ಲಿಂಗಾಯತ ಸಮುದಾಯದಲ್ಲಿ ತುಂಬಾ ಜನ ಮುಖ್ಯಮಂತ್ರಿಗಳು ಆಗಿ ಹೋಗಿದ್ದಾರೆ. ಆದರೆ, ಬಸವರಾಜ ಬೊಮ್ಮಾಯಿಯಂಥ ಭ್ರಷ್ಟಮುಖ್ಯಮಂತ್ರಿಯನ್ನು ನಾನು ನೋಡಿರಲಿಲ್ಲ. ಲಿಂಗಾಯತರಿಗೆ ಕಳಂಕ ತಂದ ಬೊಮ್ಮಾಯಿ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಕಾಗವಾಡ (ಏ.27) : ಲಿಂಗಾಯತ ಸಮುದಾಯದಲ್ಲಿ ತುಂಬಾ ಜನ ಮುಖ್ಯಮಂತ್ರಿಗಳು ಆಗಿ ಹೋಗಿದ್ದಾರೆ. ಆದರೆ, ಬಸವರಾಜ ಬೊಮ್ಮಾಯಿಯಂಥ ಭ್ರಷ್ಟಮುಖ್ಯಮಂತ್ರಿಯನ್ನು ನಾನು ನೋಡಿರಲಿಲ್ಲ. ಲಿಂಗಾಯತರಿಗೆ ಕಳಂಕ ತಂದ ಬೊಮ್ಮಾಯಿ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

Add Asianetnews Kannada as a Preferred SourcegooglePreferred

ಉಗಾರ ಖುರ್ದ ಪಟ್ಟಣದಲ್ಲಿ ಕಾಗವಾಡ ವಿಧಾನಸಭಾ ಮತಕ್ಷೇತ್ರ(Kagavada assembly constituency)ದಲ್ಲಿ ಮಂಗಳವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ(CM Basavaraj Bommai)ಯಷ್ಟುಭ್ರಷ್ಟನನ್ನು ನಾನು ನೋಡೇ ಇಲ್ಲ ಎಂದು ಹೇಳಿದ್ದೇನೆ. ಆ ಹೇಳಿಕೆಯನ್ನು ತಿರುಚಿ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ವಿರುದ್ಧ ಲಿಂಗಾಯತರ ಎತ್ತಿ ಕಟ್ಟುವ ಯತ್ನ: ಸಿದ್ದರಾಮಯ್ಯ

