ಸಿಂಹ ಹೇಗೆ ಸಶಕ್ತವಾಗಿ ಗರ್ಜನೆ ಮಾಡುವಂತಿರುತ್ತದೆಯೋ ಅದು ನಮ್ಮ ಸಿಂಹ. ಕಾಂಗ್ರೆಸ್‌ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡಿದೆ. ಕಾಂಗ್ರೆಸ್‌ನ ಸಂಸ್ಕೃತಿ ಹೇಗೋ ಸಿಂಹ ಹಾಗೆಯೇ ಕಾಣುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಉಡುಪಿ (ಜು.14): ಸಿಂಹ ಹೇಗೆ ಸಶಕ್ತವಾಗಿ ಗರ್ಜನೆ ಮಾಡುವಂತಿರುತ್ತದೆಯೋ ಅದು ನಮ್ಮ ಸಿಂಹ. ಕಾಂಗ್ರೆಸ್‌ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡಿದೆ. ಕಾಂಗ್ರೆಸ್‌ನ ಸಂಸ್ಕೃತಿ ಹೇಗೋ ಸಿಂಹ ಹಾಗೆಯೇ ಕಾಣುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ದೆಹಲಿಯ ನೂತನ ಸಂಸತ್‌ ಭವನದ ಮೇಲೆ ನಿರ್ಮಿಸಲಾಗಿರುವ ರಾಷ್ಟ್ರಲಾಂಛನ ಸಿಂಹಗಳ ಉಗ್ರ ಹಾವಭಾವಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಮಾಡುತ್ತಿರುವ ಟೀಕೆಗೆ ಬುಧವಾರ ಪ್ರತಿಕ್ರಿಯಿಸಿದರು.

Add Asianetnews Kannada as a Preferred SourcegooglePreferred

ಈ ಲಾಂಛನ ಬಗ್ಗೆ ಈಗಾಗಲೇ ಸ್ಪಷ್ಟನೆ ಕೊಡಲಾಗಿದೆ. ಸಾರನಾಥದಲ್ಲಿರುವ ಅಶೋಕ ಸ್ತಂಭದಲ್ಲಿರುವ ಸಿಂಹಗಳನ್ನು ಈ ಲಾಂಛನದಲ್ಲಿ ಅನುಕರಿಸಲಾಗಿದೆ. ಆದರೆ ವಿರೋಧ ಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಈ ವಿಷಯವನ್ನು ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಹೇಳಿದರು. ಈ ಲಾಂಛನದಲ್ಲಿರುವ ಸಿಂಹಗಳು ನಾವು ನೋಡುವ ದೃಷ್ಟಿಯಂತೆ ಕಾಣುತ್ತವೆ. ವ್ಯಗ್ರವಾಗಿವೆ, ಉಗ್ರವಾಗಿವೆ ಎಂಬುದು ನೋಡುವ ದೃಷ್ಟಿಕೋನ ಸೂಚಿಸುತ್ತದೆ. ಕಾಂಗ್ರೆಸ್‌ ನೋಡುವ ದೃಷ್ಟಿಬೇರೆ, ನಾವು ನೋಡುವ ದೃಷ್ಟಿಯೇ ಬೇರೆ ಎಂದವರು ಹೇಳಿದರು.

