ಡಿನ್ನರ್ ಪಾರ್ಟಿ ಆಯೋಜಿಸಿದ ಸಿಎಂ: ಕುತೂಹಲ ಮೂಡಿಸಿದ ಬಿಎಸ್ವೈ ನಡೆ
ಬೇರೆ-ಬೇರೆ ಕಾರಣಗಳಿಂದ ಅಸಮಾಧಾನಗೊಂಡಿರುವ ಶಾಸರು ಹಾಗೂ ಸಚಿವರುಗಳನ್ನು ಸಮಾಧಾನಪಡಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮುಂದಾಗಿದ್ದಾರೆ.
ಬೆಂಗಳೂರು, (ಫೆ.01): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಚಿವರಿಗೆ ಮತ್ತು ಬಿಜೆಪಿ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದಾರೆ.
ನಾಳೆ ಅಂದ್ರೆ ಮಂಗಳವಾರ (ಫೆ.02) ತಮ್ಮ ಸರ್ಕಾರಿ ನಿವಾಸದಲ್ಲಿ ಸಿಎಂ, ಸಚಿವರಿಗೆ ಮತ್ತು ಬಿಜೆಪಿ ಶಾಸಕರಿಗೆ ಸಿಎಂ ನಿವಾಸದಲ್ಲಿ ಡಿನ್ನರ್ ಪಾರ್ಟಿ ಆಯೋಜಿಸಿದ್ದು, ಕುತೂಹಲ ಮೂಡಿಸಿದೆ.
ಅಚ್ಚರಿ ಮೂಡಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಈ ದಿಢೀರ್ ನಿರ್ಧಾರ..!
ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಈ ಡಿನ್ನರ್ ಪಾರ್ಟಿ ಕೊಡುತ್ತಿದ್ದಾರೆ ಎನ್ನಲಾಗಿದೆ.
ಕೆಲವರು ತಮ್ಮ ಕ್ಷೇತ್ರಕ್ಕೆ ಅನುದಾನ ಸಿಗ್ತಿಲ್ಲ ಅಂತ ಅಸಮಾಧಾನಗೊಂಡಿದ್ದಾರೆ. ಇನ್ನು ಕೆಲವರು ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿದ್ದಾರೆ. ಅಲ್ಲದೇ ಖಾತೆ ಹಂಚಿಕೆ ಬಗ್ಗೆಯೂ ಸಿಎಂ ಮೇಲೆ ಬೇಸರಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಎಂ ಔತಣಕೂಟದ ಮೂಲಕ ಎಲ್ಲರನ್ನೂ ಸಮಾಧಾನಗೊಳಿಸಲು ಮುಂದಾಗಿದ್ದಾರೆ. ಅಲ್ಲದೇ ಮುಂದೆ ರಾಜ್ಯ ಬಿಜೆಟ್ ಇರುವುದರಿಂದ ಎಲ್ಲರನ್ನು ಗಣನೆಗೆ ತೆಗೆದುಕೊಳ್ಳಲು ಈ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ತಿಳಿದುಬಂದಿದೆ.