2ನೇ ಹಂತದ ಅನ್ಲಾಕ್, ನಾಯಕತ್ವ ಬದಲಾವಣೆ ಬಗ್ಗೆ ಸಿಎಂ ಮಹತ್ವದ ಹೇಳಿಕೆ
* ಎರಡನೇ ಹಂತದ ಅನ್ಲಾಕ್ ವಿಚಾರದ ಬಗ್ಗೆ ಸಿಎಂ ಪ್ರತಿಕ್ರಿಯೆ
* ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕ ಪ್ರವಾಸದ ಬಗ್ಗೆ ಸಿಎಂ ಮಾತು
* ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದ ಸಿಎಂ
ಬೆಂಗಳೂರು, (ಜೂನ್.15): ಎರಡು ದಿನ ಪರಿಸ್ಥಿತಿ ನೋಡಿಕೊಂಡು ಎರಡನೇ ಹಂತದ ಅನ್ಲಾಕ್ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಖುದ್ದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಇಂದು (ಮಂಗಳವಾರ) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಧಾರಣೆ ಆಗಿರುವುದನ್ನು ಯೋಚನೆ ಮಾಡಿ, ಎರಡನೇ ಹಂತದ ಅನ್ಲಾಕ್ ಬಗ್ಗೆ ನಿರ್ಧಾರ ಮಾಡುತ್ತೇವೆ. ಎರಡನೇ ಹಂತದಲ್ಲಿ ಯಾವುದಕ್ಕೆಲ್ಲ ವಿನಾಯಿತಿ ಕೊಡಬಹುದು ಎಂಬುದರ ಬಗ್ಗೆ ಯೋಚನೆ ಮಾಡಿ ನಿರ್ಧರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ನಾಯಕತ್ವ ಬದಲಾವಣೆ: ಬಿಜೆಪಿ ಪಾಳದಲ್ಲಿ ಬಿರುಸಿನ ಚಟುವಟಿಕೆ
ಇನ್ನು ರಾಜ್ಯಕ್ಕೆ ಅರುಣ್ಸಿಂಗ್ ಜೊತೆಗೆ ಮತ್ತೊಬ್ಬ ವೀಕ್ಷಕರು ಬರಬೇಕು ಎಂಬ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅರುಣ್ಸಿಂಗ್ ನಾಳೆ (ಜೂನ್.16) ರಾಜ್ಯಕ್ಕೆ ಬರುತ್ತಿದ್ದಾರೆ. ಎಲ್ಲಾ ಶಾಸಕರು, ಸಂಸದರ ಜೊತೆ ಚರ್ಚೆ ಮಾಡುತ್ತಾರೆ. ಯಾವುದೇ ಗೊಂದಲ ಇಲ್ಲ. ಯಾರು ಬೇಕಾದರೂ ಅವರನ್ನು ಭೇಟಿ ಮಾಡಬಹುದು ಎಂದರು.
ಅವರು ಗೆಸ್ಟ್ಹೌಸ್ನಲ್ಲಿದ್ದು ಎಲ್ಲಾ ವಿಷಯಗಳ ಬಗ್ಗೆ ಸುದೀರ್ಘವಾಗಿ ತಿಳಿದುಕೊಳ್ಳುತ್ತಾರೆ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಗೊಂದಲ ಇಲ್ಲ. ನಾನು ಕೂಡ ಅವರಿಗೆ ಎಲ್ಲಾ ರೀತಿಯ ಸಹಕಾರ ಕೊಡುತ್ತೇನೆ ಎಂದು ತಿಳಿಸಿದರು.
ಯಾರೋ ಒಂದಿಬ್ಬರಿಗೆ ಬೇಸರ ಇರಬಹುದು. ಆದರೆ ಅವರನ್ನು ಕರೆದು ಅರುಣ್ಸಿಂಗ್ ಮಾತಾಡುತ್ತಾರೆ. ನಾಯಕತ್ವದ ಬಗ್ಗೆಯಾಗಲಿ, ಬೇರೆ ವಿಷಯದ ಬಗ್ಗೆಯಾಗಲಿ ಯಾವುದೇ ಗೊಂದಲ ಇಲ್ಲ. ನಾವು ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎಂದು ಹೇಳಿದರು.