ಕಾಂಗ್ರೆಸ್‌ ಪಕ್ಷದವರದ್ದು ಹೆಜ್ಜೆ ಹೆಜ್ಜೆಗೂ ಹಗರಣಗಳಿವೆ. ಆ ಪಕ್ಷದ ಮುಖಂಡರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದ್ದಾರೆ.

ಬೆಂಗಳೂರು (ಸೆ.24): ಕಾಂಗ್ರೆಸ್‌ ಪಕ್ಷದವರದ್ದು ಹೆಜ್ಜೆ ಹೆಜ್ಜೆಗೂ ಹಗರಣಗಳಿವೆ. ಆ ಪಕ್ಷದ ಮುಖಂಡರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದ್ದಾರೆ. ಶುಕ್ರವಾರ ವಿಧಾನಮಂಡಲದ ಅಧಿವೇಶನ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಭ್ರಷ್ಟಾಚಾರದ ಬಗ್ಗೆ ಪಕ್ಷದ ವತಿಯಿಂದ ಪುಸಕ್ತವನ್ನೇ ಬಿಡುಗಡೆ ಮಾಡಿದ್ದೆವು. ಅವರು ಭ್ರಷ್ಟರಾಗಿದ್ದುಕೊಂಡು ಅಭಿಯಾನ ಮಾಡುತ್ತಾರಂತೆ. ಯಾವ ಅಭಿಯಾನವನ್ನಾದರೂ ಮಾಡಲಿ. ಕೊನೆಗೆ ಸತ್ಯಕ್ಕೆ ಜಯ ಸಿಗಲಿದೆ ಎಂದು ತೀಕ್ಷ್ಣವಾಗಿ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಒಂದು ಸಣ್ಣ ಪುರಾವೆ ಇಲ್ಲದೆ ಮಾತನಾಡುವ ಈ ಪ್ರವೃತ್ತಿ ಬಹಳ ದಿನ ನಡೆಯುವುದಿಲ್ಲ. ಗುತ್ತಿಗೆದಾರರ ಸಂಘದ ವಿಷಯದಲ್ಲಿ ಈಗಾಗಲೇ ಉತ್ತರ ನೀಡಲಾಗಿದೆ. ಒಂದು ವಿಚಾರವನ್ನು ಪದೇ ಪದೇ ಹೇಳಿದರೆ ಅದು ಸತ್ಯವಾಗುವುದು ಎಂಬಂತೆ ಕಾಂಗ್ರೆಸ್‌ ತಿಳಿದುಕೊಂಡಂತಿದೆ. ಆ ಕಾಲ ಹೋಗಿದೆ. ಜನಕ್ಕೆ ಸತ್ಯ ಏನೆಂದು ತಿಳಿದಿದೆ. ಒಂದು ವರ್ಷದ ಹಿಂದೆ ಸಂಘ ಪತ್ರ ಬರೆದಿದೆ. ಒಂದು ಸಣ್ಣ ದೂರು ದಾಖಲಿಸಿ ಅದಕ್ಕೆ ಸೂಕ್ತ ದಾಖಲೆಗಳನ್ನು ನೀಡಿದರೂ ಅದರ ಬಗ್ಗೆ ತನಿಖೆಗೆ ಆದೇಶಿಸಲಾಗುವುದು ಹಾಗೂ ಲೋಕಾಯುಕ್ತಕ್ಕೆ ನೇರವಾಗಿ ಪ್ರಕರಣವನ್ನು ವಹಿಸಲಾಗುವುದು’ ಎಂದು ತಿಳಿಸಿದರು.

