ಯಡಿಯೂರಪ್ಪ ಅವರನ್ನು ಬಲವಂತದಿಂದ ಮುಖ್ಯಮಂತ್ರಿ ಹುದ್ದೆಯಿಂದ ತೆಗೆದುಹಾಕಿದ್ದಾರೆ. ಅವರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದಲ್ಲ. ಅವರನ್ನು ಕೂಡ ಹೆದರಿಸಿದ್ದಾರೆ. ಅವರ ಕಣ್ಣಲ್ಲಿ ನೀರು ಹಾಕಿಸಿದರು. ಆರ್‌ಎಸ್‌ಎಸ್‌ನವರ ಕೈಗೊಂಬೆಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಿದರು. ಈ ಸರ್ಕಾರ ಅಲಿಬಾಬಾ ಮತ್ತು 40 ಮಂದಿ ಕಳ್ಳರ ಗುಂಪು ಎಂದು ದೂರಿದ ಸಿದ್ದರಾಮಯ್ಯ. 

ಬೆಳಗಾವಿ(ಏ.25):  ನಾವು ಮಾಡಿದ್ದ ಎಲ್ಲಾ ಕೆಲಸಗಳನ್ನು ಈ ಸರ್ಕಾರ ಹಾಳುಮಾಡಿದೆ. ಜಗದೀಶ್‌ ಶೆಟ್ಟರ್‌ ಅವರನ್ನು ಆಚೆ ತಳ್ಳಿದ್ದಾರೆ. ಇಂಥವರು ಯಾರಿಗೆ ರಕ್ಷಣೆ ಕೊಡುತ್ತಾರೆ? ಯಾರಿಗೆ ಗೌರವ ಕೊಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಳಗಾವಿ ಜಿಲ್ಲೆಯ ನಾನಾ ಕ್ಷೇತ್ರಗಳಲ್ಲಿ ಸೋಮವಾರ ಪ್ರಚಾರ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಬಲವಂತದಿಂದ ಮುಖ್ಯಮಂತ್ರಿ ಹುದ್ದೆಯಿಂದ ತೆಗೆದುಹಾಕಿದ್ದಾರೆ. ಅವರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದಲ್ಲ. ಅವರನ್ನು ಕೂಡ ಹೆದರಿಸಿದ್ದಾರೆ. ಅವರ ಕಣ್ಣಲ್ಲಿ ನೀರು ಹಾಕಿಸಿದರು. ಆರ್‌ಎಸ್‌ಎಸ್‌ನವರ ಕೈಗೊಂಬೆಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಿದರು. ಈ ಸರ್ಕಾರ ಅಲಿಬಾಬಾ ಮತ್ತು 40 ಮಂದಿ ಕಳ್ಳರ ಗುಂಪು ಎಂದು ದೂರಿದರು.

ಶೆಟ್ಟರ್ ಬೇರೆ ಟೀಂ ಸೇರಿದ್ರೂ ಈ ಸಲವೂ ಕಪ್‌ ನಮ್ದೆ; ಪ್ರಲ್ಹಾದ್ ಜೋಶಿ

ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ನಮಗೆ ಇನ್ನೊಂದು ಅವಕಾಶ ಮಾಡಿಕೊಡಿ. ಒಂದೆರಡು ದಿನಗಳಲ್ಲಿ ನಮ್ಮ ಪ್ರಣಾಳಿಕೆ ಬಿಡುಗಡೆಯಾಗುತ್ತದೆ. ಇದರಲ್ಲಿ ನಾವು 4 ಪ್ರಮುಖ ಭರವಸೆಗಳನ್ನು ನೀಡಿದ್ದೇವೆ ಎಂದ ಅವರು, ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಕರ್ನಾಟಕ ಅನುದಾನಿತ ಶಿಕ್ಷಣ ಸಂಸ್ಥೆಗಳು (ರುಪ್ಸಾ) ದವರು ದೇಶದ ಪ್ರಧಾನಿಗಳಿಗೆ, ಮುಖ್ಯಮಂತ್ರಿಗಳಿಗೆ ನಾವು ಶೇ.40 ಕಮಿಷನ್‌ ಕೊಡಬೇಕಾಗಿದೆ. ಹಿಂದೆಂದೂ ಹೀಗೆ ಕಮಿಷನ್‌ ಕೇಳುವ ಸರ್ಕಾರ ಬಂದಿರಲಿಲ್ಲ ಎಂದು ಪತ್ರ ಬರೆದಿದ್ದರು. ರಾಜ್ಯದ ಇತಿಹಾಸದಲ್ಲಿ ಮೊಟ್ಟಬಾರಿಗೆ ಬಾರಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಪರ ಸುನಾಮಿ ಅಲೆ ಎದ್ದಿದ್ದು ಅಧಿಕಾರದ ಚುಕ್ಕಾಣಿ ಹಿಡಿಯುವುದು ಶತಃಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಬೊಮ್ಮಾಯಿ ಅವರಿಂದ ಬೀದಿ ಗಲ್ಲಿಗಳಲ್ಲಿ, ಕಚೇರಿಗಳಲ್ಲಿ ಶೇ.40 ರಷ್ಟು ಸರಕಾರ ಎಂದು ಮಾತನಾಡುವಂತಾಗಿದೆ. ರೈತರಿಗೆ ನ್ಯಾಯಯುತ ಬೆಲೆ ಕೊಡಲಿಕ್ಕಾಗಲಿಲ್ಲ. ಪ್ರವಾಹ, ಕೊರೋನಾ ಸಂದರ್ಭದಲ್ಲಿ ಇತ್ತ ಸುಳಿಯಲಿಲ್ಲ. ಈಗ ಚುನಾವಣೆ ಬಂದಿದೆ. ರೋಡ್‌ ಶೋ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಮತದಾರರ ಮುಂದೆ ಹೊಗಲಿಕ್ಕೆ ಮುಖವಿಲ್ಲ. ಅವರಿಗೆ ನಾಚಿಕೆಯಾಗಬೇಕು ಎಂದರು.