ಮಾಜಿ ಡಿಸಿಎಂ ಲಕ್ಷ್ಮಣ ಸವದಿ(DCM Laxman savadi)ಯವರು ಕಾಂಗ್ರೆಸ್‌ ಪಕ್ಷಕ್ಕೆ ಬಂದ ಮೇಲೆ ಈ ಭಾಗದ ಮಾಜಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಅಧ್ಯಕ್ಷರು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬಿಜೆಪಿಯನ್ನು ತೊರೆದು ಇಂದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. ನಿಮ್ಮೆಲ್ಲರನ್ನು ನಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತೇವೆ. ಇಲ್ಲಿ ಮೂಲ, ವಲಸಿಗ ಎಂಬ ಭೇದ-ಭಾವ ಮಾಡದೇ ಶ್ರಮಿಸಿ. ಮುಂದೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಆಗ ನಿಮಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ಭರವಸೆ ನೀಡಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ 7 ಕೆಜಿ ಅಕ್ಕಿ ಕೊಡುತ್ತಿದ್ದೆ. ಈ ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ 5 ಕೆಜಿಗೆ ಇಳಿಸಿದ್ದಾರೆ. ಮತ್ತೆ ನಮ್ಮ ಸರ್ಕಾರ ಬಂದ ಮೇಲೆ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ನಿಮ್ಮೆಲ್ಲರಿಗೊಂದು ನೋವಿತ್ತು. 20 ವರ್ಷಗಳ ಕಾಲ ರಾಜು ಕಾಗೆ ನಾನು ಜೋಡೆತ್ತಿನ ಹಾಗೆ ನಿಂತಿದ್ವಿ. ಅನಿವಾರ್ಯ ಕಾರಣಗಳಿಂದ ಒಂದು ಎತ್ತು ಒಂದು ಕೋಣ ಹೂಡಿ ಹೂಡಿದ್ದರು. ಈಗ ಸಿದ್ದರಾಮಯ್ಯನವರು ನಮ್ಮನ್ನು ಕರೆತಂದು ಜೋಡೆತ್ತುಗಳನ್ನು ಹೂಡಿದ್ದಾರೆ. ಈ ಚುನಾವಣೆಯಲ್ಲಿ ಜೋಡೆತ್ತುಗಳು ಅಖಾಡಕ್ಕಿಳಿದಿವೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕಿ ಲಕ್ಷ್ಮೇ ಹೆಬ್ಬಾಳಕರ, ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿದರು. ವೇದಿಕೆಯ ಮೇಲೆ ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಮೋಹನರಾವ್‌ ಶಹಾ, ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಮುಖಂಡರಾದ ದಿಗ್ವಿಜಯ ಪವಾರ ದೇಸಾಯಿ, ಚಂದ್ರಕಾಂತ ಇಮ್ಮಡಿ, ಗಜಾನನ ಮಂಗಸೂಳಿ, ಅರುಣಕುಮಾರ ಯಲಗುದ್ರಿ, ಡಾ.ಮಗದುಮ್‌, ಎಸ್‌.ಕೆ.ಬುಟಾಳೆ, ಶಾಮ್‌ ಪೂಜಾರಿ, ವಸಂತ ಖೋತ, ವಿಶ್ವನಾಥ ಪಾಟೀಲ, ವಿಜಯಕುಮಾರ ಅಕಿವಾಟೆ, ಓಂಪ್ರಕಾಶ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಶೆಟ್ಟರ್‌ರನ್ನು ಆಚೆ ತಳ್ಳಿದ್ರು, ಯಡಿಯೂರಪ್ಪರನ್ನು ಕಣ್ಣೀರು ಹಾಕ್ಸಿದ್ರು: ಬಿಜೆಪಿ ವಿರುದ್ಧ ಸಿದ್ದು ವಾಗ್ದಾಳಿ

ಕಾಂಗ್ರೆಸ್‌ ಸೇರ್ಪಡೆ

ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರಿಗೆ ಅಥಣಿ ಕ್ಷೇತ್ರ(Athani constituency)ದ ಟಿಕೆಟ್‌ ಕೊಡದ ಹಿನ್ನೆಲೆಯಲ್ಲಿ ಕಾಗವಾಡ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ವಿನಾಯಕ ಬಾಗಡಿ, ರವೀಂದ್ರ ಪೂಜಾರಿ, ಅಜೀತ ಚೌಗುಲಾ, ದೂದಗಂಗಾ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಣ್ಣಾಸಾಬ್‌ ಪಾಟೀಲ, ಕೃಷ್ಣಾ ಸಕ್ಕರೆ ಕಾರ್ಖಾನೆಯ ನಿರ್ದೇಶಕ ವಿಶ್ವನಾಥ ಪಾಟೀಲ, ಮಾಜಿ ತಾಪಂ ಅಧ್ಯಕ್ಷರಾದ ಶಿದರಾಯ ತೇಲಿ, ನಿಜಗುಣಿ ಮಗದುಮ್‌, ಮಾಜಿ ತಾಲೂಕು ಪಂಚಾಯತಿ ಸದಸ್ಯ ಶಿವಾನಂದ ಗೊಲಬಾವಿ, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ರಾಜಗೌಡ ಪಾಟೀಲ, ಮುಖಂಡರಾದ ಶಿವಾನಂದ ಐಗಳಿ(ಅಥಣಿ), ಶಂಕರ ಪಾಟೀಲ, ಬಾಳಾಸಾಹೇಬ್‌ ರಾವಬಸಗೌಡ ಪಾಟೀಲ, ಸಿದರಾಯ ಕಾಳೇಲಿ, ಕಾಮಣ್ಣ ಹೊನಕಾಂಡೆ, ಸತೀಶ ಮುಧವಿ ಸೇರಿದಂತೆ ನೂರಾರು ಮುಖಂಡರು ಬಿಜೆಪಿ ತೊರೆದು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.