ಜೆಡಿಎಸ್‌ ಅಹೋರಾತ್ರಿ ಧರಣಿ ವಾಪಸ್: ಸಿಎಂ ಬೊಮ್ಮಾಯಿ ಮನವೊಲಿಕೆ

40 ಪರ್ಸೆಂಟ್‌ ಕಮಿಷನ್‌ ಎಂದರೆ ಯಾರು ಕೊಟ್ಟಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಹೇಳಬೇಕು. ನಾವು ಕೇಳುವುದಕ್ಕೆ ತಯಾರಿದ್ದೇವೆ. ಚರ್ಚೆಯಾಗಲಿ ಎಂದೇ ನಾವೂ ಸದನದಲ್ಲಿ ಕೂತಿದ್ದೆವು. ಆದರೆ ಈ ವಿಷಯ ಕೊನೆಗೆ ಯಾಕೆ ತೆಗೆದುಕೊಂಡರು? ಕಳೆದ ವಾರವೇ ತೆಗೆದುಕೊಳ್ಳಬಹುದಾಗಿತ್ತು. ವಿರೋಧಪಕ್ಷದ ನಾಯಕರು ಯಾವತ್ತಾದರೂ ತೆಗೆದುಕೊಳ್ಳಬಹುದು. ಅವರಿಗೆ ಅಧಿಕಾರವಿದೆ’ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‌ ಪ್ರಾಯೋಜಿತ ಗುತ್ತಿಗೆದಾರರ ಸಂಘ: ಗುತ್ತಿಗೆದಾರರ ಸಂಘವು ಕಾಂಗ್ರೆಸ್‌ ಪ್ರಾಯೋಜಿತ ಸಂಘ. ಹೀಗಾಗಿ ಕಾಂಗ್ರೆಸ್ಸಿಗೆ ಇದರಲ್ಲಿ ಹುರುಳಿಲ್ಲ ಎಂಬುದು ಚೆನ್ನಾಗಿ ಗೊತ್ತಿದೆ ಎಂದು ಇದೇ ವೇಳೆ ಮುಖ್ಯಮಂತ್ರಿಗಳು ತೀಕ್ಷ್ಣವಾಗಿ ಹೇಳಿದರು. ‘ಈ ವಿಚಾರದಲ್ಲಿ ನಾವು ಮುಕ್ತವಾಗಿದ್ದೇವೆ. ದಯವಿಟ್ಟು ದೂರು ಕೊಡಿ. ಒಬ್ಬ ಕೆಂಪಣ್ಣನವರು ಗುತ್ತಿಗೆದಾರರ ಸಂಘದ ಅಧ್ಯಕ್ಷರು. ಆ ಸಂಘದ ಬಗ್ಗೆಯೇ ಬಹಳಷ್ಟುಸಂಶಯಗಳಿವೆ. ಯಾವುದೇ ಆಧಾರವಿಲ್ಲದೇ ಕಳೆದ ಒಂದು ವರ್ಷದಿಂದ ಈ ರೀತಿ ರಾಜಕೀಯ ಹೇಳುವ ಗುತ್ತಿಗೆದಾರರ ಸಂಘದ ಅಧ್ಯಕ್ಷರು, ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಚೀಟಿಯನ್ನೂ ಕೊಡದಿರುವಂಥವರು. 

ಇನ್ನೊಂದೆಡೆ, ಜಸ್ಟಿಸ್‌ ಕೆಂಪಣ್ಣ ಇದ್ದಾರೆ. ಅವರು ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ನ್ಯಾಯಾಂಗ ಆಯೋಗದ ಅಧ್ಯಕ್ಷರಾಗಿದ್ದರು. ಅವರು ಆಗಲೇ ವರದಿ ನೀಡಿದ್ದಾರೆ (ಅರ್ಕಾವತಿ ರಿಡೂ ಹಗರಣ ಬಗ್ಗೆ). ಇದರ ಬಗ್ಗೆ ಚರ್ಚೆಯಾಗಬೇಕು. ನ್ಯಾ ಕೆಂಪಣ್ಣ ಅವರು ತನಿಖೆ ಮಾಡಿ ವರದಿಯನ್ನು ನ್ಯಾಯಾಂಗ ಆಯೋಗಕ್ಕೆ ನೀಡಿದರು. ಅವರ ಬಗ್ಗೆ ನಮಗೆ ಕಳಕಳಿ, ಗೌರವ ಇದೆ. ಅದರ ಬಗ್ಗೆ ಚರ್ಚೆ ಮಾಡಬೇಕು. ನಾವು ಚರ್ಚೆಗೆ ಸಿದ್ಧ’ ಎಂದರು.

ಇಂದು ಭ್ರಷ್ಟಾಚಾರಿಗಳ ಹೆಸರು ಬಯಲು: ಕಾಂಗ್ರೆಸ್‌ಗೆ ತಿರುಗೇಟು ಕೊಟ್ಟ ಸಿಎಂ

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ನಿರ್ದಿಷ್ಟಪ್ರಕರಣದ ಬಗ್ಗೆ ದಾಖಲೆ ನೀಡಿದರೆ ತನಿಖೆ ಮಾಡುತ್ತೇವೆ. ಲೋಕಾಯುಕ್ತ ಸಂಸ್ಥೆ ನ್ಯಾಯಾಂಗದವರೇ ಮುಖ್ಯಸ್ಥರು. ಅಲ್ಲಿಗೇ ಕೊಡಲಿ. ಅಲ್ಲಿ ತನಿಖೆ ನಾಳೆಯೇ ಪ್ರಾರಂಭವಾಗುತ್ತದೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