ಸುರ್ಜೇವಾಲ ಹೇಳಿಕೆಗೆ ವ್ಯಾಪಕ ಖಂಡನೆ: ರಾಜ್ಯಾದ್ಯಂತ ಹನುಮಾನ್ ಚಾಲೀಸಾ ಪಠಣ
ರಾಜ್ಯದ ಹಲವೆಡೆ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದ ರಾಮಮಂದಿರದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಲಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಮಮಂದಿರ ದೇವಸ್ಥಾನಕ್ಕೆ ಆಗಮಿಸಿ ರಾಮ ಹಾಗೂ ಆಂಜನೇಯ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಹನುಮಾನ್ ಚಾಲೀಸಾ ಪಠಿಸಿದ್ದಾರೆ.
ಬೆಂಗಳೂರು(ಮೇ.04): ಹನುಮಾನ್ ಚಾಲೀಸಾ ಹೇಳೋಕೆ ಬರೋದಿಲ್ಲ ಅಂತ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿಕೆಯನ್ನ ಸವಾಲಾಗಿ ಸ್ವೀಕರಿಸಿದ ಭಜರಂಗದಳ ಹಾಗೂ ಬಿಜೆಪಿ ಮುಖಂಡರು ಇಂದು(ಗುರುವಾರ) ರಾಜ್ಯದ ಹಲವೆಡೆ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದ ರಾಮಮಂದಿರದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಲಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಮಮಂದಿರ ದೇವಸ್ಥಾನಕ್ಕೆ ಆಗಮಿಸಿ ರಾಮ ಹಾಗೂ ಆಂಜನೇಯ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಹನುಮಾನ್ ಚಾಲೀಸಾ ಪಠಿಸಿದ್ದಾರೆ.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಇಂದು ನಾವು ಹನುಮಾನ್ ಚಾಲೀಸಾ ಪಠಿಸಿ ನಮ್ಮ ಭಕ್ತಿಯನ್ನ ತೋರಿಸಿದ್ದೇವೆ. ಯಾರೋ ರಾಮನ ವಿರೋಧಿಗಳು, ನಮಗೆ ಸವಾಲು ಹಾಕಿದ್ರು, ನಿಮಗೆ ಹನುಮಾನ ಚಾಲೀಸಾ ಬರುತ್ತಾ..? ಅಂತ ಆಂಜನೇಯನ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ರು. ಇಡೀ ರಾಜ್ಯದಲ್ಲಿ ನಾವು ಹನುಮಾನ ಚಾಲೀಸಾ ಪಠಿಸುತ್ತಿದ್ದೇವೆ. ನಮ್ಮ ಹಂಪಿ ಹನುಮ ಓಡಾಡಿದ ನಾಡು, ಹನುಮಾನ್ ನಾಡಲ್ಲಿ ತಪ್ಪು ಸಂದೇಶ ಕೊಡುವಂತ, ಹನುಮ ನಮ್ಮ ನಾಡಲ್ಲಿ ಹುಟ್ಟಿಲ್ಲ ಎಂಬ ತಪ್ಪು ಮಾಹಿತಿ ನೀಡಿದ್ರು. ಆಂಜನೇಯ ಹಾಗೂ ರಾಮನ ವಿರೋಧಿ ಇದಾರೆ. ಇದನ್ನ ಕೇಳಿಸಿಕೊಳ್ಳಿ, ನಾವು ಸರಿಯಾದ ಉತ್ತರ ಕೊಡಬೇಕು. ವಿಶ್ವ ಹಿಂದೂ ಪರಿಷತ್ ಇದೆ, ನಾವು ನಿಮ್ಮ ಜೊತೆಗಿದ್ದೇವೆ. ನಾವೆಲ್ಲರೂ ಬಜರಂಗಿಗಳು, ನಾವು ಹನುಮನ ನಾಡಿನಲ್ಲಿ ಇದ್ದೇವೆ ಅಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಹನುಮ ದೇಗುಲಗಳ ಕೆಡವಿಸಿದ ಬಿಜೆಪಿ: ರಣದೀಪ್ ಸುರ್ಜೇವಾಲಾ ಕಿಡಿ
ಬೆಳಗಾವಿಯಲ್ಲಿ ಹನುಮಾನ್ ಚಾಲೀಸಾ ಪಠಣ
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ಅಂಶವನ್ನು ಪ್ರಕಟಿಸಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಹನುಮಾನ್ ಚಾಲೀಸಾ ಪಾರಾಯಣ ಮಾಡಲು ವಿಶ್ವ ಹಿಂದು ಪರಿಷದ್ ಮತ್ತು ಬಜರಂಗದಳ ನೀಡಿದ ಕರೆಗೆ ಬೆಳಗಾವಿಯಲ್ಲಿಯೂ ಬೆಂಬಲ ವ್ಯಕ್ತವಾಗಿದೆ.
ನಗರದ ಖಡೇಬಜಾರ್ದಲ್ಲಿರುವ ಹನುಮಾನ ಮಂದಿರದ ಬಳಿ ಸಂಜೆ ವಿಶ್ವ ಹಿಂದು ಪರಿಷದ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಹನುಮಾನ್ ಚಾಲೀಸಾ ಪಾರಾಯಣ ಮಾಡಲಾಯಿತು. ಸಜ್ಜನ ಶಕ್ತಿಯ ಜಾಗೃತಿಗಾಗಿ, ಧರ್ಮ ಸಂಸ್ಕೃತಿಗಳರಕ್ಷಣೆಗಾಗಿ ಮತ್ತು ಹಿಂದುತ್ವದ ವಿಜಯಕ್ಕಾಗಿ ಸಂಕಲ್ಪವನ್ನು ಮಾಡಿದರು.
ಇನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಿತ್ಯಾನಂದ ಮಠದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹನುಮಾನ್ ಚಾಲೀಸಾ ಓದಿದರು.