗಳ ಕಾಲ ಕ್ವಾರಂಟೀನ್ಗೆ ಒಳಗಾಗಬೇಕಾಗಿದ್ದು, ಬಿಎಸ್ವೈ ಮುಂದೆ ದೊಡ್ಡ ಸವಾಲುಗಳು ಎದುರಾಗಿವೆ.
ಬೆಂಗಳೂರು, (ಆ.10): ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು (ಸೋಮವಾರ) ಡಿಸ್ಚಾರ್ಜ್ ಆಗಿದ್ದಾರೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕಳೆದ ಭಾನುವಾರ ದಾಖಲಾಗಿದ್ದ ಸಿಎಂ ಯಡಿಯೂರಪ್ಪಗೆ ನಿನ್ನೆ ಕೊರೋನಾ ಪರೀಕ್ಷೆ ಮಾಡಿದ್ದು, ಅದರಲ್ಲಿ ನೆಗೆಟಿವ್ ರಿಪೋರ್ಟ್ ಬಂದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ. ಆದರೂ, ಮುಂದಿನ ಒಂದು ವಾರಗಳ ಕಾಲ ಕ್ವಾರಂಟೀನ್ಗೆ ಒಳಗಾಗಬೇಕಾಗಿದೆ.
ಚಿತ್ರಗಳು: ಕೊರೋನಾ ಗೆದ್ದ ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್
ಹೌದು....ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಸಿಎಂ ಬಿಎಸ್ವೈ ಇನ್ನು ಕೆಲ ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿ ಇರಲು ನಿರ್ಧರಿಸಿದ್ದು, ಸರ್ಕಾರಿ ನಿವಾಸ ಕಾವೇರಿಯಿಂದಲೇ ಆಡಳಿತ ನಿರ್ವಹಿಸಲಿದ್ದಾರೆ.
ಬಿಎಸ್ವೈ ಮುಂದೆ ದೊಡ್ಡ ಸವಾಲು
ಸದ್ಯ ಸೋಂಕಿನಿಂದ ಗುಣಮುಖರಾಗಿರುವ ಸಿಎಂಗೆ ಒಂದೆಡೆ ಪ್ರವಾಹ ಮತ್ತೊಂದೆಡೆ ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸುವ ಬಹುದೊಡ್ಡ ಸವಾಲು ಎದುರಾಗಿದೆ.
ಅದೇನೋ ಏನೋ ಯಡಿಯೂರಪ್ಪ ಮುಖ್ಯಮಂತ್ರಿಯಾದಗಲೇ ರಾಜ್ಯದಲ್ಲಿ ಒಂದಿಲ್ಲೊಂದು ಅನಾಹುತಗಳು ನಡೆಯುತ್ತಲೇ ಇರುತ್ತವೆ. ಮೈತ್ರಿ ಸರ್ಕಾರ ಪತನದ ಬಳಿಕ ಸಿಎಂ ಆದಗಲೇ ರಾಜ್ಯದಲ್ಲಿ ಪ್ರವಾಹ ಉಂಟಾಯ್ತು. ಬಳಿಕ ಕೊರೋನಾ ಮಹಾಮಾರಿ ಅಂಟಿಕೊಂಡಿತು. ಇದೀಗ ಮತ್ತೆ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಇದನ್ನು ಯಾವ ರೀತಿಯಲ್ಲಿ ನಿಭಾಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.