ಕೊನೆಗೂ ನಿಗಮ ಮಂಡಳಿ ನೇಮಕಾತಿ ರದ್ದು; ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ಮಳೆ ಸಂತ್ರಸ್ತರ ಮನೆ ನಿರ್ಮಾಣ ವಿಳಂಬ: ಜಿಲ್ಲೆಯಲ್ಲಿ 3 ವರ್ಷಗಳಲ್ಲಿ ಮಳೆಯಿಂದ ಮನೆ ಕಳೆದುಕೊಂಡವವರಿಗೆ ಹೊಸ ಮನೆಗಳ ನಿರ್ಮಾಣಕ್ಕೆ ರಾಜೀವ್‌ ಗಾಂಧಿ ವಸತಿ ನಿಗಮದ ಸೌಲಭ್ಯವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಇರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಬುಧವಾರ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಧಿಕಾರಿಗಳ ಮಳೆಹಾನಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಎಂಜಿನಿಯರ್‌ಗಳು ಸಕಾಲದಲ್ಲಿ ನಿಗಮಕ್ಕೆ ವರದಿ ನೀಡದಿರುವುದರಿಂದ ಅತಿವೃಷ್ಟಿ ಸಂತ್ರಸ್ತರಿಗೆ ಹೊಸ ಮನೆಗಳ ನಿರ್ಮಾಣದಲ್ಲಿ ವಿಳಂಬವಾಗಿದೆ. ಮುಂದೆ ಹೀಗಾಗದಂತೆ ಎಚ್ಚರವಹಿಸಬೇಕು. ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಬೇಕು ಎಂದವರು ಕಟ್ಟುನಿಟ್ಟು ಸೂಚನೆ ನೀಡಿದರು. ಗದ್ದೆಗಳಲ್ಲಿ ನೀರು ತುಂಬಿಕೊಂಡು ಆಗಿರುವ ಬೆಳೆ ಹಾನಿಯ ಬಗ್ಗೆ 2 ದಿನಗಳೊಳಗಾಗಿ ಹಾಗೂ ತೋಟಗಾರಿಕಾ ಬೆಳೆಗಳ ಹಾನಿಯನ್ನು 10 ದಿನಗಳೊಳಗಾಗಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಸಿಎಂ ಹೇಳಿದರು. 

ಮಳೆಗಾಳಿಗೆ ವಿದ್ಯುತ್‌ ಕಂಬ, ವಿದ್ಯುತ್‌ ಲೈನ್‌ಗಳು ಹಾಳಾಗುವುದು ನಿರೀಕ್ಷಿತ, ಆದ್ದರಿಂದ ಅವುಗಳನ್ನು ದಾಸ್ತಾನು ಇಟ್ಟು 2 ದಿನಗಳಲ್ಲಿ ಒಳಗಾಗಿ ಅವುಗಳನ್ನು ಮರುಸ್ಥಾಪಿಸಬೇಕು ಎಂದು ಮೆಸ್ಕಾಂ ಆಧಿಕಾರಿಗಳಿಗೆ ಸೂಚನೆ ನೀಡಿದರು. ಜಲವಲಯಗಳ ವ್ಯಾಪ್ತಿಗೆ ಬರುವಂತಹ ಪ್ರದೇಶದಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ಹಾನಿಗೊಳಗಾದರೇ ಪರಿಹಾರ ನೀಡಬಾರದು ಎಂದು ನ್ಯಾಯಾಲಯದ ಆದೇಶಗಳು ಸ್ಪಷ್ಟಪಡಿಸಿವೆ. ಜಲ ವಲಯಗಳ ವ್ಯಾಪ್ತಿಯನ್ನು ಗುರುತಿಸುವಾಗ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. 

ಮಳೆ ಹಾನಿ ಪ್ರದೇಶಕ್ಕೆ ಇಂದು, ನಾಳೆ ಸಿಎಂ ಬೊಮ್ಮಾಯಿ ಭೇಟಿ: ಪರಿಶೀಲನೆ

ಸಭೆಯಲ್ಲಿ ಕಂದಾಯ ಸಚಿವ ಆರ್‌. ಅಶೋಕ್‌, ಬಂದರು - ಮೀನುಗಾರಿಕಾ ಸಚಿವ ಸಚಿವ ಎಸ್‌. ಅಂಗಾರ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಂಗಳೂರು ಮೇಯರ್‌ ಪ್ರೇಮಾನಂದ ಶೆಟ್ಟಿಹಾಗೂ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಶಾಸಕರುಗಳು, ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.